ದಾಬಸ್ಪೇಟೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಪಾರ್ಥಿವ ಶರೀರವನ್ನು ಭಾನುವಾರ ಬೆಂಗಳೂರಿನಿಂದ ಅವರ ಸ್ವಗ್ರಾಮ ಹಾಸನ ಜಿಲ್ಲೆಯ ಹರದನಹಳ್ಳಿಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ನೆಲಮಂಗಲದ ಬಳಿ ಅಂತಿಮ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದುಬಂದಿತ್ತು.
ನೆಲಮಂಗಲ ಕುಣಿಗಲ್ ಬೈಪಾಸ್ ಬಳಿ ಸಾರ್ವಜನಿಕರ ದರ್ಶನಕ್ಕಾಗಿ ವಿಶೇಷ ಪೆಂಡಾಲ್ಹಾಕಿ ವ್ಯವಸ್ಥೆ ಮಾಡಲಾಗಿತ್ತು. ಗೊರಗುಂಟೆಪಾಳ್ಯ, ನೆಲಮಂಗಲ ಹಾಗೂ ಸೋಲೂರು ಮಾರ್ಗವಾಗಿ ಪಾರ್ಥಿವ ಶರೀರ ಹೊತ್ತ ವಾಹನ ಸಾಗುತ್ತಿದ್ದಂತೆ ರಸ್ತೆಯ ಎರಡೂ ಬದಿಗಳಲ್ಲಿದ್ದ ಸಾವಿರಾರು ಸಾರ್ವಜನಿಕರು ಪುಷ್ಪವೃಷ್ಟಿ ಸುರಿಸಿದರು. ಜಮಾಯಿಸಿದ್ದ ಅಭಿಮಾನಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾವುಕರಾಗಿ ತಮ್ಮ ನೆಚ್ಚಿನ ''''''''ಅಮ್ಮ''''''''ನಿಗೆ ಅಂತಿಮ ನಮನ ಸಲ್ಲಿಸಿದರು.
ಆದರ್ಶ ದಂಪತಿಗಳಾಗಿ ಇಡೀ ಕುಟುಂಬಕ್ಕೆ ನೆರಳಾಗಿದ್ದ ಮಾತೃ ಚನ್ನಮ್ಮ
ಆದರ್ಶ ದಂಪತಿಗಳಾಗಿ ಇಡೀ ಕುಟುಂಬಕ್ಕೆ ನೆರಳಾಗಿದ್ದ ಮಾತೃ ಚನ್ನಮ್ಮ ಅವರ ಅಗಲಿಕೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಸಾರ್ವಜನಿಕರು ಕಂಬನಿ ಮಿಡಿದರು. ಇದೇ ವೇಳೆ ತಮ್ಮ ನೆಚ್ಚಿನ ನಾಯಕ ಎಚ್.ಡಿ.ದೇವೇಗೌಡರ ಕಾರನ್ನು ಸುತ್ತುವರಿದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಭಾವುಕರಾಗಿ ಸಾಂತ್ವನ ಹೇಳಿದರು.
ಪಕ್ಷಾತೀತವಾಗಿ ಹರಿದು ಬಂದ ಗಣ್ಯರು:
ಚನ್ನಮ್ಮ ದೇವೇಗೌಡರ ಅಂತಿಮ ದರ್ಶನ ಪಡೆಯಲು ನೆಲಮಂಗಲದಲ್ಲಿ ಪಕ್ಷಾತೀತವಾಗಿ ಮುಖಂಡರು, ಕಾರ್ಯಕರ್ತರು ಧಾವಿಸಿ ಬಂದು ಅಂತಿಮ ನಮನ ಸಲ್ಲಿಸಿದರು. ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಪಾರ್ಥಿವ ಶರೀರಕ್ಕೆ ಪುಪ್ಪಾರ್ಚನೆ ಮಾಡಿ ಭಾವಪೂರ್ಣ ಗೌರವ ಸಮರ್ಪಿಸಿದರು.
ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ, ಕರವೇ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ, ನಗರಸಭೆ ಸದಸ್ಯರಾದ ಅಂಜನಮೂರ್ತಿ, ಸುನಿಲ್ ಮೂಡ್, ವಕೀಲರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಮುಖಂಡರಾದ ಭಾರತೀಪುರ ಮೋಹನ್ ಕುಮಾರ್, ಭವಾನಿ ಶಂಕರ್ ಮಂಜುನಾಥ್, ಗುರುಪ್ರಕಾಶ್, ಜಯಣ್ಣ, ಜಗಜ್ಯೋತಿ ಬಸವೇಶ್ವರ, ಸುರೇಂದ್ರ, ಗೋಪಿ ಹಾಗೂ ಭಟ್ಟರಹಳ್ಳಿ ಹಾಲಿನ ಡೇರಿ ಅಧ್ಯಕ್ಷ ಮಂಜುನಾಥ್, ವೀರಸಾಗರ ಮಂಜುನಾಥ್, ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಧಾವಿಸಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.