ಸಾರಾಂಶ
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶಾಖೆಯಲ್ಲಿ ಮನೆಯೇ ಗ್ರಂಥಾಲಯ ಯೋಜನೆಯಡಿ 130ನೇ ಗ್ರಂಥಾಲಯವನ್ನು ಶುಕ್ರವಾರ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಜನರಲ್ಲಿ ಓದುವ ಹವ್ಯಾಸ ವೃದ್ಧಿ, ಜ್ಞಾನ ಗಳಿಕೆ, ವಿದ್ಯಾವಂತರಾಗಲು ಪೂರಕವಾಗಿ ಗ್ರಂಥಾಲಯ ಆಂದೋಲನ ನಡೆದಿಲ್ಲ ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಹೇಳಿದ್ದಾರೆ.ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶಾಖೆಯಲ್ಲಿ ಮನೆಯೇ ಗ್ರಂಥಾಲಯ ಯೋಜನೆಯಡಿ 130ನೇ ಗ್ರಂಥಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಬಸ್, ರೈಲು, ವಿಮಾನ ನಿಲ್ದಾಣ, ಆಸ್ಪತ್ರೆ ಸಹಿತ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ವಿರಾಮ ಸಿಕ್ಕಾಗ ಓದಲು ಪುಸ್ತಕ ಭಂಡಾರ/ ಗ್ರಂಥಾಲಯ ನಿರ್ಮಾಣವನ್ನು ಅಗತ್ಯ ಸೇವೆಯಾಗಿ ಪರಿಗಣಿಸಬೇಕು. ಆಧುನಿಕ ಡಿಜಿಟಲ್ ಮಾಧ್ಯಮ ಬಂದ ಮೇಲೆ ಪುಸ್ತಕ ಓದುವುದು ಕಡಿಮೆಯಾಗಿದೆ. ಪ. ಪೂ. ಕಾಲೇಜಿನ ತನಕದ ವೇಳಾಪಟ್ಟಿಯಲ್ಲಿ ಗ್ರಂಥಾಲಯವೇ ಇಲ್ಲ. ಗ್ರಂಥಾಲಯಗಳು ದುರ್ಬಲವಾಗಿವೆ. ಈ ನಿಟ್ಟಿನಲ್ಲಿ ಶಾಲೆಗೊಂದು ಗ್ರಂಥಾಲಯ ಅಭಿಯಾನ ಆಗಬೇಕು ಎಂದು ಹೇಳಿದರು.ಜಪಾನಿನ ಮಿಯಾಜಾಕಿ ವಿವಿಯ ಪ್ರೊಫೆಸರ್ ಡಾ. ಹರೀಶ್ ಕುಮಾರ್ ಮಧ್ಯಸ್ಥ ಮಾತನಾಡಿ, ಸಾಗರೋತ್ತರ ರಾಷ್ಟ್ರಗಳಿಗೂ ಪುಸ್ತಕ/ ಗ್ರಂಥಾಲಯ ಅಭಿಯಾನ ವಿಸ್ತರಣೆಯಾಗಲಿ. ಈ ನಿಟ್ಟಿನಲ್ಲಿ ನಾನು ವಿಶೇಷ ಆಸಕ್ತಿ ವಹಿಸುವೆನು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಮೊಬೈಲ್ ಸಂಸ್ಕೃತಿ ಹೆಚ್ಚಿದ್ದು ಯುವಜನರಲ್ಲಿ ಓದುವ ಹವ್ಯಾಸ ಮೂಡಿಸುವ ಹೊಣೆಗಾರಿಕೆಯನ್ನು ಸಮಾಜಮುಖಿ ಕಾರ್ಯಕ್ರಮದ ಮೂಲ ನಿಭಾಯಿಸಬೇಕು ಎಂದು ನುಡಿದರು.
ರಥಬೀದಿ ಗೆಳೆಯರು ಸಂಸ್ಥೆ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಮಲಬಾರ್ ಉಡುಪಿ ಶಾಖೆ ವ್ಯವಸ್ಥಾಪಕ ಹಫೀಝ್ ರೆಹಮಾನ್, ಕಸಾಪ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ಹಂದಾಡಿ, ಮಲಬಾರ್ ಸಂಸ್ಥೆಯ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು.