ರಾಜೇಂದ್ರ ರಾವ್‌ಕನ್ನಡಪ್ರಪಭ ವಾರ್ತೆ ಕೆ.ಆರ್.ನಗರ ಚುಚ್ಚುಮದ್ದು ನೀಡಲೆಂದು ಅಂಬ್ಯುಲೆನ್ಸ್‌ನಲ್ಲಿ ಸುಮಾರು 26ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿನಿಯರನ್ನು ಕುರಿಗಳಂತೆ ತುಂಬಿಕೊಂಡು ಹೋದ ದೃಶ್ಯವನ್ನು ಕಂಡ ಪಟ್ಟಣದ ಜನತೆ ಶಾಲಾ ವಿದ್ಯಾರ್ಥಿನಿಯರಿಗೆ ಏನಾಯಿತು ಎಂದು ಕೆಲವೊತ್ತು ಹೌಹಾರಿದ ಘಟನೆ ನಡೆಯಿತು.ಸರ್ಕಾರದ ಆದೇಶದಂತೆ ಎಲ್ಲೆಡೆ 14 ವರ್ಷದ ಹೆಣ್ಣುಮಕ್ಕಳಿಗೆ ಆರೋಗ್ಯ ಇಲಾಖೆ ವತಿಯಿಂದ ಎಚ್‌ಪಿವಿ ಲಸಿಕೆ ನೀಡಲಾಗುತ್ತಿದ್ದು, ಪಟ್ಟಣದ ಎಲ್ಲ ಶಾಲೆಯ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲು ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆತಂದು ಲಸಿಕೆ ನೀಡಲಾಗುತ್ತಿದೆ.ಅಂತೆಯೆ ಪಟ್ಟಣದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಆದರ್ಶ ಶಾಲೆಯ ವಿದ್ಯಾರ್ಥಿನಿಯರಿಗೂ ಲಸಿಕೆ ನೀಡಲು ಕರೆತರಲು ಶೈಕ್ಷಣಿಕ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಅಂಬ್ಯುಲೆನ್ಸ್ ಬಳಕೆ ಮಾಡಿದ್ದು, ಎಲ್ಲರ ಆತಂಕಕ್ಕೆ ಕಾರಣವಾಯಿತು.ಪಟ್ಟಣದ ಹಲವಾರು ಶಾಲೆಯವರು ತಮ್ಮ ಸ್ವಂತ ವಾಹನ, ಇಲ್ಲವೆ ಬೇರೆ ವಾಹನಗಳಲ್ಲಿ ವಿದ್ಯಾರ್ಥಿನಿಯರನ್ನು ಕರೆತಂದು ಲಸಿಕೆ ನೀಡುತ್ತಿದ್ದರೆ, ಅತ್ತ ಆದರ್ಶ ಶಾಲೆಯ ಸುಮಾರು 26ಕ್ಕೂ ಹೆಚ್ಚು ವಿದ್ಯಾರ್ಥಿಯರನ್ನು ಅಂಬ್ಯುಲೆನ್ಸ್‌ನಲ್ಲಿ ಕುರಿಗಳಂತೆ ತುಂಬಿಕೊಂಡು ಪಟ್ಟಣದ ಪ್ರಮುಖರಸ್ತೆಯಲ್ಲಿ ತೆರಳಿದ್ದು, ಸಾರ್ವಜನಿಕರಿಗೆ ಆತಂಕವನ್ನುಂಟು ಮಾಡಿತಲ್ಲದೆ, ಹಲವಾರು ಮಂದಿ ಶಾಲಾ ವಿದ್ಯಾರ್ಥಿನಿಯರಿಗೆ ಏನೋ ಆಗಿದೆ ಎಂದು ಅಂಬ್ಯುಲೆನ್ಸ್ ಹಿಂದೆ ದ್ವಿಚಕ್ರ ವಾಹನದಲ್ಲಿ ತೆರಳಿ, ಘಟನೆ ಏನೆಂದು ತಿಳಿದು ನಂತರ ನಿಟ್ಟುಸಿರುಬಿಟ್ಟರು.ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಎರಡೂ ಕಡೆ ಒಂದೇ ಒಂದು ಅಂಬ್ಯುಲೆನ್ಸ್ ಇಲ್ಲದೆ ಈಗಾಗಲೆ ರೋಗಿಗಳು ತುರ್ತು ಚಿಕಿತ್ಸೆಗಾಗಿ ಖಾಸಗಿ ಅಂಬ್ಯುಲೆನ್ಸ್‌ಗಳ ಕದತಟ್ಟುವಂತಾಗಿರುವಾಗಿದೆ.ಆದರೂ ಇರುವ ಒಂದು ಅಂಬ್ಯುಲೆನ್ಸ್‌ನ್ನು ಪಟ್ಟಣದಲ್ಲಿರುವ ಉಪಕಾರಾಗೃಹಕ್ಕೆ ಮೀಸಲಿರಿಸಲಾಗಿದ್ದು, ಮಕ್ಕಳನ್ನು ಕರೆ ತರಲು ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು ಇದೇ ಅಂಬ್ಯುಲೆನ್ಸ್ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಬೇಕೆಂದಾಗ ಅಂಬ್ಯುಲೆನ್ಸ್ ಇಲ್ಲ ಎಂದು ಸಬೂಬುನೀಡುವ ಇಲ್ಲಿನ ಅಧಿಕಾರಿಗಳು ಆರೋಗ್ಯವಂತ ಮಕ್ಕಳನ್ನು ತುರ್ತು ವಾಹನದಲ್ಲಿ ಕುರಿಗಳಂತೆ ತುಂಬಿಕೊಂಡು ಬಂದು ಲಸಿಕೆ ನೀಡಿದ್ದು ಮಾತ್ರ ಪ್ರಜ್ಞಾವಂತ ನಾಗರೀಕರು ಹಾಗೂ ಸಾರ್ವಜನಿಕರ ಟೀಕೆಗೆ ಕಾರಣವಾಯಿತು.-------------ಖಾಸಗಿ ಶಾಲೆಯವರು ತಮ್ಮ ವಾಹನಗಳಲ್ಲಿ ಮಕ್ಕಳನ್ನು ಕರೆತಂದು ಲಸಿಕೆ ಕೊಡಿಸಿದ್ಧಾರೆ, ಆದರೆ ಆದರ್ಶ ಶಾಲೆಯ ಮಕ್ಕಳನ್ನು ಕರೆ ತರಲು ಅಂಬ್ಯುಲೆನ್ಸ್ ಬಳಸಿದ್ದು ಸರಿಯಲ್ಲ, ಈ ಬಗ್ಗೆ ಸಂಬಂಧಪಟ್ಟವರಿಗೆ ಸಂಪರ್ಕಿಸಿ ಮಾಹಿತಿ ಪಡೆಯುತ್ತೇನೆ.-ಆರ್. ಕೃಷ್ಣಪ್ಪ ಬಿಇಒ.-----------ನಮ್ಮಲ್ಲಿ ಅಂಬ್ಯುಲೆನ್ಸ್ ಇರುವ, ಇಲ್ಲದ ಬಗ್ಗೆ ನನಗೆ ತಿಳಿಯದು, ಆದರೆ ಉಪಕಾರಾಗೃಹಕ್ಕೆ ಒಂದು ಅಂಬ್ಯುಲೆನ್ಸ್‌ನ್ನು ನೀಡಲಾಗಿದ್ದು, ಮಕ್ಕಳನ್ನು ಅದರಲ್ಲಿ ತುಂಬಿಕೊಂಡು ಬಂದಿರುವುದು ಸರಿಯಲ್ಲ, ಮತ್ತೆ ಹೋಗಲು ಅಂಬ್ಯುಲೆನ್ಸ್ ಬದಲು ಬೇರೆ ವಾಹನದ ವ್ಯವಸ್ಥೆ ಮಾಡುವುದಲ್ಲದೆ, ಈ ಬಗ್ಗೆ ಕೂಡಲೆ ಮಾಹಿತಿ ತಿಳಿದು ಕ್ರಮ ಕೈಗೊಳ್ಳಲಾಗುವುದು.-ಡಾ. ಸಂತೋಷ್