ಶಾಲಾ ಕಾಲೇಜುಗಳಲ್ಲೂ ಹೊನ್ನ ಬಿತ್ತೇವು ಹೊಲಕೆಲ್ಲ ಗ್ರಂಥ ದೊರೆಯಬೇಕು: ಎ.ವಿ.ನಾಗಭೂಷಣ್

| Published : Jun 01 2025, 11:59 PM IST / Updated: Jun 02 2025, 12:00 AM IST

ಶಾಲಾ ಕಾಲೇಜುಗಳಲ್ಲೂ ಹೊನ್ನ ಬಿತ್ತೇವು ಹೊಲಕೆಲ್ಲ ಗ್ರಂಥ ದೊರೆಯಬೇಕು: ಎ.ವಿ.ನಾಗಭೂಷಣ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಅಮೂಲ್ಯವಾದ ಹೊನ್ನ ಬಿತ್ತೇವು ಹೊಲಕೆಲ್ಲ ಮಹಾಗ್ರಂಥ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರದ ಗ್ರಂಥಾಲಯಗಳಲ್ಲಿ ದೊರೆಯುವಂತಾಗಿ ಪುಸ್ತಕವನ್ನು ಎಲ್ಲರೂ ಓದುವಂತಾಗಬೇಕು ಎಂದು ಪಟ್ಟಣದ ಅಂಚೆ ಪ್ರತಿಷ್ಠಾನ ಅಧ್ಯಕ್ಷ ಎ.ವಿ. ನಾಗಭೂಷಣ್ ಹೇಳಿದರು.

ತರೀಕೆರೆಯಲ್ಲಿ ಅಂಚೆಪ್ರತಿಷ್ಠಾನದಿಂದ ಗ್ರಂಥ ಸ್ವೀಕಾರ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಅಮೂಲ್ಯವಾದ ಹೊನ್ನ ಬಿತ್ತೇವು ಹೊಲಕೆಲ್ಲ ಮಹಾಗ್ರಂಥ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರದ ಗ್ರಂಥಾಲಯಗಳಲ್ಲಿ ದೊರೆಯುವಂತಾಗಿ ಪುಸ್ತಕವನ್ನು ಎಲ್ಲರೂ ಓದುವಂತಾಗಬೇಕು ಎಂದು ಪಟ್ಟಣದ ಅಂಚೆ ಪ್ರತಿಷ್ಠಾನ ಅಧ್ಯಕ್ಷ ಎ.ವಿ. ನಾಗಭೂಷಣ್ ಹೇಳಿದರು.ಅಂಚೆ ಪ್ರತಿಷ್ಠಾನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಸುದ್ದಿ ಪ್ರಕಾಶನ ಸಂಸ್ಥೆಯಿಂದ ಮರು ಮುದ್ರಣವಾದ ಹೊನ್ನ ಬಿತ್ತೇವು ಹೊಲಕೆಲ್ಲ ಮಹಾಗ್ರಂಥವನ್ನು ಸ್ವೀಕರಿಸಿ ಮಾತನಾಡಿದರು. 1967ರಲ್ಲಿ ಹಿರಿಯ ಸಾಹಿತಿ ಗೊ.ರು.ರಾಮಸ್ವಾಮಿ ಅಯ್ಯಂಗಾರ್ ಅವರ ಅಧ್ಯಕ್ಷತೆಯಲ್ಲಿ ತರೀಕೆರೆಯಲ್ಲಿ ಪ್ರಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನ ಜಾನಪದ ಸಾಹಿತ್ಯ ರತ್ನ ಕೆ.ಆರ್.ಲಿಂಗಪ್ಪ ಮತ್ತು ಹಿರಿಯ ಸಾಹಿತಿ ನಾಡೋಜ ಗೊ.ರು.ಚನ್ನಬಸಪ್ಪ ಯಶಸ್ವಿಯಾಗಿ ಸಂಘಟಿಸಿದ್ದರು ಎಂದು ಹೇಳಿದರು.

ನಾನು ಪಿಯುಸಿ ವ್ಯಾಸಂಗದಲ್ಲಿದ್ದಾಗ ತರೀಕೆರೆಯಲ್ಲಿ ಜರುಗಿದ ಪ್ರಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನದಲ್ಲಿ ಹೊನ್ನ ಬಿತ್ತೇವು ಹೊಲಕೆಲ್ಲ ಪುಸ್ತಕ ಬಿಡುಗಡೆಯಾಗಿತ್ತು. ಪ್ರಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನದ ನೆನಪಿಗೆ ಅಂದು ನಾನು ಒಂದು ರೇಡಿಯೋ ಖರೀದಿಸಿದ್ದೆ. ಸುಮಾರು 40 ವರ್ಷ ಸತತವಾಗಿ ರೇಡಿಯೋ ಕೇಳುಗನಾಗಿದ್ದೆ. ಇದೀಗ 57 ವರ್ಷದ ನಂತರ ಈ ಪುಸ್ತಕ ಪುನರ್ ಮುದ್ರಣವಾಗಿರುವುದು ಅಮೂಲ್ಯ ಮತ್ತು ಅನನ್ಯ. ಸಾಹಿತಿ ಮತಿಘಟ್ಟ ಕೃಷ್ಣಮೂರ್ತಿ ಅವರನ್ನು ಒಳಗೊಂಡಂತೆ ನಾಡಿನ ಅನೇಕ ಹಿರಿಯ ಸಾಹಿತಿಗಳ, ಬರಹಗಾರರ ಲೇಖನಗಳು, ಬರಹಗಳು ಈ ಪುಸ್ತಕದಲ್ಲಿ ಇದೆ. ಜಿಲ್ಲೆಯಾದ್ಯಂತ ಎಲ್ಲ ಕಡೆ ಇಂತಹ ಕಾರ್ಯಕ್ರಮ ನೆರವೇರಿಸಿ ಈ ಪುಸ್ತಕವನ್ನು ಓದುಗರಿಗೆ ತಲುಪಿಸಬೇಕು ಎಂದು

ಹೇಳಿದರು. ಜಾನಪದ ಸಾಹಿತ್ಯ ರತ್ನ ಕೆ.ಆರ್.ಲಿಂಗಪ್ಪ ಅವರ ದಿವ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಬೇಕು, ಸುದ್ದಿ ಪ್ರಕಾಶನ ಸಂಸ್ಥೆ ಹಿರಿಯ ಪತ್ರಕರ್ತ ಎನ್.ರಾಜು ಈ ಕಾರ್ಯದಲ್ಲಿ ಮುಂದುವರಿಯಲಿ, ಕಾರ್ಯಕ್ರಮಕ್ಕೆ ಅಂಚೆ ಪ್ರತಿಷ್ಠಾನ ಸಹಕರಿಸುತ್ತದೆ ಎಂದ ಅವರು ಹೊನ್ನ ಬಿತ್ತೇವು ಹೊಲಕೆಲ್ಲ 30 ಪುಸ್ತಕಗಳನ್ನು ಖರೀದಿಸಿ ಶುಭ ಕೋರಿದರು.ಚಿಕ್ಕಮಗಳೂರು ಸುದ್ದಿ ಪ್ರಕಾಶನ ಸಂಸ್ಥೆ ಹಿರಿಯ ಪತ್ರಕರ್ತ ಎನ್.ರಾಜು ಮಾತನಾಡಿ ಓದುವ ಸಂಸ್ಕೃತಿ ಬೆಳೆಸಿ ಕೊಳ್ಳಬೇಕು ಎಂಬ ಆಶಯದೊಂದಿಗೆ ಈ ಗ್ರಂಥವನ್ನು ಬಹಳ ಶ್ರಮ ವಹಿಸಿ ಮರುಮುದ್ರಣ ಕಾರ್ಯ ನಿರ್ವಹಿಸಲಾಗಿದೆ. ನಾಡಿನ ಹಿರಿಯ ಸಾಹಿತಿಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರು ನಮ್ಮ ಜಿಲ್ಲೆಯವರೇ ಆಗಿರುವ ನಾಡೋಜ ಗೊ.ರು.ಚನ್ನಬಸಪ್ಪಈ ಗ್ರಂಥದ ಮರುಮುದ್ರಣ ಬಿಡುಗಡೆಗೊಳಿಸಿ ಈ ಗ್ರಂಥ ಎಲ್ಲ ಓದುಗರ ಕೈಸೇರಲಿ ಎಂದು ಶುಭ ಕೋರಿದ್ದಾರೆ ಎಂದು ಹೇಳಿದರು.ಈ ಗ್ರಂಥ ನಾಡಿನ ಅನೇಕ ಖ್ಯಾತ ಸಾಹಿತಿಗಳು ಮತ್ತು ಬರಹಗಾರರು ಬರೆದಿರುವ ಬಹು ಅಪರೂಪದ ಪದಸಂಪತ್ತಿನ ಲೇಖನಗಳು, ಜಾನಪದ ಲೋಕದ ಇತಿಹಾಸ ಒಳಗೊಂಡಂತಹ ಗ್ರಂಥವಾಗಿದೆ. ಪುಸ್ತಕ ತನ್ನಂತೆ ತಾನು ಓದುಗರನ್ನು ಆಕರ್ಷಿಸುತ್ತದೆ. ಪ್ರತಿ ಮನೆಯ ಗ್ರಂಥಾಲಯದಲ್ಲಿ ಪುಸ್ತಕವನ್ನು ಸಂಗ್ರಹಿಸಿಟ್ಟು ಓದಬೇಕು. ಬಹು ಅಮೂಲ್ಯವಾದ ಈ ಪುಸ್ತಕವನ್ನು ಎಲ್ಲರೂ ಓದಬೇಕು ಎಂದು ಮನವಿ ಮಾಡಿದ ಅವರು ಹಿರಿಯ ಜಾನಪದ ಸಾಹಿತಿ ಎಚ್.ಎಲ್.ನಾಗೇಗೌಡ ಸ್ಥಾಪಿಸಿದಂತೆ ಜಾನಪದ ಲೋಕವನ್ನು ಸ್ಥಾಪಿಸಬೇಕೆಂಬ ಆಶಯವನ್ನು ಹಿರಿಯ ಸಾಹಿತಿ ನಾಡೋಜ ಗೊ.ರು.ಚನ್ನಬಸಪ್ಪ ಅವರು ಹೊಂದಿದ್ದಾರೆ. ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ನಿರಂತರವಾಗಿ ಜಾನಪದರು ಹಾಡಿಕೊಡು ಬಂದಿರುವ ಬೀಸಕಲ್ಲು ಪದಗಳು, ಜಾನಪದ ಗೀತೆಗಳು, ಒಗಟುಗಳು, ಕೋಲಾಟ, ವೀರಗಾಸೆ, ಡೊಳ್ಲುಕುಣಿತ ಇತ್ಯಾದಿಗಳನ್ನು ಪರಿಚಯಿಸುವ ಮಹತ್ಕಾರ್ಯವನ್ನು ನಿರ್ವಹಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.ವಕೀಲರ ಸಂಘದ ಅಧ್ಯಕ್ಷ ಬಿ.ವಿ.ದಿನೇಶ್ ಕುಮಾರ್,ಮಾತನಾಡಿ ಇಂತಹ ಅಮೂಲ್ಯ ಗ್ರಂಥವನ್ನು ಪತ್ರಕರ್ತ ಎನ್.ರಾಜು ಓದಿ ಅರ್ಥೈಸಿ ಕೊಂಡಿದ್ದಾರೆ, ಅದುದರಿಂದಲೇ ಈ ಗ್ರಂಥ ಮರು ಮುದ್ರಣಗೊಂಡಿದೆ ಎಂದರು. ಪುರಸಭೆ ಸದಸ್ಯ ಟಿ.ಜಿ.ಅಶೋಕ್ ಕುಮಾರ್ ಮಾತನಾಡಿ ಹೊನ್ನ ಬಿತ್ತೇವು ಹೊಲಕೆಲ್ಲ ಗ್ರಂಥ ಬಹಳ ಅಪರೂಪವಾದದ್ದು, ಗ್ರಂಥ ನಾಡಿನಾದ್ಯಂತ ಎಲ್ಲಡೆ ಹೆಚ್ಚು ಪ್ರಸಾರವಾಗಲಿ ಎಂದು ಹಾರೈಸಿದರು.ಜನಚಿಂತನ ಸಂಸ್ಥೆ ಅದ್ಯಕ್ಷ ಎನ್.ವೀರಭದ್ರಪ್ಪ ಮಾತನಾಡಿ ಹೊನ್ನಬಿತ್ತೇವು ಹೊಲಕೆಲ್ಲ ಗ್ರಂಥ ಇತಿಹಾಸದಲ್ಲಿ ಉಳಿದು ಕೊಳ್ಳುತ್ತದೆ. ಮರು ಮುದ್ರಣ ಗ್ರಂಥ ಎಲ್ಲರಿಗೂ ತಲುಪಲಿ ಎಂದು ಹೇಳಿದರು. ಹಿರಿಯ ವಕೀಲ ಎಸ್.ಸುರೇಶ್ ಚಂದ್ರ ಮಾತನಾಡಿ ಎಲ್ಲರ ಸಹಕಾರದಿಂದ ಜಾನಪದ ಸಾಹಿತ್ಯ ರತ್ನ ಕೆ.ಆರ್.ಲಿಂಗಪ್ಪ ಅವರ ದಿವ್ಯ ಸ್ಮರಣೆ ಕಾರ್ಯಕ್ರಮ ನಿರ್ವಹಿಸೋಣ ಎಂದು ಹೇಳಿದರು.

ಸುದ್ದಿ ಪ್ರಕಾಶನ ಸಂಸ್ಥೆಯಿಂದ ಅಂಚೆ ಪ್ರತಿಷ್ಠಾನದ ಅಧ್ಯಕ್ಷ ಎ.ವಿ.ನಾಗಭೂಷಣ್, ವಕೀಲರ ಸಂಘದ ಅಧ್ಯಕ್ಷ ಬಿ.ವಿ.ದಿನೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಹಾಲವಜ್ರಪ್ಪ, ಅಂಚೆ ಪ್ರತಿಷ್ಠಾನದ ಎಚ್.ವಿ.ಸತ್ಯನಾರಾಯಣ್, ನವೀನ್ ಕುಮಾರ್, ಬಸವರಾಜ್ ಮತ್ತಿತರರು ಭಾಗವಹಿಸಿದ್ದರು. 1ಕೆಟಿಆರ್.ಕೆ1ಃ

ತರೀಕೆರೆಯಲ್ಲಿ ಅಂಚೆ ಪ್ರತಿಷ್ಛಾನ ಅಧ್ಯಕ್ಷ ಎ.ವಿ.ನಾಗಭೂಷಣ್ ಮರುಮುದ್ರಣಗೊಂಡು ಪ್ರಕಾಶನಗೊಂಡ ಹೊನ್ನ ಬಿತ್ತೇವು ಹೊಲಕೆಲ್ಲ ಮಹಾಗ್ರಂಥವನ್ನು ಪ್ರತಿಷ್ಠಾನ ಪರವಾಗಿ ಸ್ವೀಕರಿಸಿ ಮಾತನಾಡಿದರು. ಹಿರಿಯ ಪತ್ರಕರ್ತ ಎನ್.ರಾಜು, ವಕೀಲರ ಸಂಘದ ಅಧ್ಯಕ್ಷ ಬಿ.ವಿ.ದಿನೇಶ್ ಕುಮಾರ್, ವಕೀಲ ಎಸ್.ಸುರೇಶ್ ಚಂದ್ರ,ಎನ್.ವೀರಭದ್ರಪ್ಪ, ಎಚ್.ವಿ.ಸತ್ಯನಾರಾಯಣ್, ಮುಖಂಡ ಹಾಲುವಜ್ರಪ್ಪ ಮತ್ತಿತರರು ಇದ್ದರು.