ಸಾರಾಂಶ
ಜೇವರ್ಗಿ ಪಟ್ಟಣದ ಓಂನಗರ ಬಡಾವಣೆಯಲ್ಲಿರುವ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಶನಿವಾರ ಬೆಳಗ್ಗೆ ಉಪಾಹಾರ ಸೇವಿಸಿ ಅಸ್ವಸ್ಥಗೊಂಡ ಘಟನೆ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಕನ್ನಡಪ್ರಭ ವಾರ್ತೆ ಜೇವರ್ಗಿ
ಪಟ್ಟಣದ ಓಂನಗರ ಬಡಾವಣೆಯಲ್ಲಿರುವ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಶನಿವಾರ ಬೆಳಗ್ಗೆ ಉಪಾಹಾರ ಸೇವಿಸಿ ಅಸ್ವಸ್ಥಗೊಂಡ ಘಟನೆ ಸಂಭವಿಸಿದ ಬಗ್ಗೆ ವರದಿಯಾಗಿದೆ.ಶನಿವಾರ ಬೆಳಗ್ಗೆ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ರೈಸ್ ಬಾತ್ ಸೇವಿಸಿದ ನಂತರ ವಾಂತಿ, ಹೊಟ್ಟೆ ನೋವು, ತಲೆಸುತಿತ್ತಿರುವುದರಿಂದ ವಿದ್ಯಾರ್ಥಿನಿಯರನ್ನು ಸ್ಥಳಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. 18 ವಿದ್ಯಾರ್ಥಿನಿಯರ ಪೈಕಿ 7 ವಿದ್ಯಾರ್ಥಿನಿಯರಿಗೆ ವಿಷ ಆಹಾರ ಸೇವನೆಯಿಂದ ಹೊಟ್ಟೆ ನೋವು, ವಾಂತಿ ಆಗಿದೆ ಎಂದು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್ ತಿಳಿಸಿದ್ದಾರೆ.
ನಂತರ ಓಂ ನಗರ ಬಡಾವಣೆಯಲ್ಲಿರುವ ಮೊರಾರ್ಜಿ ವಸತಿ ನಿಲಯಕ್ಕೆ ಭೇಟಿ ನೀಡಿದ ತಹಸೀಲ್ದಾರ ಮಲ್ಲಣ್ಣ ಯಲಗೋಡ ಅವರಿಗೆ ಮಾತನಾಡಿದ ವಿದ್ಯಾರ್ಥಿನಿಯರು, ಶಾಲೆಯಲ್ಲಿ ಆಹಾರ ಪದಾರ್ಥಗಳು ಸ್ವಚ್ಛ ಗೊಳಿಸದೇ ಹುಳಹುಪಟ್ಟಿಗಳು ತುಂಬಿದ ಆಹಾರವನ್ನೇ ನೀಡಲಾಗುತ್ತಿದೆ. ನಿಗದಿತ ಸಮಯದಲ್ಲಿ ಊಟ ಉಪಹಾರ ನೀಡುವುದಿಲ್ಲ. ಅರ್ಧ ಬೆಂದ ಆಹಾರವನ್ನೇ ಸೇವನೆ ಮಾಡಬೇಕಾದ ಪರಿಸ್ಥಿತಿ ನಮ್ಮ ಪಾಲಕರು ಸಾಕಷ್ಟು ಬಾರಿ ಮನವಿ ಮಾಡಿದರು.ಅಡುಗೆ ಮಾಡುವರು ಪ್ರಾಚಾರ್ಯ ಮಾತನ್ನು ತಿರಸ್ಕರಿಸುತ್ತಿದ್ದಾರೆ. ಸಂಪೂರ್ಣ ಕಲುಷಿತ ಗೊಂಡ ಕೊಳಚೆ ನೀರನ್ನೆ ಅಡುಗೆಗೆ ಬಳಸಲಾಗುತ್ತಿದೆ. ಆಹಾರ ಧಾನ್ಯದಲ್ಲಿ ಹುಳ ಹುಪಟ್ಟಿ, ಕೊಳಚೆ ನೀರು ಹೀಗಾದರೇ ನಾವು ಬದುಕುವುದೇ ಕಷ್ಟ ಸಾಧ್ಯವೆಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು. ಅಡುಗೆ ಸಿಬ್ಬಂದಿಗಳನ್ನು ಕೂಡಲೆ ಇಲ್ಲಿಂದ ಸ್ಥಳಾಂತರ ಗೊಳಿಸಿದಾಗ ಮಾತ್ರ ನಮಗೆ ಗುಣಮಟ್ಟದ ಆಹಾರ ಸಿಗಲು ಸಾಧ್ಯವೆಂದು ಆಕ್ರೋಶ ಬರಿತರಾಗಿ ಹೇಳಿದರು.ನಮ್ಮ ಪಾಲಕರು ಇಲ್ಲಿಂದ ಟಿಸಿ ತೆಗೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇಲ್ಲಿರುವ ಗುಣಮಟ್ಟದ ಶಿಕ್ಷಣ ನಮ್ಮನ್ನು ಹೋಗಲು ಬಿಡುತ್ತಿಲ್ಲ. ವಸತಿ ನಿಲಯದ ಊಟ, ಉಪಹಾರದ ಗುಣಮಟ್ಟ ಸುಧಾರಣೆ ಆಗ ಬೇಕಾದರೆ ಅಡುಗೆ ಸಿಬ್ಬಂದಿ ಕೂಡಲೆ ಬೇರೆ ಅವರನ್ನು ನಿಯೋಜನೆ ಮಾಡಿ ವಿದ್ಯಾರ್ಥಿನಿಯರ ಬದುಕು ಹಸನಾಗಿಸಬೇಕೆಂದು ಒತ್ತಾಯಿಸಿದರು.
ನಂತರ ತಹಸೀಲ್ದಾರ ಮಲ್ಲಣ್ಣ ಯಲಗೋಡ ಅವರು ಪ್ರಾಚಾರ್ಯ ಶಿವಪುತ್ರಪ್ಪ ಕಕ್ಕಳಮೇಲಿ ಅವರೊಂದಿಗೆ ಮಾತನಾಡಿ, ಕೂಡಲೆ ಗುಣಮಟ್ಟದ ಆಹಾರ ಹಾಗೂ ನೀರು ಪೂರೈಕೆಯಾಗಬೇಕು. ಇಲ್ಲದಿದ್ದರೆ ತಾವು ಜಿಲ್ಲಾಧಿಕಾರಿಗಳು ಅಡುಗೆ ಸಿಬ್ಬಂದಿಗೆ ತೆಗೆದು ಹಾಕಲು ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು.