ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ:ವೃತ್ತಿನಿರತ ಪತ್ರಬರಹಗಾರರ ಬದುಕು ಅತಂತ್ರವಾಗಿದೆ ಎಂದು ಪತ್ರ ಬರಹಗಾರರ ಒಕ್ಕೂಟದ ರಾಜ್ಯ ಸಂಚಾಲಕ ಪ್ರಕಾಶ್ ರಾಜೇ ಅರಸ್ ತಿಳಿಸಿದರು.ಪಟ್ಟಣದಲ್ಲಿ ನಡೆದ ಪತ್ರ ಬರಹಗಾರರ ಸಂಘದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಹಿರಿದಾದ ವೃತ್ತಿ ಮಾಡುತ್ತಿರುವ ನಮಗೆ ಸೇವಾ ಭದ್ರತೆಯಿಲ್ಲ. ನಾಗರೀಕ ಜನಸ್ನೇಹಿ ಯಾಗಿರುವ ನಮಗೆ ವೃತ್ತಿ ಭದ್ರತೆ ಬೇಕು. ಆದ್ದರಿಂದ ನಮ್ಮ ಮನವಿಗಳನ್ನು ರಾಜ್ಯ ಸರ್ಕಾರವು ಮಾನವೀಯ ನೆಲಗಟ್ಟಿನ ಆಧಾರದ ಮೇಲೆ ಸಮಸ್ಯೆ ಬಗೆಹರಿಸಿಕೊಡಬೇಕು ಎಂದರು.ಕಾನೂನು ಬದ್ಧವಾಗಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರ ಬರಹಗಾರರ ಬದುಕು ಇಂದು ಆನ್ ಲೈನ್ ಎಂಬ ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ಕೆಲಸಕ್ಕೆ ಸೇವಾ ಭದ್ರತೆಯಿಲ್ಲ, ಸರ್ಕಾರವು ನಮ್ಮ ಸಂವಿಧಾನ ಬದ್ಧವಾದ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಪತ್ರ ಬರಹಗಾರರಾದ ನಾವು ಬೀದಿಗೆ ಬೀಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಪತ್ರಬರಹಗಾರರನ್ನು ಸಂಘಟಿಸಿ ಒಗ್ಗೂಡಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಮಂಡ್ಯ, ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುತ್ತಿರುವ ನಮ್ಮ ರಾಜ್ಯ ಒಕ್ಕೂಟದ ತಂಡವು ಪತ್ರ ಬರಹಗಾರರ ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.ರಾಜ್ಯ ಒಕ್ಕೂಟದ ಪದಾಧಿಕಾರಿಗಳಾದ ನರಸಿಂಹಮೂರ್ತಿ, ಲೋಕೇಶ್ ಟಿ.ನರಸೀಪುರ ಮಾತನಾಡಿ, ಪತ್ರ ಬರಹಗಾರರಲ್ಲಿ ಅರಿವಿನ ಜಾಗೃತಿ ಮೂಡಿಸಿದರು. ಸಭೆಯಲ್ಲಿ ಪತ್ರ ಬರಹಗಾರರ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ಕೆ.ಸಿ. ವೆಂಕಟರಾಮು, ಅಧ್ಯಕ್ಷ ಶಿವಲಿಂಗೇಗೌಡ, ಉಪಾಧ್ಯಕ್ಷ ಕೆ.ಎಸ್.ನಾಗರಾಜು, ಕಾರ್ಯದರ್ಶಿ ಹರೀಶ್ ಕುಮಾರ್, ಪದಾಧಿಕಾರಿಗಳಾದ ಮುರುಗೇಶ್, ಶಂಕರನಾಗ್, ನರಸಿಂಹಮೂರ್ತಿ, ಮಹದೇವಸ್ವಾಮಿ, ಸಾವಿತ್ರಿ ಹೆಗಡೆ, ಮಂಜುನಾಥ್, ಹರೀಶ್ ಕುಮಾರ್, ಬಸವರಾಜ್ ಬಾಬು, ಸಣ್ಣಸ್ವಾಮಿ, ಮೆಳ್ಳಳ್ಳಿ ಮಹದೇವು, ಶ್ರೀನಿವಾಸಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.