ಜೂಜಾಟದ ಕಿಂಗ್‌ಪಿನ್‌ಗಳು ನನ್ನ ಬೆಂಬಲಿಗರಲ್ಲ: ಶಾಸಕ ಯಾಸೀರಖಾನ ಪಠಾಣ

| Published : Jun 01 2025, 11:59 PM IST

ಜೂಜಾಟದ ಕಿಂಗ್‌ಪಿನ್‌ಗಳು ನನ್ನ ಬೆಂಬಲಿಗರಲ್ಲ: ಶಾಸಕ ಯಾಸೀರಖಾನ ಪಠಾಣ
Share this Article
  • FB
  • TW
  • Linkdin
  • Email

ಸಾರಾಂಶ

ಜೂಜು ಸೇರಿದಂತೆ ಅನೇಕ ಸಾಮಾಜಿಕ ಪಿಡುಗುಗಳನ್ನು ಸಮಾಜದಿಂದ ತೊಡೆದು ಹಾಕಿ ಸಾಮಾನ್ಯರ ಸುಂದರವಾದ ಬದುಕನ್ನು ಕಟ್ಟಿಕೊಡಲು ಹಿರಿಯರಾದ ಬೊಮ್ಮಾಯಿ, ಜೋಶಿಯವರ ಮಾರ್ಗದರ್ಶನ ಮತ್ತು ಸಲಹೆಗಳನ್ನು ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಶಾಸಕ ಯಾಸೀರಖಾನ ಪಠಾಣ ತಿಳಿಸಿದರು.

ಶಿಗ್ಗಾಂವಿ: ಅಕ್ರಮ ಚಟುವಟಿಕೆ ಮಾಡುವವರು ಯಾರ ಬೆಂಬಲಿಗರೂ ಆಗಲು ಸಾಧ್ಯವಿಲ್ಲ. ಅವರು ಸಮಾಜದಲ್ಲಿನ ಕೆಟ್ಟ ಹುಳುಗಳು ಇದ್ದಂತೆ. ಇಂಥ ವಿಚಾರಗಳಲ್ಲಿ ರಾಜಕಾರಣ ಮಾಡಬಾರದು. ಅಕ್ರಮ ಚಟುವಟಿಕೆಗಳನ್ನು ಬೇರುಸಮೇತ ಕಿತ್ತೆಸೆಯಲು ಮಾರ್ಗದರ್ಶನ ಮಾಡಿದರೆ ಪಾಲಿಸಲು ಸಿದ್ಧ ಎಂದು ಶಾಸಕ ಯಾಸೀರಖಾನ ಪಠಾಣ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕರ ಆಪ್ತರೆ ಇಸ್ಪೀಟ್ ಜೂಜಾಟದ ಕಿಂಗ್‌ಪಿನ್‌ಗಳು ಎಂಬ ಸಂಸದ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಾಲೂಕಿನ ದುಂಡಸಿ ಅರಣ್ಯ ವಲಯದಲ್ಲಿ ಅಕ್ರಮ ಇಸ್ಪೀಟ್ ಆಡಿದ ಜೂಜುಕೋರರನ್ನು ಪೊಲೀಸರು ಈಗಾಗಲೆ ಬಂಧಿಸಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿಯವರು ಶಾಸಕರ ಆಪ್ತರೆ ಈ ದಂಧೆ ನಡೆಸುತ್ತಿದ್ದಾರೆ ಎಂದು ಹೇಳಿದ್ದು ಸರಿಯಲ್ಲ. ಅಲ್ಲಿ ಸೇರಿದ್ದ ನೂರಾರು ಜನರಲ್ಲಿ ಅವರ ಬೆಂಬಲಿಗರನ್ನು ಗುರುತಿಸಬಹುದು. ಜೂಜು ಸೇರಿದಂತೆ ಅನೇಕ ಸಾಮಾಜಿಕ ಪಿಡುಗುಗಳನ್ನು ಸಮಾಜದಿಂದ ತೊಡೆದು ಹಾಕಿ ಸಾಮಾನ್ಯರ ಸುಂದರವಾದ ಬದುಕನ್ನು ಕಟ್ಟಿಕೊಡಲು ಹಿರಿಯರಾದ ಬೊಮ್ಮಾಯಿ, ಜೋಶಿಯವರ ಮಾರ್ಗದರ್ಶನ ಮತ್ತು ಸಲಹೆಗಳನ್ನು ಸ್ವೀಕರಿಸಲು ಸಿದ್ಧನಿದ್ದೇನೆ ಎಂದರು.ತಾಲೂಕಿನಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಜಾಗವಿಲ್ಲ. ನಾನು ಅಧಿಕಾರಕ್ಕೆ ಬಂದು ಆರು ತಿಂಗಳಲ್ಲಿ ಇಂತಹ ಹಲವಾರು ಅಕ್ರಮ ಚುಟುವಟಿಕೆ ಕೇಂದ್ರಗಳ ಮೇಲೆ ಮತ್ತು ಅಕ್ರಮ ಮದ್ಯ ಅಂಗಡಿಗಳ ಮೇಲೆ ಹಿಂದೆಂದಿಗಿಂತಲು ಹೆಚ್ಚಿನ ಪ್ರಮಾಣದಲ್ಲಿ ಕೇಸುಗಳು ದಾಖಲಾಗಿವೆ. ಪೊಲೀಸ್ ಇಲಾಖೆಯು ಅಕ್ರಮ ಚಟುವಟಿಕೆದಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಿದೆ. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆಯಲ್ಲಿರುವುದರಿಂದ ಇಂತಹ ಅಕ್ರಮ ಚಟುವಟಿಕೆಗಳು ಬೆಳಕಿಗೆ ಬರುತ್ತಿವೆ ಎಂದರು.ಶಿಗ್ಗಾಂವಿ ಕ್ಷೇತ್ರದಲ್ಲಿ ಹೆಚ್ಚಿದ ಅಕ್ರಮ ಚಟುವಟಿಕೆ: ಭರತ

ಶಿಗ್ಗಾಂವಿ: ಸಂಸದ, ನಮ್ಮ ತಂದೆ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಶಿಗ್ಗಾಂವಿ ಮತಕ್ಷೇತ್ರವು ೨೦೦೮ರಿಂದ ೧೬ ವರ್ಷಗಳ ಕಾಲ ಅಭಿವೃದ್ಧಿಯ ಹಾದಿಯಲ್ಲಿ ಸಾಗಿತ್ತು. ಆದರೆ ಕೆಲ ತಿಂಗಳುಗಳಿಂದ ಅಕ್ರಮ ಚಟುವಟಿಗಳು ಹೆಚ್ಚುತ್ತಿವೆ ಎಂದು ಬಿಜೆಪಿಯ ಯುವ ಮುಖಂಡ ಭರತ ಬೊಮ್ಮಾಯಿ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಜೂಜಾಟದಂತಹ ಅಕ್ರಮ ಚಟುವಟಿಕೆಗಳು ಕಳೆದ ಆರು ತಿಂಗಳಲ್ಲಿ ಪ್ರಾರಭವಾಗಿವೆ. ಇಂತಹ ದಂಧೆ ಶಾಸಕರ ಆಪ್ತರಿಂದಲೆ ಪ್ರಾರಂಭವಾಗಿವೆ. ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಬಿಸನಳ್ಳಿ ಗ್ರಾಮದಲ್ಲಿ ಸುಮಾರು ೫೦ ಕೆಜಿ ಗಾಂಜಾವನ್ನು ಹುಬ್ಬಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ೧೦ ಕೆಜಿ ಎಂದು ತೋರಿಸಿದ್ದಾರೆ ಎಂದರು.

ಸವಣೂರಿನ ಸಂಗಮೇಶ ಖಾನಾವಳಿಯಲ್ಲಿ ಇತ್ತೀಚೆಗೆ ಕೆಲ ದುಷ್ಕರ್ಮಿಗಳು ಊಟ ಮಾಡಿ ಬಿಲ್ಲು ಕೇಳಿದಾಗ ಖಾನಾವಳಿಯಲ್ಲಿ ಕೆಲಸ ಮಾಡುವ ವೃದ್ಧ ಮಹಿಳೆ, ಬಾಲಕರ ಮೇಲೆ ಹಲ್ಲೆ ಮಾಡಿ ಖಾನಾವಳಿಗೆ ಹಾನಿಗೊಳಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸ್‌ ಇಲಾಖೆ ಹಿಂದೇಟು ಹಾಕಿದ್ದು ಸರಿಯಲ್ಲ ಎಂದರು.ಜಿಲ್ಲೆಯಲ್ಲಿ ಆರೂ ಜನ ಕಾಂಗ್ರೆಸ್ ಶಾಸಕರಿದ್ದು, ಹಾನಗಲ್ಲಿನ ರೇಪ್ ಆರೋಪಿಗಳು ಮೆರವಣಿಗೆ ಮಾಡಿರುವ ಘಟನೆ ಖಂಡನೀಯ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಜಿಲ್ಲೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ವಿಶ್ವನಾಥ ಹರವಿ, ಗಂಗಣ್ಣ ಸಾತಣ್ಣವರ, ಶಶಿಧರ ಹೊಣ್ಣನ್ನವರ, ಶಿವಪ್ರಸಾದ ಸುರಗಿಮಠ, ಶಿವಶಂಕರ ಗೌರಿಮಠ, ಪರಶುರಾಮ ಸೊನ್ನದ, ದಯಾನಂದ ಅಕ್ಕಿ, ನವೀನ ರಾಮಗೇರಿ, ಸಂತೋಷ ದೊಡ್ಡಮನಿ, ಕಾಶಿನಾಥ ಕಳ್ಳಿಮನಿ ಇತರರಿದ್ದರು.