ಸಾರಾಂಶ
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಡಾ. ಮಧುಕರ್ ಶೆಟ್ಟಿಯವರ 6ನೇ ಪುಣ್ಯ ಸ್ಮರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಾಮಾಜಿಕ ಕಳಕಳಿ, ಅಸಹಾಯಕರಿಗೆ ಆಸರೆ, ಅನ್ಯಾಯವನ್ನು ಸಹಿಸದ ಹಾಗೂ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಐಪಿಎಸ್ ಅಧಿಕಾರಿ ದಿ. ಡಾ. ಮಧುಕರ್ಶೆಟ್ಟಿ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಂ ಅಮಟೆ ಹೇಳಿದರು.ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಡಾ. ಮಧುಕರ್ ಶೆಟ್ಟಿ ಯುವ ಬಳಗ ಏರ್ಪಡಿಸಿದ್ಧ ಡಾ. ಮಧುಕರ್ಶೆಟ್ಟಿಯವರ 6ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಕರ್ತವ್ಯದ ವೇಳೆಯಲ್ಲಿ ಮಧುಕರ್ರವರ ದೈಹಿಕ ಮನೋಬಲಕ್ಕೆ ಸಾಟಿ ಇರಲಿಲ್ಲ. ಶಿಸ್ತು, ಸಂಯಮ ಹಾಗೂ ಸಮಯದ ಪಾಲನೆ ಅಧಿಕಾರಿಗಳನ್ನು ನಿಬ್ಬೆರಗಾಗಿಸಿತ್ತು. ಡಿವೈಎಸ್ಪಿಯಾಗಿ ಕೆಲ ಕಾಲ ಅವರೊಟ್ಟಿಗೆ ಕರ್ತವ್ಯ ನಿರ್ವಹಿಸಿದ್ದನ್ನು ಸ್ಮರಿಸಿದ ಅವರು, ಕನ್ನಡ ನಾಡಿನಲ್ಲಿ ಮತ್ತೆ ಜನಿಸಿ ಪೊಲೀಸ್ ಇಲಾಖೆಯಲ್ಲೇ ಸೇವೆ ಸಲ್ಲಿಸುವಂತಾಗಲೀ ಎಂದು ಆಶಿಸಿದರು.ದುರ್ಬಲರು ಅಥವಾ ಅಸಹಾಯಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರಿಂದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಪೊಲೀಸ್ ಸಿಬ್ಬಂದಿ, ಜನಸಾಮಾನ್ಯರು ಕೂಡಾ ಅವರ ಶ್ಲಾಘನೀಯ ಕೆಲಸಕ್ಕೆ ಮಾರು ಹೋಗಿರುವ ಜೊತೆಗೆ ಅಭಿಮಾನಿ ಬಳಗವನ್ನು ಹುಟ್ಟು ಹಾಕಿ ಸ್ಮರಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ನೊಂದವರ ಪಾಲಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಭಿಮುಖರಾದವರು ಮಧುಕರ್ಶೆಟ್ಟಿ. ಐಪಿಎಸ್ ಅಧಿಕಾರಿ ಎಂಬ ಗರ್ವ ಹೊಂದದೇ ಜನರಲ್ಲಿ ಸಾಮಾನ್ಯರಂತೆ ಬೆರೆಯುವ ಗುಣ ಹೊಂದಿದ್ದರು ಎಂದು ಹೇಳಿದರು.
ಗುಪ್ತಹಳ್ಳಿ ಶೆಟ್ಟಿ ನಿವಾಸಿ ಬೈರಗದ್ದೆ ರಮೇಶ್ ಮಾತನಾಡಿ, ಐಪಿಎಸ್ ಎಂಬ ಶಕ್ತಿಯನ್ನು ಮೊದಲ ಬಾರಿಗೆ ತೋರಿದ ಅಧಿಕಾರಿ ಮಧುಕರ್ ಶೆಟ್ಟಿರವರು. ಭೂಮಿ, ಬದುಕು ಕಳೆದುಕೊಂಡು ಸಾಯುವ ಸ್ಥಿತಿಯಲ್ಲಿದ್ಧ ಹಲವಾರು ಕುಟುಂಬಕ್ಕೆ ಖುದ್ದು ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ಬದುಕು ರೂಪಿಸಿಕೊಟ್ಟವರನ್ನು ಇಂದಿಗೂ ಗ್ರಾಮದ ಪ್ರತಿ ಮನೆಗಳಲ್ಲಿ ಪೂಜಿಸಲಾಗುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಮಧುಕರ್ ಶೆಟ್ಟಿ ಅಭಿಮಾನಿ ಬಳಗದ ಅಧ್ಯಕ್ಷ ಚೌಡಪ್ಪ, ಅತ್ಯಂತ ಕಡಿಮೆ ಅವಧಿಯಲ್ಲೇ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಿ ಜನಪರ ಕೆಲಸ ಕೈಗೊಂಡವರು ಮಧುಕರ್ಶೆಟ್ಟಿ ಎಲ್ಲದರೂ ದೌರ್ಜನ್ಯ ಕಂಡು ಬಂದಲ್ಲಿ ತ್ವರಿತವಾಗಿ ತೆರಳಿ ಸ್ಪಂದಿಸುವ ಗುಣ ಹೊಂದಿದ್ದರು. ಇವರ ಬದುಕನ್ನು ನಾಡಿಗೆ ತಿಳಿಸಲು ಪ್ರತಿ ವರ್ಷ ಜನ್ಮದಿನ ಹಾಗೂ ಪುಣ್ಯಸ್ಮರಣೆ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ನಿವೃತ್ತಿರಾದ ಹದಿನೈದು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಆನಂದ್, ಅಭಿಮಾನಿ ಬಳಗದ ಉಪಾಧ್ಯಕ್ಷ ಲೋಕೇಶ್ನಾಯ್ಕ್, ಪ್ರಧಾನ ಕಾರ್ಯದರ್ಶಿ ಮೋಹನ್, ಸದಸ್ಯರಾದ ಡಿಂಪಲ್, ಚೈತ್ರ ಗೌಡ, ನವೀನಾ, ಪೊಲೀಸ್ ಅಧಿಕಾರಿ ಸುನೀತಾ, ಪಲ್ಲವಿ ಸಿ.ಟಿ.ರವಿ, ರೂಪನಾಯ್ಕ್ ಇದ್ದರು. 29 ಕೆಸಿಕೆಎಂ 3ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಡಾ.ಮಧುಕರ್ ಶೆಟ್ಟಿ ಯುವ ಬಳಗ ಡಾ. ಮಧುಕರ್ ಶೆಟ್ಟಿಯವರ 6ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಏರ್ಪಡಿಸಿತ್ತು. ಡಾ. ವಿಕ್ರಂ ಅಮಟೆ, ಅನಿಲ್ ಆನಂದ್, ಲೋಕೇಶ್ ನಾಯ್ಕ್, ಡಿಂಪಲ್, ಪಲ್ಲವಿ ಸಿ.ಟಿ. ರವಿ, ಸುನೀತಾ ಇದ್ದರು.