ಎಲ್ಲರ ಹಕ್ಕು ರಕ್ಷಿಸುವುದು ಸಂವಿಧಾನ ಮೂಲಧ್ಯೇಯ

| Published : May 11 2025, 11:46 PM IST

ಸಾರಾಂಶ

ಮಹಿಳೆಯರ ಮೇಲಾದ ದೌರ್ಜನ್ಯವನ್ನು ಉಲ್ಲೇಖಿಸುತ್ತಾ ಸಂವಿಧಾನವು ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತಿದೆ. ಇಂತಹ ಸಂವಿಧಾನವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಮಾನವೀಯ ಮೌಲ್ಯಗಳು, ಗೌರವ ಮತ್ತು ಸಮಾನ ಅವಕಾಶಗಳನ್ನು ನೀಡಿದೆ. ಅಂಬೇಡ್ಕರ್ ಕಾರ್ಯವನ್ನು ನಾವು ಸ್ಮರಿಸಬೇಕು. ಸಂವಿಧಾನವೆಂದರೆ ಕೇವಲ ದಾಖಲೆ ಮಾತ್ರವಲ್ಲ. ಇದು ಸಮಾಜದ ಮೂಲ ಮಂತ್ರವಾಗಿದೆ. ಇದು ಕಾನೂನು ಒಪ್ಪಂದವಲ್ಲ. ಸಾಮಾಜಿಕ ಪಠ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಳೆ ಹೇಳಿದರು.

ಕೆಎಲ್‌ಇ ಸಂಸ್ಥೆಯ ಬೆಳಗಾವಿಯ ಬಿ.ವಿ.ಬೆಲ್ಲದ ಕಾನೂನು ಕಾಲೇಜು ಜೆಎನ್‌ಎಂಸಿ, ಡಾ.ಕೊಡ್ಕಣಿ ಸಭಾಂಗಣದಲ್ಲಿ ಭಾರತ ಸಂವಿಧಾನಕ್ಕೆ 75 ವರ್ಷ: ಸಂವಿಧಾನಿಕತೆಯ ಪುನರ್ ಆವಿಷ್ಕಾರ ಎಂಬ ವಿಷಯದ ಮೇಲಿನ ರಾಷ್ಟ್ರೀಯ ಮಟ್ಟದ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಮೇಲಾದ ದೌರ್ಜನ್ಯವನ್ನು ಉಲ್ಲೇಖಿಸುತ್ತಾ ಸಂವಿಧಾನವು ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತಿದೆ. ಇಂತಹ ಸಂವಿಧಾನವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಎಲ್ಲರ ಹಕ್ಕುಗಳನ್ನು ಹಿತರಕ್ಷಿಸುವುದು ಅದರ ಮೂಲಧ್ಯೇಯವಾಗಿದೆ ಎಂದರು. ಭಾರತ ಸಂವಿಧಾನದ ಕಲಂ 21ನ್ನು ಉಲ್ಲೇಖಿಸಿ, ಗೌರವದೊಂದಿಗೆ ಬದುಕುವ ಹಕ್ಕು, ಗೌಪ್ಯತಾ ಹಕ್ಕುಗಳ ಕುರಿತು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಮಾತನಾಡಿ, ತೀರ್ಪುಗಳಲ್ಲಿ ಮಾನವೀಯ ಸ್ಪರ್ಶವಿದೆ. ಇತ್ತೀಚಿನ ತೀರ್ಪಿನಲ್ಲಿ ಹೊಸ ಜೀವನ ಶೈಲಿಯಿಂದ ಉಂಟಾಗುತ್ತಿರುವ ಉದಾಸೀನತೆ ಮತ್ತು ಮನೋವೈಕಲ್ಯಗಳೆ ಹೆಚ್ಚು ಕಂಡು ಬರುತ್ತಿದೆ ಎಂದು ಹೇಳಿದರು.

ನಿಟೆ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಡಾ.ಸಂದೀಪ್ ಶಾಸ್ತ್ರಿ ಆಟಿಟ್ಯೂಡ್ ಅವರು, ಆಸ್ಪಿರೇಷನ್ ಮತ್ತು ಅಪ್ರೋಚ್ ಎಂಬ ಮೂರು ಅಕ್ಷರಗಳನ್ನು ವಿವರಿಸಿದರು. ದೃಷ್ಟಿಕೋನ, ಆಕಾಂಕ್ಷೆ ಮತ್ತು ಮಾರ್ಗ ಇದು ವಿಕಸಿತ ಭಾರತಕ್ಕಾಗಿ ಅಗತ್ಯವಿರುವ ಶಕ್ತಿ ಎಂದರು.

ಸಮಾವೇಶದ ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆ ನಿರ್ದೇಶಕ ಡಾ.ವಿಶ್ವನಾಥ ಪಾಟೀಲ್ ಮಾತನಾಡಿ, ಈ ಸುವರ್ಣ ಜಯಂತಿ ಆಚರಣೆಯ ಸಂದರ್ಭಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಮಾವೇಶ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಹಾಗೂ ಪ್ರಸ್ತುತ ಸಾಮರ್ಥ್ಯಗಳನ್ನು ವೃದ್ಧಿಸಿ, ವಕಾಲತ್ತು ನಿರ್ವಹಿಸುವಲ್ಲಿ ಯಶಸ್ವಿಯಾಗಲು ಅಗತ್ಯವಾದ ಕೌಶಲಗಳನ್ನು ನೀಡುವುದರೊಂದಿಗೆ ಈ ಸಮಾವೇಶ ಸಾಫಲ್ಯವಾಗಿದೆ ಎಂದು ಹೇಳಿದರು. ಸಮಾವೇಶದಲ್ಲಿ ಸ್ನೇಹಾ ದೊಡ್ಮಣಿ ಮತ್ತು ತಂಡದವರು ಪ್ರಾರ್ಥಿಸಿದರು. ಡಾ.ಜೆ.ಎಂ.ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ.ಜ್ಯೋತಿ ಹಿರೇಮಠ ಪರಿಚಯಿಸಿದರು. ಸಂಯೋಜಕಿ ಡಾ.ಸುಪ್ರಿಯಾ ಸ್ವಾಮಿ ವಂದಿಸಿದರು. ಪ್ರೇರಣಾ ಹನುಮಶೇಠ ನಿರೂಪಿಸಿದರು.

ಎರಡು ಅಧಿವೇಶನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೇರಳ ಕೊಟ್ಟಾಯಂ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಪ್ರೊ.ಕೆ.ವಿಕ್ರಮನ್ ನಾಯರ್, ಬೆಂಗಳೂರು ಕೆಎಲ್‌ಇ ಕಾನೂನು ಕಾಲೇಜು ಪ್ರೊ.ಸಿ.ರಾಜಶೇಖರ ಆಗಮಿಸಿದ್ದರು. ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪ್ರೊ.ಕೆ.ಆರ್.ಐತಾಳ್ ಭಾಗವಹಿಸಿ, ಉತ್ತಮ ಪ್ರಬಂಧ ಮಂಡನೆಯಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳು ಹಾಗೂ ನಗದು ಬಹುಮಾನಗಳನ್ನು ವಿತರಿಸಿದರು. ಅತಿಥಿಯಾಗಿ ಪ್ರೊ.ಸಿ.ರಾಜಶೇಖರ ಉಪಸ್ಥಿತರಿದ್ದರು. ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಆರ್.ಬಿ.ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ದೇಶದ ವಿವಿಧ ಕಾನೂನು ಕಾಲೇಜುಗಳಿಂದ 20 ಅಧ್ಯಾಪಕರು ಹಾಗೂ 150 ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.