ಸಾರಾಂಶ
ವಿಜಯಪುರ: ಪಟ್ಟಣದ ಅಭಿವೃದ್ಧಿಗಾಗಿ ೨೯.೨೬ ಕೋಟಿ ಅನುದಾನದಲ್ಲಿ, ೧೧ ಕೆ.ವಿ.ಮೇಲ್ಮಾರ್ಗಗಳನ್ನು ಭೂಗತ ಕೇಬಲ್ಗಳಾಗಿ ಬದಲಾಯಿಸಲು ಅನುಮೋದನೆ ಸಿಕ್ಕಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣವನ್ನು ವಿದ್ಯುತ್ ತಂತಿಗಳು ಮತ್ತು ಕಂಬಗಳ ಮುಕ್ತ ಪಟ್ಟಣವನ್ನಾಗಿ ಮಾಡಬೇಕು ಎಂದು ಕಳೆದ ಜನವರಿ ತಿಂಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಬೆಸ್ಕಾಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ನೀಡಿದ್ದ ಮನವಿ ಪುರಸ್ಕರಿಸಿ, ಭೂಗತ ಕೇಬಲ್ ಗಳ ಅಳವಡಿಕೆ ಮಾಡುವುದರಿಂದ, ಪದೇಪದೆ ಆಗುತ್ತಿರುವ ವಿದ್ಯುತ್ ಅಡಚಣೆಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದರು.ಬೆಂಗಳೂರು ಗ್ರಾಮಾಂತರವನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಘೋಷಣೆ ಮಾಡಿರುವುದಕ್ಕೆ ಸಿಎಂ, ಡಿಸಿಎಂ ಅವರಿಗೆ ಸ್ವಾಗತ. ಇದರ ಪರಿಣಾಮ, ನಮ್ಮ ಉತ್ತರ ಜಿಲ್ಲೆಯೂ ಬೆಂಗಳೂರಿನ ಒಂದು ಭಾಗವಾಗಲಿದೆ. ಸಾವಿರಾರು ಕೋಟಿ ಅನುದಾನ, ವಸತಿ ಯೋಜನೆಗಳು, ಐಟಿಬಿಟಿ ಕಂಪನಿಗಳು ಬರುತ್ತವೆ. ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶಗಳು ಲಭಿಸಲಿವೆ. ಮೆಟ್ರೋ ಸಂಪರ್ಕವಾಗಲಿದೆ. ಸರಕಾರದ ಯೋಜನೆಗಳು ವೇಗವನ್ನು ಪಡೆದುಕೊಳ್ಳಲಿವೆ. ಯಾವುದೇ ಯೋಜನೆಗಳಾದರೂ ಘೋಷಣೆಯಾದಾಗ ಸ್ವಲ್ಪ ಗೊಂದಲಮಯವಾಗಿರುತ್ತವೆ. ಆದರೆ, ಅಭಿವೃದ್ಧಿಗೆ ನಾವು ಹೊಂದಿಕೊಂಡು ಹೋಗಬೇಕಾಗುತ್ತದೆ ಎಂದು ಹೇಳಿದರು.ಈ ವೇಳೆ ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್, ಪ್ರಧಾನ ಮಂತ್ರಿ ೧೫ ಅಂಶಗಳ ಕಾರ್ಯಕ್ರಮದ ನಿರ್ದೇಶಕ ಎ.ಆರ್.ಹನೀಪುಲ್ಲಾ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಗೌಸ್ ಖಾನ್, ಬಿ.ವಿ.ಕೃಷ್ಣಪ್ಪ, ಪುರಸಭೆ ಸದಸ್ಯರಾದ ಎಂ.ನಾರಾಯಣಸ್ವಾಮಿ, ಎಂ.ರಾಜಣ್ಣ, ಸೈಯದ್ ಎಕ್ಭಾಲ್, ಮಾಜಿ ಪುರಸಭೆ ಸದಸ್ಯ ಜೆ.ಎನ್.ಶ್ರೀನಿವಾಸ್, ಮುನಿನಾರಾಯಣಪ್ಪ, ಮಹೇಶ್, ನಂಜುಂಡಪ್ಪ, ಜಗ್ಗಣ್ಣ, ಅಶ್ವಥ್, ಹರೀಶ್ ಹಾಜರಿದ್ದರು.