ಜಂಟಿ ಸರ್ವೆ ಕುರಿತು ಮಾಹಿತಿ ಕಲೆ ಹಾಕುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಮಲೆನಾಡಿನ ಅರಣ್ಯ-ಕಂದಾಯ ಭೂಮಿ ಸಮಸ್ಯೆ ಕುರಿತು ಜಂಟಿ ಸರ್ವೆಗಾಗಿ ರಾಜ್ಯ ಸರ್ಕಾರದಿಂದ ಈಗಾಗಲೇ ಟಾಸ್ಕ್ ಪೋರ್ಸ್ ಸಮಿತಿಯನ್ನು ರಚನೆ ಮಾಡಿದ್ದು, ಈ ತಂಡ ಪ್ರಸ್ತುತ ಜಿಲ್ಲೆಗೆ ಆಗಮಿಸಿ ಜಂಟಿ ಸರ್ವೆ ಕುರಿತು ಮಾಹಿತಿ ಕಲೆ ಹಾಕುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.ಕಳೆದ ಹಲವಾರು ವರ್ಷಗಳ ಬೇಡಿಕೆಯಂತೆ ರಾಜ್ಯ ಸರ್ಕಾರ ಜಂಟಿ ಸರ್ವೆ ಕುರಿತು ಟಾಸ್ಕ್ಪೋರ್ಸ್ ಸಮಿತಿಯನ್ನು ರಚನೆ ಮಾಡಿ ಆದೇಶ ಮಾಡಿದ್ದು, ರಾಜ್ಯಮಟ್ಟದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳನ್ನು ಒಳಗೊಂಡ ಒಂದು ಸಮಿತಿ, ಇನ್ನೊಂದು ಸಂಪೂರ್ಣ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಜಂಟಿ ಸರ್ವೆಯ ಟಾಸ್ಕ್ಪೋರ್ಸ್ ಸಮಿತಿ ಈ ಹಿಂದೆ ೨೦೧೬-೧೭ರಲ್ಲಿ ರದ್ದಾಗಿದ್ದು, ನಾವು ಸತತವಾಗಿ ಹೋರಾಟ ಮಾಡಿ ಈ ಸಮಿತಿ ಪುನಃ ರಚನೆಯಾಗುವಂತೆ ಮಾಡಿದ್ದೇವೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ 1.42 ಲಕ್ಷ ಹೆಕ್ಟೇರ್ ಭೂಮಿ ಅರಣ್ಯ ಎಂದಾಗಿದ್ದು, ಇದರಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ನಮ್ಮ ಹೋರಾಟದಿಂದ ಜಿಲ್ಲಾಧಿಕಾರಿಗಳ ಆದೇಶದಿಂದ ಅರಣ್ಯದಿಂದ ಹೊರಕ್ಕೆ ಬಿಡುಗಡೆಯಾಗಿದೆ.ಕ್ಷೇತ್ರದಲ್ಲಿ ಸುಮಾರು 120 ಹಳ್ಳಿಗಳಲ್ಲಿ ಜಂಟಿ ಸರ್ವೆ ಆಗಿದೆ. ಕ್ಷೇತ್ರದಲ್ಲಿ ಜಂಟಿ ಸರ್ವೆಗೆ ಕೆಲವರು ತಡೆ ಮಾಡುತ್ತಿದ್ದಾರೆ. ಆದರೆ ಜಂಟಿ ಸರ್ವೆಗೆ ಅವಕಾಶ ನೀಡುವಂತೆ ನಾನು ಸ್ಥಳೀಯರಲ್ಲಿ ಮನವಿ ಮಾಡಿದ್ದೇನೆ. ಜಂಟಿ ಸರ್ವೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಮಾಡುತ್ತಿದ್ದು, ಈಗಾಗಲೇ ಸೆಕ್ಷನ್ 17 ಆಗಿರುವಂತಹ ಜಾಗವನ್ನು ಗುರುತಿಸುವುದು, ಒತ್ತುವರಿ ಆಗಿರುವಂತಹ ಜಾಗವನ್ನು ಗುರುತು ಮಾಡುವುದು, ಒತ್ತುವರಿ ಆಗಿ ನಮೂನೆ 50, 53, 57, 94ಸಿ, 94ಸಿಸಿ ಅಡಿಯಲ್ಲಿ ಅರ್ಜಿ ಹಾಕಿರುವ ಜಾಗಗಳನ್ನು ಹೊರತುಪಡಿಸಿ ಸರ್ವೆ ಮಾಡಲಾಗುತ್ತಿದೆ. ಸೆಕ್ಷನ್ 17 ಆಗಿರುವ ಪ್ರದೇಶವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. 4/1 ನೋಟಿಫಿಕೇಶನ್ ಆಗಿರುವ ಜಮೀನನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇದು ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕಿದೆ. ಜಿಲ್ಲಾಧಿಕಾರಿ ಮೀಸಲಿನಿಂದ ಹೊರಗಿಟ್ಟಿರುವ 10 ಸಾವಿರ ಹೆಕ್ಟೇರ್ ಭೂಮಿಗೆ ಟಾಸ್ಕ್ಪೋರ್ಸ್ ಸಮಿತಿ ಒಪ್ಪಿಗೆ ನೀಡಿ ಹಕ್ಕುಪತ್ರ ನೀಡುವ ಕೆಲಸ ಶೀಘ್ರದಲ್ಲಿ ಆಗಲಿದೆ. ಈ ಹಿಂದೆ ಅವೈಜ್ಞಾನಿಕವಾಗಿ ಸೆಕ್ಷನ್ ೪ ಮಾಡಿರುವ ಜಮೀನು, ಅಧಿಸೂಚನೆಗಿಂತ ಮೊದಲು ಒತ್ತುವರಿ ಆಗಿ ಬದುಕು ಕಟ್ಟಿಕೊಂಡಿದ್ದರೆ ಅಂತಹವರಿಗೆ ಯಾವುದೇ ತೊಂದರೆ ಮಾಡಬಾರದು. ಅವರಿಗೆ ಬದುಕಲು ಹಕ್ಕು ನೀಡಬೇಕು. ಲೀಸ್ ಮೂಲಕ ಅವರಿಗೆ ಹಕ್ಕು ನೀಡಬೇಕು ಎಂದು ಸರ್ಕಾರ ಈಗಾಗಲೇ ತೀರ್ಮಾನ ಮಾಡಿದೆ.ಜಂಟಿ ಸರ್ವೆಯನ್ನು ಪ್ರಾಮಾಣಿಕವಾಗಿ ಕಾನೂನುಬದ್ಧವಾಗಿ ಮಾಡಿದಾಗ ಮಾತ್ರ ಕಾಡು ಉಳಿಯಲು ಸಾಧ್ಯ ಹಾಗೂ ಮನುಷ್ಯರು ಉಳಿಯಲು ಸಾಧ್ಯ ಎಂಬ ಸಂದೇಶವನ್ನು ಈಗಾಗಲೇ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.ಅರಣ್ಯ ಇಲಾಖೆಯ ಸಿಸಿಎಫ್ ಯಶ್ಪಾಲ್ ಕ್ಷೀರಸಾಗರ್, ಡಿಎಫ್ಓ ಶಿವಶಂಕರ್, ಆರ್ಎಫ್ಓ ರಂಗನಾಥ್, ಮೋಹನ್ಕುಮಾರ್, ಪ್ರವೀಣ್, ಮುಖಂಡರಾದ ಕುಕ್ಕುಡಿಗೆ ರವೀಂದ್ರ, ಎಚ್.ಸಿ.ಅಶ್ವಥ್, ಸುಕುಮಾರ್ ಕುಕ್ಕುಡಿಗೆ, ಬಿ.ಸಿ.ಮಂಜುನಾಥ್ ಮತ್ತಿತರರು ಇದ್ದರು.೦೪ಬಿಹೆಚ್ಆರ್ ೧: ಬಾಳೆಹೊನ್ನೂರು ಸಮೀಪದ ಹೇರೂರು ಗ್ರಾಪಂ ವ್ಯಾಪ್ತಿಗೆ ಮಲೆನಾಡಿನ ಕಂದಾಯ-ಅರಣ್ಯ ಭೂಮಿ ಸರ್ವೆ ಕಾರ್ಯದ ಕುರಿತು ಟಾಸ್ಕ್ಪೋರ್ಸ್ ಸಮಿತಿ ಭೇಟಿ ನೀಡಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮಾಹಿತಿ ನೀಡಿತು.