ಸರ್ಕಾರ ಗಾಢ ನಿದ್ರೆಯಲ್ಲಿದ್ದು ಮಳೆ ಮುಂಜಾಗ್ರತೆಯನ್ನೇ ಮರೆತಿದೆ

| Published : May 27 2025, 11:50 PM IST

ಸರ್ಕಾರ ಗಾಢ ನಿದ್ರೆಯಲ್ಲಿದ್ದು ಮಳೆ ಮುಂಜಾಗ್ರತೆಯನ್ನೇ ಮರೆತಿದೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಭೂಕುಸಿತ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ೭೫ರ ಹತ್ತು ಕಿ.ಮೀ. ವ್ಯಾಪ್ತಿಯ ಹಲವೆಡೆ ಭೂಕುಸಿತ ಸಂಭವಿಸಿದ್ದು, ತಡೆಗೋಡೆ ಕಾಮಗಾರಿ ಬಹುತೇಕ ಕಳಪೆಯಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಹೆದ್ದಾರಿಯಲ್ಲಿ ನಿತ್ಯ ಭೂಕುಸಿತ ಸಂಭವಿಸುತ್ತಿರುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ಕಾಮಗಾರಿ ಬಗ್ಗೆ ನಿಗಾ ವಹಿಸಬೇಕಿರುವ ಸಚಿವರು ಕಾಣೆಯಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದಲೇ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸರ್ಕಾರ ಗಾಢ ನಿದ್ರೆಯಲ್ಲಿದ್ದು ಮಳೆ ಮುಂಜಾಗ್ರತೆ ವಹಿಸುವುದನ್ನು ಮರೆತಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಭೂಕುಸಿತ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ೭೫ರ ಹತ್ತು ಕಿ.ಮೀ. ವ್ಯಾಪ್ತಿಯ ಹಲವೆಡೆ ಭೂಕುಸಿತ ಸಂಭವಿಸಿದ್ದು, ತಡೆಗೋಡೆ ಕಾಮಗಾರಿ ಬಹುತೇಕ ಕಳಪೆಯಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಹೆದ್ದಾರಿಯಲ್ಲಿ ನಿತ್ಯ ಭೂಕುಸಿತ ಸಂಭವಿಸುತ್ತಿರುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ಕಾಮಗಾರಿ ಬಗ್ಗೆ ನಿಗಾ ವಹಿಸಬೇಕಿರುವ ಸಚಿವರು ಕಾಣೆಯಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದಲೇ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.

ಸಚಿವರು ಕಾಲಹರಣ ಮಾಡುತ್ತಿದ್ದಾರೆ:

ಈ ಹಿಂದಿನ ಸರ್ಕಾರಗಳು ಮಳೆಗಾಲಕ್ಕೂ ಮುನ್ನ ಸಾಂಭವ್ಯ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ನಡೆಸಿ ಪರಿಹಾರದ ಮೊತ್ತವನ್ನು ಘೋಷಿಸುವ ಮೂಲಕ ಜಿಲ್ಲಾಡಳಿತ ಸಕ್ರಿಯವಾಗಿ ಕೆಲಸ ಮಾಡುವಂತೆ ಆದೇಶ ನೀಡುತ್ತಿದ್ದವು. ಆದರೆ, ಸಿದ್ದರಾಮಯ್ಯನವರ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಸಭೆ ನಡೆಸದೆ ಕೇವಲ ಎರಡು ವರ್ಷದ ಸಾಧನ ಸಮಾವೇಶ ನಡೆಸುವುದರಲ್ಲಿ ಮೈಮರೆತಿದ್ದು ಸಚಿವರು ಐಪಿಎಲ್ ವೀಕ್ಷಿಸುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದರು.

ಮುಂಜಾಗ್ರತೆ ವಹಿಸಿ:ರಾಜ್ಯದ ಹಲವೆಡೆ ಭೂಕುಸಿತ ಸಂಭವಿಸಿ ಭಾರಿ ಅನಾಹುತಗಳು ನಡೆಯುತ್ತಿದ್ದರೂ ಇದುವರೆಗೆ ಯಾವುದೇ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಹಾನಿ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಇದು ಜನಸಾಮಾನ್ಯರ ಮೇಲೆ ಸರ್ಕಾರಕ್ಕಿರುವ ಕಾಳಜಿಯನ್ನು ಎತ್ತಿ ತೋರುತ್ತಿದೆ. ಒಂದೆಡೆ ಮಳೆಯಿಂದ ಅನಾಹುತಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಕೋವಿಡ್ ಬಿರುಗಾಳಿಯಂತೆ ರಾಜ್ಯದಲ್ಲಿ ಹಬ್ಬುತ್ತಿದೆ. ಈ ಬಗ್ಗೆಯು ಸರ್ಕಾರ ನಿರ್ಲಕ್ಷ್ಯವಹಿಸಿದೆ. ಈ ಬಗ್ಗೆ ಆರೋಗ್ಯ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ತುಟಿಬಿಚ್ಚುತ್ತಿಲ್ಲ. ಕೋವಿಡ್‌ನಿಂದ ಜನಸಾಮಾನ್ಯರನ್ನು ರಕ್ಷಿಸಲು ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಲ್ಲಿ ಲಭ್ಯವಿರುವ ಕೋವಿಡ್ ಲಸಿಕೆ ಸಂಖ್ಯೆಯನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು.

ನೀತಿ ಆಯೋಗದ ಸಭೆಗೆ ಹೋಗದ ಮುಖ್ಯಮಂತ್ರಿಗಳು ಅನಾವಶ್ಯಕವಾಗಿ ಅನುದಾನ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ. ಪಕ್ಕದ ತಮಿಳುನಾಡು ಸರ್ಕಾರದ ಪ್ರತಿನಿಧಿಗಳು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವ ಮೂಲಕ ರಾಜ್ಯಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ರಾಜಸ್ಥಾನದಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶಕ್ಕೆ ಹೋಗಲು ಸರ್ಕಾರದ ಪ್ರತಿನಿಧಿಗಳಿಗೆ ಸಮಯವಿದೆ, ನೀತಿ ಆಯೋಗದ ಸಭೆಗೆ ಹೋಗಲು ಸಮಯವಿಲ್ಲವ? ಎಂದು ಪ್ರಶ್ನಿಸಿದರು. ಇದರಿಂದ ಸಿದ್ದರಾಮಯ್ಯನವರಿಗೆ ಯಾವುದೇ ನಷ್ಟವಿಲ್ಲ ನಷ್ಟವೆಲ್ಲ ರಾಜ್ಯದ ಜನರಿಗೆ. ಇಂತಹ ದುರಹಂಕಾರದ ಸರ್ಕಾರವನ್ನು ಕಿತ್ತುಹಾಕುವ ಸಮಯ ಶೀಘ್ರವೇ ಬರಲಿದೆ ಎಂದರು.

ನಾವು ಜಗ್ಗುವವರಲ್ಲ:ರಾಜ್ಯ ಸರ್ಕಾರ ಸೇಡಿನ ರಾಜಕೀಯ ಮಾಡುವುದರಲ್ಲೆ ಕಾಲಕಳೆಯುತ್ತಿದೆ. ವಿರೋಧ ಪಕ್ಷದ ನಾಯಕರ ಕೆಲಸವೇ ಸರ್ಕಾರವನ್ನು ಟೀಕೆ ಮಾಡುವುದು ಆದರೆ, ಸರ್ಕಾರ ಟೀಕಕಾರರ ಮೇಲೆ ದೂರು ದಾಖಲಿಸುವ ಮೂಲಕ ಅವರ ಮನೋಬಲವನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ. ಇಂತಹದಕ್ಕೆಲ್ಲ ಜಗ್ಗುವವರು ನಾವಲ್ಲ. ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಇಂದಿರಾಗಾಂಧಿಯನ್ನು ಎದುರು ಹಾಕಿಕೊಂಡವರು ನಾವು. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಇವರ‍್ಯಾವ ಲೆಕ್ಕ ಎಂದರು.

ಉಚ್ಚಾಟಿಸಿರುವುದು ಸ್ವಾಗತಾರ್ಹ:

ಪಕ್ಷದಲ್ಲೇ ಇದ್ದು ಪಕ್ಷದ ಸಿದ್ಧಾಂತ ಪಾಲಿಸದೆ ಪಕ್ಷಕ್ಕೆ ಹಾನಿ ಉಂಟುಮಾಡುತ್ತಿದ್ದ ನಾಯಕರನ್ನು ಕೇಂದ್ರ ಸರ್ಕಾರ ಉಚ್ಚಾಟನೆ ಮಾಡಿರುವ ಕ್ರಮವನ್ನು ನಾನು ಸ್ವಾಗತಿಸುತ್ತೇನೆ ಎಂದರು. ವಾಗ್ವಾದ:

ತಾಲೂಕಿನ ಆನೇಮಹಲ್ ಗ್ರಾಮದ ಅಡಾಣಿಗುಡ್ಡದಲ್ಲಿರುವ ನಿವಾಸಿಗಳನ್ನು ತೆರುವುಗೊಳಿಸುವಂತೆ ಆದೇಶ ನೀಡಿದ್ದರೂ ಏಕೆ ತೆರವುಗೊಳಿಸಿಲ್ಲ ಎಂದು ಜಿಲ್ಲಾಧಿಕಾರಿ ತಹಸೀಲ್ದಾರ್‌ರನ್ನು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಗ್ರಾ.ಪಂ ಸದಸ್ಯರೊಬ್ಬರು ಪರಿಹಾರ ನೀಡದೇ ಎಲ್ಲಿಗೆ ಹೋಗುವುದು ಪರಿಹಾರ ನೀಡಿರುವ ಕುಟುಂಬಗಳು ಈಗಾಗಲೇ ಸ್ಥಳಾಂತರಗೊಂಡಿವೆ. ಪರಿಹಾರ ನೀಡಿದರೆ ಮನೆಗಳನ್ನು ತೆರವುಗೊಳಿಸಲಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣವಿದೆ. ಆದರೆ, ನ್ಯಾಯಾಲಯ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಆಕ್ರೋಶಗೊಂಡ ಜಿಲ್ಲಾಧಿಕಾರಿ ನಿವ್ಯಾರ್ರಿ ಮಾತನಾಡಲು, ಮಾತನಾಡಬೇಡಿ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಸಿಮೆಂಟ್ ಮಂಜು ಜನರಿಗೆ ಮಾತನಾಡುವ ಹಾಗೂ ನೋವು ಹೇಳಿಕೊಳ್ಳುವ ಹಕ್ಕಿದೆ ಮಾತನಾಡಲಿ ಬಿಡಿ ಎಂದರು. ಪರಿಹಾರ ನೀಡುವವರೆಗೆ ಮನೆಗಳನ್ನು ತೆರವುಗೊಳಿಸಬೇಡಿ ಎಂದು ಆರ್‌ ಅಶೋಕ್‌ ಹೇಳಿದ ನಂತರ ವಾಗ್ವದ ಅಂತ್ಯಗೊಂಡಿತು.

ಈ ವೇಳೆ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಕುಮಾರಸ್ವಾಮಿ. ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ, ಸಹಾಯಕ ಪೊಲೀಸ್ ವರೀಷ್ಠಾಧಿಕಾರಿ ತಮ್ಮಯ್ಯ, ಉಪವಿಭಾಗಾಧಿಕಾರಿ ಡಾ.ಎಂ.ಕೆ ಶೃತಿ. ಡಿವೈಎಸ್‌ಪಿ ಪ್ರಮೋದ್, ತಹಸೀಲ್ದಾರ್ ಅರವಿಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲೀಡ್‌ ಪ್ಯಾಕೇಜ್‌..................... ಬಿಡುವು ನೀಡಿ ಮತ್ತೆ ಸುರಿದ ಜಡಿಮಳೆ

ಹಲವೆಡೆ ಭೂಕುಸಿತ, ಮನೆಗಳಿಗೂ ಭಾರೀ ಹಾನಿ

ಮಂಗಳವಾರ ಮುಂಜಾನೆಯಿಂದ ಮಧ್ಯಾಹ್ನದವರಗೆ ಬಿಡುವು ನೀಡಿದ್ದ ಮಳೆ ಕೆಲಕಾಲ ಬಿಸಿಲಿನ ದರ್ಶನವನ್ನು ಮಾಡಿಸಿತ್ತು. ಆದರೆ ಮಧ್ಯಾಹ್ನದ ನಂತರ ಆಕಾಶವೇ ಬಿರುಕುಬಿಟ್ಟಂತೆ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಸಂಭವಿಸಿದ್ದರೆ ಸಾಕಷ್ಟು ಮನೆಗಳಿಗೂ ಹಾನಿಯಾಗಿದೆ. ಅತ್ತಿಹಳ್ಳಿ ಗ್ರಾಮದಲ್ಲಿ ಮನೆಯೊಂದು ಮುರಿದು ಬಿದ್ದಿದ್ದು ಮನೆಯಲ್ಲಿ ಯಾರು ಇಲ್ಲದ ಪರಿಣಾಮ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಹಾನುಬಾಳ್ ಗ್ರಾಮದ ಆರೋಗ್ಯ ಕೇಂದ್ರದ ತಡೆಗೋಡೆ ಕುಸಿದಿದೆ. ಕೆಸಗಾನಹಳ್ಳಿ ಗಾಮದ ಕಮಲ ಎಂಬುವವರ ಮನೆ ಮೇಲ್ಚಾವಣಿ ಸಂಪೂರ್ಣ ಹಾರಿಹೋಗಿದೆ. ಕೆಲಗಳಲೆ ಗ್ರಾಮದ ಕವಿತಾ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಗೊಂಡಿದೆ. ದೇಖ್ಲಾ ಗ್ರಾಮದ ಮನೆಯೊಂದರ ಗೋಡೆ ಕುಸಿದು ಹಾನಿ ಸಂಭವಿಸಿದೆ. ಹೆನ್ನಲಿ ಗ್ರಾಮದಲ್ಲಿ ತಡೆಗೋಡೆಯೊಂದು ಕುಸಿದು ಹಾನಿಸಂಭವಿಸಿದೆ. ಕೃಷ್ಣಪುರ ಗ್ರಾಮದಲ್ಲಿ ತೆರದ ಬಾವಿಯ ಕಲ್ಲುಕಟ್ಟಡ ಕುಸಿದಿದೆ. ಇದಲ್ಲದೆ ಸಾಕಷ್ಟು ವಿದ್ಯುತ್ ಕಂಬಗಳು ಧರೆಗುರುಳಿದ್ದು ತಾಲೂಕಿನ ಸಾಕಷ್ಟು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.ಫೋಟೋ

ಎಸ್‌ಕೆಪಿಪಿ ೧ ಹಾನುಬಾಳ್ ಗ್ರಾಮದಲ್ಲಿ ಕಟ್ಟಡ ಕುಸಿದಿರುವುದು. ಕವಿತಾ ಎಂಬುವವರ ಮನೆಯ ಮೇಲೆ ಮರಬಿದ್ದಿರುವುದು. ಕಮಲ ಎಂಬುವರ ಮನೆ ಸಂಪೂರ್ಣ ಛಾವಣಿ ಹಾರಿ ಹೋಗಿರುವುದು.