ಸಾರಾಂಶ
ಹಾವೇರಿ: ತಾಲೂಕಿನ ಅಗಡಿ ಗ್ರಾಮದ ಶ್ರೀ ಶೇಷಾಚಲ ಸದ್ಗುರು ಪ್ರೌಢಶಾಲೆ 50 ವರ್ಷ ಪೂರ್ಣಗೊಳಿಸಿದ್ದರಿಂದ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಸುವರ್ಣ ಮಹೋತ್ಸವ ಸಮಾರಂಭದ ಯಶಸ್ಸು ಆರ್ಥಿಕ ಕ್ರೋಢೀಕರಣವನ್ನು ಅವಲಂಬಿಸಿದೆ. ದಾನಗಳಲ್ಲಿ ವಿದ್ಯಾದಾನ ಅತ್ಯಂತ ಶ್ರೇಷ್ಠವಾಗಿದ್ದು, ಹಿರಿಯ ವಿದ್ಯಾರ್ಥಿಗಳು ಹಾಗೂ ದಾನಿಗಳು ಉದಾರತೆಯನ್ನು ತಾಳಬೇಕು ಎಂದು ಶ್ರೀ ಕ್ಷೇತ್ರ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಹೇಳಿದರು.ಶ್ರೀ ಶೇಷಾಚಲ ಸದ್ಗುರು ಪ್ರೌಢಶಾಲೆಯಲ್ಲಿ ನಡೆದ ದ್ವಿತೀಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಎಲ್ಲರ ಪಾಲ್ಗೊಳ್ಳುವಿಕೆಯು ಅಗತ್ಯ. ಇದನ್ನು ಐತಿಹಾಸಿಕ ಕಾರ್ಯಕ್ರಮವನ್ನು ಮಾಡೋಣ ಎಂದು ಹೇಳಿದರು.ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗೆಣ್ಣಿ ಮಾತನಾಡಿ, ಸಮಾರಂಭದ ಅಂದಾಜು ವೆಚ್ಚ ಮಾಡಬೇಕು, ಇದೊಂದು ನಮ್ಮ ಶಾಲೆ, ನಮ್ಮ ಊರು ಎಂಬ ಅಭಿಮಾನದ ಜೊತೆ ಎಲ್ಲರೂ ಕೈಜೋಡಿಸೋಣ ಎಂದರು.ನಿವೃತ್ತ ಮುಖ್ಯೋಪಾಧ್ಯಾಯ ಹನುಮಂತಗೌಡ ಗೊಲ್ಲರ ಮಾತನಾಡಿ, ಶಾಲೆ ಪ್ರಾರಂಭವಾದ ವರ್ಷದಿಂದ 2024 ರವರೆಗೆ 3300 ವಿದ್ಯಾರ್ಥಿಗಳು ಅಧ್ಯಯನ ಪೂರೈಸಿ ಇಂದು ದೇಶ-ವಿದೇಶಗಳಲಿ, ನಾಡಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರೆಲ್ಲರನ್ನು ಸೇರಿಸುವ ಕಾರ್ಯಕ್ರಮವಾಗಬೇಕಿದೆ. ಸಮಾಜಮುಖಿ ಸೇವೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಬೇಕಿದೆ. ಹಿರಿಯ ವಿದ್ಯಾರ್ಥಿಗಳು ತಮ್ಮ ಸಂಘಟನೆ- ನಾಯಕತ್ವ ಬೆಳೆಸಿಕೊಳ್ಳಲು ಇದೊಂದು ಸುವರ್ಣ ಅವಕಾಶ ಎಂದು ಹೇಳಿದರು.ಸ್ವಾಗತ ಸಮಿತಿ, ಹಣಕಾಸು, ಸ್ಮರಣ ಸಂಚಿಕೆ, ವೇದಿಕೆ, ಪ್ರಚಾರ, ಆಹಾರ, ಮೆರವಣಿಗೆ, ಸನ್ಮಾನ, ಸಾಂಸ್ಕೃತಿಕ ಹಾಗೂ ಸ್ವಯಂಸೇವಕರು ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜುಲೈ 21ರಂದು ಬೆಳಗ್ಗೆ 10 ಗಂಟೆಗೆ ತೃತೀಯ ಪೂರ್ವಭಾವಿ ಸಭೆಯನ್ನು ಕರೆಯಲು ಸಭೆ ನಿರ್ಧರಿಸಲಾಯಿತು. ಪ್ರಗತಿಪರ ರೈತರ ಶಿವಪುತ್ರಪ್ಪ ಶಿವಣ್ಣವರ, ಚನ್ನವೀರಪ್ಪ ಬಸೇಗೆಣ್ಣಿ, ಹೇಮಂತ್ಕುಮಾರ್ ಬಸೇಗೆಣ್ಣಿ, ವಿರುಪಾಕ್ಷಪ್ಪ ಹೆಡಿಗೊಂಡ, ಹನುಮಂತ ಕುಲಕರ್ಣಿ, ಮಂಜುನಾಥ್ ಕುಮರಿ, ಐ.ಡಿ. ನದಾಫ್, ಆಂಜನೇಯ ಈಳಿಗೆರ್, ದಾನಮ್ಮ ಮರಗೂರ್, ಶಿವಣ್ಣ ಬಸೇಗೆಣ್ಣಿ, ಕೃಷ್ಣ ಜವಳಿ, ಶೈಲಜಾ ಕೋರಿಶೆಟ್ಟರ್, ಡಾ. ಸತೀಶ್ ಈಳಿಗೇರ, ಹನುಮಂತ ದಾಸರ, ಬಸವರಾಜ್ ಕಿತ್ತೂರ, ಸಿ.ಕೆ. ಪಾಟೀಲ್ ಹಾಗೂ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಮುಖ್ಯೋಪಾಧ್ಯಾಯ ರಾಘವೇಂದ್ರ ನಾಡಿಗೇರ್ ಸ್ವಾಗತಿಸಿದರು. ಅಕ್ಕಮ್ಮ ಕುಲಕರ್ಣಿ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಪ್ಪ ಮಣ್ಣೂರ್ ವಂದಿಸಿದರು.