ಮಂಡ್ಯ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ದಿ.ಚನ್ನಮ್ಮ ಅವರ ನಿಧನಕ್ಕೆ ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಜೆಡಿಎಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ದಿ.ಚನ್ನಮ್ಮರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಣ್ಣೀರಿನ ವಿದಾಯ ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ಅಗಲಿಕೆ ಇಡೀ ರಾಜ್ಯ ಹಾಗೂ ದೇಶಕ್ಕೆ ತುಂಬಲಾರದ ಅಪಾರ ನಷ್ಟವಾಗಿದೆ. ಇಡೀ ಜೆಡಿಎಸ್ ಕುಟುಂಬ ಹಾಗೂ ಅಭಿಮಾನಿ ವರ್ಗ ಇಂದು ತೀವ್ರ ದುಃಖದಲ್ಲಿ ಮುಳುಗಿದೆ ಎಂದರು.ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಈ ಕಠಿಣ ಸಮಯದಲ್ಲಿ ಅವರ ಕುಟುಂಬಸ್ಥರಿಗೆ ಮತ್ತು ಭಾವುಕರಾಗಿರುವ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಆರ್.ಸುರೇಶ್ ಮಾತನಾಡಿ, ಚನ್ನಮ್ಮನವರು ವಯೋಸಹಜ ಕಾಯಿಲೆಯಿಂದ ನಿಧನರಾಗಿರುವುದು ನಮಗೆ ತೀವ್ರ ಆಘಾತ ತಂದಿದೆ ಎಂದರು.
ಈ ವೇಳೆ ಜೆಡಿಎಸ್ ಮುಖಂಡರಾದ ಪುಟ್ಟಸ್ವಾಮಿ, ರಾಮಲಿಂಗು, ನಾಗೇಶ್ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.ಭುವನೇಶ್ವರಿ ಆಟೋ ನಿಲ್ದಾಣದ ನಾಮಫಲಕ ಜಖಂಗೆ ಖಂಡನೆ
ಮಂಡ್ಯ:ನಗರದ ಮೈಷುಗರ್ ವೃತ್ತದ ಎಡಭಾಗದಲ್ಲಿ ನಗರಸಭೆಯಿಂದ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಜೈ ಭುವನೇಶ್ವರಿ ಆಟೋ ನಿಲ್ದಾಣದ ನಾಮಫಲಕ ಜಖಂ ಮಾಡಿ ತೆರವುಗೊಳಿಸಿರುವುದನ್ನು ಕರ್ನಾಟಕ ರಾಜೀವ್ಗಾಂಧಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ವೇದಿಕೆ ತೀವ್ರವಾಗಿ ಖಂಡಿಸಿದೆ.ಈ ಕುರಿತು ಹೇಳಿಕೆ ನೀಡಿರುವ ವೇದಿಕೆ ಅಧ್ಯಕ್ಷ ಆಟೋ ಕೃಷ್ಣ, ಅತಿಕ್ರಮ ಫುಟ್ ಪಾತ್ ತೆರವು ಕಾರ್ಯಚರಣೆಯಲ್ಲಿ ನಗರಸಭೆ ಅಧಿಕಾರಿಗಳು ಆಟೋ ನಿಲ್ದಾಣದ ಬೋರ್ಡ್ ತೆರವು ಮಾಡಿ ಜಖಂಗೊಳಿಸಿ, ಅನ್ಯಾಯ, ಅಕ್ರಮ ಎಸಗಿದ್ದಾರೆ. ಒಂದು ಮಾಹಿತಿ ತಿಳಿಸಿದ್ದರೆ ನಾವೇ ಬೋರ್ಡ್ ಬಿಚ್ಚಿ ನಿಮಗೆ ಸಹಕಾರ ನೀಡುತ್ತಿದ್ದೇವು ಎಂದು ಕಿಡಿಕಾರಿದ್ದಾರೆ.ತಕ್ಷಣವೇ ನಗರಸಭೆ ಪೌರಾಯಾಕ್ತರು ಸ್ಥಳಕ್ಕೆ ಭೇಟಿ ನೀಡಿ, ಆಗಿರುವ ನಷ್ಟವನ್ನು ತುಂಬಿಕೊಡಬೇಕು. ಇಲ್ಲದಿದ್ದರೆ ನಗರಸಭೆ ಎದುರು ಆಟೋಚಾಲಕರು ಮತ್ತು ಮಾಲೀಕರು ಪ್ರತಿಭಟನೆ ಮಾಡಿ ದೂರು ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.