ಸಾರಾಂಶ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ)ದ ತಾಲೂಕಿನ ಕೆ.ಮಲ್ಲಾಪೂರ ಗ್ರಾಮದ ಘಟಕದ ನಾಮಫಲಕವನ್ನು ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ ಮಲ್ಲಿಗೆವಾಡ ಸೋಮವಾರ ಉದ್ಘಾಟಿಸಿದರು.
ಕೆ.ಮಲ್ಲಾಪೂರದಲ್ಲಿ ರೈತ ಸಂಘದ ನಾಮಫಲಕ ಅನಾವರಣದ ವೇಳೆ ರೈತರ ಆಕ್ರೋಶಕನ್ನಡಪ್ರಭ ವಾರ್ತೆ ಕನಕಗಿರಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ)ದ ತಾಲೂಕಿನ ಕೆ.ಮಲ್ಲಾಪೂರ ಗ್ರಾಮದ ಘಟಕದನಾಮಫಲಕವನ್ನು ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ ಮಲ್ಲಿಗೆವಾಡ ಸೋಮವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ತಾಲೂಕು ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಿಲ್ಲ. ಹೀಗಾಗಿ ರೈತರ ಜಾನುವಾರುಗಳಿಗೆ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ತವರು ಕ್ಷೇತ್ರದ ಶಾಸಕರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರೂ ಕೆರೆಗಳು ತುಂಬಿಸಲು ಕ್ರಮ ಕೈಗೊಂಡಿಲ್ಲ. ಈ ಬಾರಿ ಮಳೆಯಾದರೂ ಹಳ್ಳ-ಕೊಳ್ಳಗಳು ಹರಿದಿಲ್ಲವಾಗಿದ್ದರಿಂದ ಕೆರೆಗಳು ತುಂಬಿಲ್ಲ. ತುಂಗಭದ್ರಾ ನದಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸದೆ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ. ಹೀಗೆ ಬೇಜವಾಬ್ದಾರಿತನ ತೋರಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ನಂತರ ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಸೋಮಸಾಗರ ಮಾತನಾಡಿ, ನವಲಿ ಸಮನಾಂತರ ಜಲಾಶಯಕ್ಕೆ ಮೀಸಲಿರಿಸಿದ್ದ ಅನುದಾನ ಬಳಕೆಯಾಗುತ್ತಿಲ್ಲ. ಜಲಾಶಯದ ಡಿಪಿಆರ್ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಜಲ ಸಂಪನ್ಮೂಲ ಅಧಿಕಾರಿಗಳು ಇದುವರೆಗೂ ನೀಡಿಲ್ಲ. ರೈತರನ್ನು ಒಕ್ಕಲೆಬ್ಬಿಸುವುದಾಗಲಿ, ರೈತರಿಗೆ ಅನ್ಯಾಯವಾಗುವುದಾಗಲಿ ನಡೆದರೆ ಸರ್ಕಾರದ ವಿರುದ್ಧ ನಾವು ಸುಮ್ಮನಿರಲು ಸಾಧ್ಯವಿಲ್ಲ. ಮುಂದಿನ ದಿನಮಾನಗಳಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸಭೆ ಕರೆದು ರೈತರೊಡನೆ ಚರ್ಚಿಸಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ತಾಲೂಕು ಅಧ್ಯಕ್ಷ ಶಿವಾನಂದ ವಂಕಲಕುಂಟಿ, ನವಲಿ ಹೋಬಳಿ ಘಟಕದ ಅಧ್ಯಕ್ಷ ಸೋಮನಾಥ ಗೌಡ್ರ, ಉಪಾಧ್ಯಕ್ಷ ಹನುಮಂತ ಕಟಗಿಹಳ್ಳಿ, ಗೌರವಾಧ್ಯಕ್ಷ ಭೀಮೇಶ ಕುರುಬರ, ಕೋಶಾಧ್ಯಕ್ಷ ಹನುಮನಗೌಡ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಕೆ., ಗ್ರಾಮ ಘಟಕದ ಅಧ್ಯಕ್ಷ ಹನುಮಂತ ಪೂಜಾರ, ಉಪಾಧ್ಯಕ್ಷ ಹನುಮಂತ ಗೊಲ್ಲರ, ಗೌರವಾಧ್ಯಕ್ಷ ಮಲ್ಲಪ್ಪ ಗೊಲ್ಲರ, ಕಾರ್ಯದರ್ಶಿ ಸಿದ್ರಾಮೇಶ ಕುರುನಾಳ, ಖಜಾಂಚಿ ಶಂಕ್ರಪ್ಪ ಕುರುಬುರ, ಕೋಶಾಧ್ಯಕ್ಷ ದ್ಯಾಮಣ್ಣ, ಪ್ರಮುಖರಾದ ನಾಗರಾಜ ಇದ್ಲಾಪೂರ, ಹನುಮೇಶ ಗುಡದೂರು, ರಾಮನಗೌಡ ಗೌಡ್ರ, ಹನುಮಣ್ಣ ಗೊಲ್ಲರ, ಯಲ್ಲಪ್ಪ ಕುಷ್ಟಗಿ, ಮರಿಸ್ವಾಮಿ ನಾಯಕ, ಹನುಮಣ್ಣ, ಶಿವಾನಂದ, ಮಲ್ಲಪ್ಪ ಇದ್ದರು.