ಅಧಿಕಾರ ದಾಹದಿಂದ ರೈತರ ಮರೆತ ಕೈ ನಾಯಕರು

| Published : Nov 08 2023, 01:04 AM IST

ಅಧಿಕಾರ ದಾಹದಿಂದ ರೈತರ ಮರೆತ ಕೈ ನಾಯಕರು
Share this Article
  • FB
  • TW
  • Linkdin
  • Email

ಸಾರಾಂಶ

ಸಕಾಲದಲ್ಲಿ ಮಳೆ ಬಾರದೆ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಹಿತ ಚಿಂತನೆ ಮಾಡದೆ ರಾಜ್ಯದ ಕಾಂಗ್ರೆಸ್‌ ನಾಯಕರು ಅಧಿಕಾರ ಹಂಚಿಕೆಯ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಬಿಜೆಪಿ ಬರ ಅಧ್ಯಯನ ತಂಡದ ಮುಖ್ಯಸ್ಥ, ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹರಿಹಾಯ್ದರು. ಭರಮಸಾಗರದ ಸಮೀದ ಕೊಳಹಾಳು ಗ್ರಾಮದಲ್ಲಿ ಬರ ಪರಿಶೀಲನೆ ನಂತರ ಮಾತನಾಡಿದರು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊರತೆ ಉಂಟಾಗಿದೆ. ಕೆಲವೆಡೆ ರೈತರು ಈಗಾಗಲೇ ಜಾನುವಾರುಗಳನ್ನು ಮಾರಾಟ ಮಾಡುವ ಸ್ಥಿತಿ ತಲುಪಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ವಿರುದ್ಧ ಕಾಗೇರಿ ಕಿಡಿ । ಕೊಳಹಾಳು ಗ್ರಾಮದಲ್ಲಿ ಬರ ಪರಿಶೀಲನೆ

ಕನ್ನಡಪ್ರಭ ವಾರ್ತೆ ಸಿರಿಗೆರೆ ಸಕಾಲದಲ್ಲಿ ಮಳೆ ಬಾರದೆ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಹಿತ ಚಿಂತನೆ ಮಾಡದೆ ರಾಜ್ಯದ ಕಾಂಗ್ರೆಸ್‌ ನಾಯಕರು ಅಧಿಕಾರ ಹಂಚಿಕೆಯ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಬಿಜೆಪಿ ಬರ ಅಧ್ಯಯನ ತಂಡದ ಮುಖ್ಯಸ್ಥ, ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹರಿಹಾಯ್ದರು. ಭರಮಸಾಗರದ ಸಮೀದ ಕೊಳಹಾಳು ಗ್ರಾಮದಲ್ಲಿ ಬರ ಪರಿಶೀಲನೆ ನಂತರ ಮಾತನಾಡಿದರು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊರತೆ ಉಂಟಾಗಿದೆ. ಕೆಲವೆಡೆ ರೈತರು ಈಗಾಗಲೇ ಜಾನುವಾರುಗಳನ್ನು ಮಾರಾಟ ಮಾಡುವ ಸ್ಥಿತಿ ತಲುಪಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿಗಳು ತಾನು ಎಷ್ಟು ದಿನ ಅಧಿಕಾರದಲ್ಲಿರುತ್ತೇನೋ ಎಂದೂ ಡಿಸಿಎಂ ತಾನು ಇನ್ನೂ ಯಾವಾಗ ಸಿಎಂ ಆಗುತ್ತೇನೋ ಎಂಬ ತವಕದಲ್ಲಿದ್ದಾರೆ. ಇವರಿಗೆ ರಾಜ್ಯದ ಜನರ ಸಂಕಷ್ಟದ ಸ್ಥಿತಿಯ ಅರಿವೇ ಇಲ್ಲ. ವರ್ಗಾವಣೆ, ಗುತ್ತಿಗೆದಾರರ ಹಣ ಬಿಡುಗಡೆ ಮುಂತಾದ ಕೆಲಸದಲ್ಲಿ ನಾಯಕರು ತೊಡಗಿಕೊಂಡಿದ್ದಾರೆ. ಇದೆಲ್ಲವನ್ನು ಸಮರ್ಥವಾಗಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.

ಎಚ್ಚೆತ್ತ ಸರ್ಕಾರ:ಬಿಜೆಪಿ ನಾಯಕರು ರಾಜ್ಯದ ಬರ ಅಧ್ಯಯನ ಮಾಡಲು ಹೊರಡುತ್ತಿದ್ದಂತೆ ಸಿಎಂ ಸಂಪುಟದ ಸಚಿವರಿಗೆ ಸೂಚಿಸಿ ಅವರೂ ರಾಜ್ಯ ಪ್ರವಾಸ ಮಾಡಲು ಸೂಚಿಸಿದ್ದಾರೆ. ೫ ರಿಂದ ೧೨ ಕೋಟಿ ರು.ವರೆಗೆ ಕೆಲವು ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಈ ಹಣ ಯಾವಾಗ ಮಂಜೂರಾಗುತ್ತದೆ ಎಂಬ ಭರವಸೆಯೇ ಇಲ್ಲವೆಂದು ಹೇಳಿದ ಕಾಗೇರಿ, ರೈತರಿಗೆ ಸಮರ್ಪಕ ವಿದ್ಯುತ್‌ ಕೂಡ ಲಭ್ಯವಾಗುತ್ತಿಲ್ಲ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರಿಗೆ ೭ ಗಂಟೆ ವಿದ್ಯುತ್‌ ನೀಡಲಾಗುತ್ತಿತ್ತು. ಅದನ್ನು ಕೆಲವು ದಿನಗಳ ಹಿಂದೆ ೩ ಗಂಟೆ, ೫ ಗಂಟೆ ಎಂದವರು ಈಗ ೭ ಗಂಟೆ ಕೊಡುತ್ತಿದ್ದೇವೆ ಎನ್ನುತ್ತಿದ್ದಾರೆ. ಕೃಷಿ ಪಂಪ್‌ಸೆಟ್‌ಗಳಿಗೆ ೭ ಗಂಟೆ ವಿದ್ಯುತ್ತನ್ನು ಕೂಡಲೆ ಜಾರಿಗೆ ಬರುವಂತೆ ನೀಡಬೇಕು ಎಂದು ಕಾಗೇರಿ ಒತ್ತಾಯಿಸಿದರು. ಅಧಿಕಾರ ದಾಹ :ರಾಜ್ಯದ ಕಾಂಗ್ರೆಸ್‌ ನಾಯಕರಲ್ಲಿ ಅಧಿಕಾರ ದಾಹ ಹೆಚ್ಚಾಗಿದೆ. ಅಧಿಕಾರ ಹಂಚಿಕೆಯ ಸ್ಪರ್ಧೆ ಬಿರುಸಿನಿಂದ ನಡೆಯುತ್ತಿದೆ. ಇವರಿಗೆ ರಾಜ್ಯದ ಜನತೆಯ ಹಿತ ಬೇಕಾಗಿಲ್ಲ. ಕಾವೇರಿ ನೀರು ಇಂದಿಗೂ ಹರಿದು ತಮಿಳುನಾಡಿಗೆ ಹೋಗುತ್ತಲೇ ಇದೆ. ಅದಕ್ಕೆ ಪರಿಹಾರ ಕಂಡುಹಿಡಿಯುವ ಕೆಲಸವನ್ನು ಕಾಂಗ್ರೆಸ್‌ ನಾಯಕರು ಮಾಡಿಲ್ಲ ಎಂದರು. ದಾವಣಗೆರೆ ಸಂಸದ ಜಿ.ಎಂ. ಸಿದ್ಧೇಶ್ವರ್‌, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಹರಿಹರ ಶಾಸಕ ಬಿ.ಪಿ. ಹರೀಶ್‌, ಬಿಜೆಪಿ ಹಿರಿಯ ಮುಖಂಡ ಜಿ.ಎಚ್‌ ತಿಪ್ಪಾರೆಡ್ಡಿ, ಕೋಗುಂಡೆ ಮಂಜುನಾಥ್‌, ಶೈಲೇಶ್‌ ಕುಮಾರ್‌, ರೈತ ಪ್ರತಿನಿಧಿಗಳು, ರೈತ ಸಂಘದ ಪದಾಧಿಕಾರಿಗಳು ಇದ್ದರು. --------------------------

ರೈತರು ಪ್ರತಿ ಎಕರೆಗೆ ೨೫ ರಿಂದ ೩೦ ಸಾವಿರ ರು.ಹಣ ಖರ್ಚು ಮಾಡಿ ಮೆಕ್ಕೆಜೋಳ ಬಿತ್ತಿದ್ದಾರೆ. ಮಳೆಯ ಕೊರತೆಯಿಂದ ಬೆಳೆ ಕೈಕೊಟ್ಟಿದ್ದರಿಂದ ೨ ಸಾವಿರದಷ್ಟು ಹಣವೂ ಕೂಡ ವಾಪಾಸು ಬರುತ್ತಿಲ್ಲ. ಅಂತಹ ದುಸ್ಥಿತಿಯಲ್ಲಿ ರೈತರು ಇದ್ದಾರೆ. ಇಂತಹ ಸಂಕಷ್ಟದ ವೇಳೆಯಲ್ಲಿ ಸರ್ಕಾರವು ಕೂಡಲೇ ಬೆಳೆ ಪರಿಹಾರವನ್ನು ನೀಡಬೇಕೆನ್ನುವುದು ಕೃಷಿಕರ ಆಗ್ರಹ. ಇದು ರಾಜ್ಯ ಬಿಜೆಪಿಯ ನಿಲುವು ಆಗಿದ್ದು, ರೈತರ ಈ ಆಗ್ರಹವನ್ನು ಸರ್ಕಾರಕ್ಕೆ ಮುಟ್ಟಿಸುತ್ತೇವೆ.

- ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

------------------------

ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಶಿವಮೊಗ್ಗ ಮತ್ತು ಕೋಲಾರದಲ್ಲಿ ಕೋಮು ಪ್ರಚೋದನೆ ಘಟನೆಗಳು ನಡೆದಿವೆ. ಅವುಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು. ರಾಜ್ಯ ಬಿಜೆಪಿ ರೈತರ ಸಂಕಷ್ಟದಲ್ಲಿ ಅವರ ಜೊತೆಗೆ ಇರುತ್ತದೆ. ಪ್ರಧಾನಿ ಮೋದಿಯವರು ಈಗಾಗಲೇ ರೈತರಿಗೆ ಘೋಷಣೆ ಮಾಡಿರುವ ಎಲ್ಲಾ ಸೌಲಭ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.--------------------