ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಪಟ್ಟಣದಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಗುರುಭವನ ಕಾಮಗಾರಿ ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಜಿಲ್ಲೆಯಲ್ಲೇ ಮಾದರಿ ಗುರುಭವನವಾಗಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಪಟ್ಟಣದ ಮಾರುತಿ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಗುರುಭವನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿ, ದಶಕಗಳ ಕಾಲದಿಂದ ನನೆಗುದ್ದಿಗೆ ಬಿದಿದ್ದ ಗುರುಭವನ ನಿರ್ಮಾಣ ಕಾರ್ಯ ಪ್ರಾರಂಭಿಸಲು ನಾನು ಮೊದಲ ಬಾರಿ ಶಾಸಕನಾಗಿದ್ದಗಲೂ ಸರ್ಕಾರದಿಂದ ಸಹಕಾರ ಕೊಡಿಸಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ಕಾಂಗ್ರೆಸ್ ಸರ್ಕಾರದ ನೆರವುಈಗ ಎರಡನೇ ಬಾರಿ ಶಾಸಕನಾದ ಮೇಲೆ ನಮ್ಮ ಸರ್ಕಾರವೇ ಆಡಳಿತದ ಚುಕ್ಕಾಣಿ ಹಿಡಿದಿರುವ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರದ ಮಂಜೂರಾತಿ ಸಿಗುತ್ತಿದೆ. ತಾಲೂಕು ಶಿಕ್ಷಕರ ಒಂದು ದಿನದ ಸಂಬಳದ ಹಣದಿಂದ ಗುರುಭವನದ ಅಡಿಪಾಯ ಹಾಕಲಾಗಿತ್ತದರೂ ಅಂದಿನ ಜನಪ್ರತಿನಿಧಿಯ ಇಚ್ಚಾಶಕ್ತಿ ಕೊರತೆಯಿಂದ ಕಾಮಗಾರಿ ಮುಂದುವರೆಯಲಿಲ್ಲ. ಈಗ ತಾಲೂಕಿನ ದಾನಿಗಳು ಮುಂದೆ ಬಂದ ಕಾರಣ ಮತ್ತೇ 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಅಲ್ಲದೆ ಶಾಸಕರ ನಿಧಿಯಿಂದ 50 ಲಕ್ಷ ಹಾಗೂ ನನ್ನ ಒಂದು ವರ್ಷದ ಗೌರವ ಧನವನ್ನು ನೀಡಿದ್ದೇನೆ. ತಾಲೂಕಿನ 28 ಪಂಚಾಯ್ತಿಗಳು ತಮ್ಮ ಶಕ್ತಿ ಅನುಸಾರ 50 ಸಾವಿರದಿಂದ 5 ಲಕ್ಷದವರಗೆ ಅನುದಾನ ನೀಡಿದ್ದು, ಒಟ್ಟು 60 ಲಕ್ಷ ರು.ಗಳು ಪಂಚಾಯ್ತಿಗಳಿಂದ ಸಂಗ್ರಹವಾಗಿದೆ. ತಾಲೂಕು ಪಂಚಾಯ್ತಿ 25 ಲಕ್ಷ , ಪುರಸಭೆ 10 ಲಕ್ಷ ಹಣ ನೀಡಿದ್ದು, ಅವರೆಗೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಕಟ್ಟಡಕ್ಕೆ ದಾನಿಗಳ ನೆರವು
ಪಟ್ಟಣದಲ್ಲಿ ಗುರುಭವನವನ್ನು ಸರ್ಕಾರದ ಸಹಕಾರ ಇಲ್ಲದೇ ತಾಲೂಕಿನ ದಾನಿಗಳ ಸಹಕಾರದಿಂದ ನಿರ್ಮಿಸಲಾಗುತ್ತಿದೆ ಎಂದರು. ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಯುತ್ತಿದ್ದು ,ಗುರುಭವನ ಸುತ್ತಲು ಇರುವ ಒತ್ತುವರಿಯನ್ನು ತೆರವುಗೊಳಿಸಿ ಕಾಂಪೌಂಡು ನಿರ್ಮಿಸಲು ಕಟ್ಟಡ ನಿರ್ಮಾಣ ಸಮಿತಿಗೆ ತಿಳಿಸಿದ್ದೇನೆ ಎಂದರು.ಈ ಸಂದರ್ಭದಲ್ಲಿ ಕ್ಷೇತ್ರಾಶಿಕ್ಷಣಾಧಿಕಾರಿ ಚಂದ್ರಕಲಾ, ಪುರಸಭೆ ಅಧ್ಯಕ್ಷೆ ಕೋಮಲನಾರಾಯಣ್ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ,ಎಂ.ವಿ.ಹನುಮಂತಯ್ಯ ,ಮುರಳಿಧರ್,ಬಂಡೆಹೊಸೂರು ರಾಮಯ್ಯ ,ನರಸಿಂಹ,ಹಾಲಗೊಂಡಹಳ್ಳಿ ಗೋವಿಂದಪ್ಪ , ವೆಂಕಟಸ್ವಾಮಿ ಇನ್ನಿತರರು ಇದ್ದರು.