ಭೂಕಂಪ, ಚಂಡಮಾರುತ ಮುಂತಾದ ಪ್ರಾಕೃತಿಕ ವಿಕೋಪಗಳ ಬಗ್ಗೆ ನಿಖರ ಮಾಹಿತಿ ನೀಡುವ ಸೂಪರ್‌ ಕಂಪ್ಯೂಟರ್‌ಗಳು ದೇಶದ ಆರ್ಥಿಕತೆಗೆ ಅತ್ಯಂತ ಸಹಾಯಕಾರಿಯಾಗಿವೆ ಎಂದು ಸೆಂಟರ್‌ ಫಾರ್‌ ಡೆವಲೆಪ್‌ಮೆಂಟ್‌ ಆಫ್‌ ಅಡ್ವಾನ್ಸ್ ಕಂಪ್ಯೂಟಿಂಗ್‌ ಸಂಸ್ಥೆಯ ಕಾರ್ಯನಿರ್ವಾಹಕ ಎಸ್‌.ಡಿ. ಸುದರ್ಶನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭೂಕಂಪ, ಚಂಡಮಾರುತ ಮುಂತಾದ ಪ್ರಾಕೃತಿಕ ವಿಕೋಪಗಳ ಬಗ್ಗೆ ನಿಖರ ಮಾಹಿತಿ ನೀಡುವ ಸೂಪರ್‌ ಕಂಪ್ಯೂಟರ್‌ಗಳು ದೇಶದ ಆರ್ಥಿಕತೆಗೆ ಅತ್ಯಂತ ಸಹಾಯಕಾರಿಯಾಗಿವೆ ಎಂದು ಸೆಂಟರ್‌ ಫಾರ್‌ ಡೆವಲೆಪ್‌ಮೆಂಟ್‌ ಆಫ್‌ ಅಡ್ವಾನ್ಸ್ ಕಂಪ್ಯೂಟಿಂಗ್‌ ಸಂಸ್ಥೆಯ ಕಾರ್ಯನಿರ್ವಾಹಕ ಎಸ್‌.ಡಿ. ಸುದರ್ಶನ್‌ ಹೇಳಿದರು.

ಶನಿವಾರ ನಗರದ ಮಲ್ಲತ್ತಹಳ್ಳಿಯ ಡಾ. ಅಂಬೇಡ್ಕರ್‌ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ 133ನೇ ಜಯಂತ್ಯೋತ್ಸವ ಅಂಗವಾಗಿ ಆಯೋಜಿಸಿದ್ದ 8ನೇ ರಾಷ್ಟ್ರ ಮಟ್ಟದ ತಾಂತ್ರಿಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಹಾಗೂ ಸುರಕ್ಷತೆಗೆ ತಂತ್ರಜ್ಞಾನ ಗಣನೀಯ ಕೊಡುಗೆ ನೀಡಿದೆ. ತಂತ್ರಜ್ಞಾನ ಮಾನವನ ಏಳ್ಗೆಗೆ ಹಾಗೂ ಪ್ರಕೃತಿಗೆ ಪೂರಕವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಪಾಂಚಜನ್ಯ ವಿದ್ಯಾಪೀಠ ವೆಲ್ಫೇರ್‌ ಟ್ರಸ್ಟ್‌ ಖಜಾಂಚಿ ಎಂ. ಮಹಾದೇವ್‌, ಡಾ. ಬಿ.ಆರ್.ಅಂಬೇಡ್ಕರ್ ಅವರು ಭಾರತೀಯ ಸಮಾಜವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಸರ್ವರನ್ನು ಸಮನಾಗಿ ಕಾಣುವ ಸಂವಿಧಾನ ರೂಪಿಸಿದರು. ಆದರೆ, ಅವರ ಕಾಲದಲ್ಲಿದ್ದ ಅಸ್ಪ್ರಶ್ಯತೆ, ಜಾತಿವಾದಂತಹ ಅನೇಕ ಕ್ರೂರ ಆಚರಣೆಗಳು ಇಂದಿಗೂ ಭಾರತದಲ್ಲಿರುವುದು ದುರದೃಷ್ಟಕರ ಸಂಗತಿ ಎಂದರು.

ಕಾರ್ಯದರ್ಶಿ ಶಿವಮಲ್ಲು ಅವರು, ಕೃತಕ ಬುದ್ದಿಮತ್ತೆ(ಎಐ) ತಂತ್ರಜ್ಞಾನದ ಸಂಶೋಧನೆಯು ಅಮೋಘವಾದದ್ದು. ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ಸಹಾಯಕಾರಿಯಾಗಿದೆ. ಆದರೆ ಇವುಗಳ ದುರ್ಬಳಕೆಯಿಂದ ಮಾನವ ಜನಾಂಗಕ್ಕೆ ಮಾರಕವಾಗುವ ಸಾಧ್ಯತೆಗಳು ಕೂಡ ಇವೆ ಎಂದು ಆತಂಕ ವ್ಯಕ್ತಪಡಿಸಿದರು.

ಪಾಂಚಜನ್ಯ ವಿದ್ಯಾಪೀಠ ವೆಲ್ಫೇರ್‌ ಟ್ರಸ್ಟ್‌ ಅಧ್ಯಕ್ಷ ಎಸ್. ಮರಿಸ್ವಾಮಿ, ಅಂಬೇಡ್ಕರ್‌ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ನಂಜುಂಡಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.