ಮಠಾಧೀಶರು ಸಮಾಜಕ್ಕೆ ಸರಿಯಾದ ದಿಕ್ಕು ತೋರುವ ಸಂಕಲ್ಪ ಮಾಡಬೇಕಾಗಿದ್ದು, ಈ ದೇಶದ ಭವಿಷ್ಯದ ಇಂದಿನ ಮಕ್ಕಳಿಗೆ ಸರಿಯಾದ ಸಂಸ್ಕಾರ ವಿದ್ಯೆ ನೀಡುವ ತೀರ ಅಗತ್ಯವೂ ಇದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ ತಿಳಿಸಿದರು.

ಹಾನಗಲ್ಲ: ಮಠಾಧೀಶರು ಸಮಾಜಕ್ಕೆ ಸರಿಯಾದ ದಿಕ್ಕು ತೋರುವ ಸಂಕಲ್ಪ ಮಾಡಬೇಕಾಗಿದ್ದು, ಈ ದೇಶದ ಭವಿಷ್ಯದ ಇಂದಿನ ಮಕ್ಕಳಿಗೆ ಸರಿಯಾದ ಸಂಸ್ಕಾರ ವಿದ್ಯೆ ನೀಡುವ ತೀರ ಅಗತ್ಯವೂ ಇದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ ತಿಳಿಸಿದರು.ಶುಕ್ರವಾರ ಹಾನಗಲ್ಲಿನಲ್ಲಿ ಗಂಗಾಮತ ಸಮುದಾಯದ ಶ್ರೀ ಗಂಗಾ ಪರಮೇಶ್ವರಿ ಸಮುದಾಯ ಭವನ ಲೋಕಾರ್ಪಣೆ ಸಮಾರಂಭದಲ್ಲಿ ಸಭಾಮಂಟಪ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳೇ ನಮ್ಮ ಸಮಾಜದ ನಿಜವಾದ ಆಸ್ತಿ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ನಿರಾಳವಾಗಿರಬೇಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಇಚ್ಛಾಶಕ್ತಿ ನಿಮ್ಮದಾಗಲಿ. ಮಠಗಳಿಂದ ಆಯಾ ಸಮಾಜದ ಅಭಿವೃದ್ಧಿಯಾಗಬೇಕಲ್ಲದೆ, ಸಮಾಜದ ಅಭಿವೃದ್ಧಿಯಲ್ಲಿ ಇಡೀ ದೇಶದ ಹಿತವಿದೆ ಎಂದರು.ಮಾಜಿ ಸಚಿವ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಕಾರ್ಯಾಧ್ಯಕ್ಷ ಪ್ರಮೋದ ಮಧ್ವರಾಜ ಮಾತನಾಡಿ, ನಮ್ಮ ಮನಸ್ಸು ತಾಯ್ತನದ ಭಾವನೆಗಳನ್ನು ಹೊಂದಿರಬೇಕು. ಸಮಾಜವನ್ನು ಉತ್ತಮವಾಗಿ ಕೊಂಡೊಯ್ಯಲು ಸಮಾಜಮುಖಿ ಚಿಂತನೆ ಮೊದಲು ಬೇಕು. ನಾವು ಸಮಾಜಕ್ಕೆ ಶಕ್ತಿಯಾಗಬೇಕು. ಸಮಾಜದಲ್ಲಿ ಬಿಕ್ಕಟ್ಟು ಸೃಷ್ಟಿಸುವವರ ಅಗತ್ಯ ನಮಗಿಲ್ಲ. ಒಗ್ಗಟ್ಟು ಮೂಡಿಸುವವರು ಬೇಕಾಗಿದ್ದಾರೆ. ಎಲ್ಲ ಕಾಲಕ್ಕೂ ಸಲ್ಲುವ ಒಳ್ಳೆಯ ಕೆಲಸಗಳಲ್ಲಿ ತೃಪ್ತಿ ಕಾಣಬೇಕಾಗಿದೆ ಎಂದರು.

ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಸಮ್ಮುಖವಹಿಸಿ ಮಾತನಾಡಿ, ಮನಸ್ಸು ಮನಸ್ಸುಗಳನ್ನು ಕಟ್ಟುವ ಕೆಲಸಕ್ಕೆ ಆದ್ಯತೆ ನಮ್ಮ ಮನಸ್ಸಿನಲ್ಲಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮಾಜದಲ್ಲಿ ವ್ಯಕ್ತಿಯ ದಾನ ತ್ಯಾಗದಿಂದ ಒಳ್ಳೆಯ ಕೆಲಸಗಳು ಸಾಧ್ಯ. ಅದಕ್ಕಾಗಿ ಸಮಾಜವನ್ನು ಒಟ್ಟಾಗಿ ಜೋಡಿಸಿಕೊಂಡು ಹೋಗುವ ಸಮರ್ಥ ನಾಯಕರ ಕೈಯಲ್ಲಿ ಸಮಾಜವಿರಬೇಕು. ಗಂಗಾಮತ ಸಮುದಾಯ ಎಲ್ಲ ಕಾಲಕ್ಕೂ ಒಳ್ಳೆಯದನ್ನೇ ಬಯಸಿದ ಸಮುದಾಯ. ನಿಜಶರಣ ಅಂಬಿಗರ ಚೌಡಯ್ಯನವರ ಪೀಠ ಸ್ಥಾಪನೆಯಿಂದ ಈ ಸಮುದಾಯದಲ್ಲಿ ಒಳ್ಳೆಯ ಒಗ್ಗಟ್ಟು ಸಾಧಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದರು.

ಸುಕ್ಷೇತ್ರ ನರಸಿಪುರ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಶಾಸಕ ಶ್ರೀನಿವಾಸ ಮಾನೆ ಸಮುದಾಯ ಭವನದ ಭೋಜನಾಲಯ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂದಾನ ಮಾಡಿದ ಚಂದ್ರಶೇಖರ, ಮೋಹನ, ಪ್ರಭು, ಮಾಲತಿ ಮಲಗುಂದ ಹಾಗೂ ಚಂದ್ರಕಲಾ ಶಿವಪುತ್ರಪ್ಪ ಶೇಷಗಿರಿ ಅವರನ್ನು ಸನ್ಮಾನಿಸಲಾಯಿತು.ಗಂಗಾಮತ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಅನಂತವಿಕಾಸ ನಿಂಗೋಜಿ ಅಧ್ಯಕ್ಷತೆವಹಿಸಿದ್ದರು. ಧಾರವಾಡದ ನೆಲ ಜಲ ನಿರ್ವಹಣಾ ವಿಭಾಗದ ಅಧೀಕ್ಷಕ ಅಭಿಯಂತರ ಬಿ.ವಾಯ್.ಬಂಡಿವಡ್ಡರ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ, ಲಕ್ಷ್ಮೀ ನಾರಾಯಣಗೌಡ ಪಾಟೀಲ, ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷ ಪ್ರದೀಪ ಶೇಷಗಿರಿ, ಹಾನಗಲ್ಲ ನಗರಘಟಕದ ಅಧ್ಯಕ್ಷ ಭಾಸ್ಕರ ಹುಲಮನಿ, ನೌಕರರ ಘಟಕದ ಅಧ್ಯಕ್ಷ ಕಠಾರಿ ಮುಖ್ಯ ಅತಿಥಿಗಳಾಗಿದ್ದರು.ಮಮತಾ ಹಾಗೂ ಅಶೋಕ ಆರೆಗೊಪ್ಪ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ನಾಗರಾಜ ಬಾರ್ಕಿ ಸ್ವಾಗತಿಸಿದರು. ಬಾಲಚಂದ್ರ ಅಂಬಿಗೇರ ಕಾರ್ಯಕ್ರಮ ನಿರೂಪಿಸಿದರು.ಸಮಾಜದ ಕಳಕಳಿಗೆ ಭೂದಾನ ಮಾಡಿದ್ದರಿಂದಲೇ ಆಸ್ಪತ್ರೆ, ಸಮುದಾಯ ಭವನ, ಆಸ್ಪತ್ರೆಗಳು ನಿರ್ಮಾಣವಾದವು. ಇಂದು ಸ್ಮಶಾನಕ್ಕೂ ಭೂಮಿ ಸಿಗುತ್ತಿಲ್ಲ. ಇಲ್ಲಿ ಗಂಗಾಪರಮೇಶ್ವರಿ ಸಮುದಾಯ ಭವನ ನಿರ್ಮಾಣವಾಗಿರುವುದು ಅತ್ಯಂತ ಸಂತಸಕರ ಸಂಗತಿ. ಇದರೊಂದಿಗೆ ಅಂಬಿಗರ ಚೌಡಯ್ಯನವರ ವಚನಗಳ ಸಾರ ಅರಿತು ನಡೆಯುವುದು ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.