ಜೀತ ಮುಕ್ತರಾದವರು ಸಮಾಜದ ಮುಖ್ಯವಾಹಿನಿಗೆ: ಚಲುವರಾಯಸ್ವಾಮಿ

| Published : Jul 22 2025, 12:15 AM IST

ಜೀತ ಮುಕ್ತರಾದವರು ಸಮಾಜದ ಮುಖ್ಯವಾಹಿನಿಗೆ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜೀತವಿಮುಕ್ತರ ಕುಟುಂಬಗಳಿಗೆ ಭಾರತೀ ನಗರ ಗ್ರಾಮ ಪಂಚಾಯತ್ ವತಿಯಿಂದ ಸೋಲಾರ್ ಲೈಟ್ ಮತ್ತು ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .

ಕನ್ನಡಪ್ರಭ ವಾರ್ತೆ ಮದ್ದೂರು

ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲ್ಪಟ್ಟ 86 ಜನ ಜೀತ ವಿಮುಕ್ತರಿಗೆ ಸರ್ಕಾರದ ಗುರುತಿನ ಚೀಟಿ ಅಥವಾ ದಾಖಲೆಗಳನ್ನು ಒದಗಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಕರೆತರಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಜೀತ ವಿಮುಕ್ತ ಕುಟುಂಬದವರಿಗೆ ಮಹತ್ವದ 13 ವಿವಿಧ ಗುರುತಿನ ಚೀಟಿ ವಿತರಣೆ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು‌.

ಜೀತ ಪದ್ಧತಿ ಕಾನೂನು ಬಾಹಿರ ಎಂದು ತಿಳಿದಿದ್ದರೂ ಸಹ‌ ಮುಗ್ದ ಜನರು ಜೀತ ಪದ್ಧತಿಗೆ ಬಲಿಯಾಗುತ್ತಾರೆ. ಜೀತ ಪದ್ಧತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸರ್ಕಾರ ಹಲವು ಯೋಜನೆಗಳನ್ನು ‌ರೂಪಿಸಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಜೀತ ಪದ್ಧತಿ ಕಾನೂನು‌ ಬಾಹಿರ ಎಂದು ತಿಳಿದಿದ್ದರೂ ಕೆಲವರು ಬಡತನದಿಂದ ಜೀತದಾಳಾಗಿ ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಒಟ್ಟು 86 ಜನರಲ್ಲಿ 04 ಜನ ಹೆಣ್ಣುಮಕ್ಕಳು, 82 ಜನ ಗಂಡಸರನ್ನು ಜೀತ ವಿಮುಕ್ತರನ್ನಾಗಿ ಮಾಡಿ‌ ಸಮಾಜದ ಮುಖ್ಯವಾಹಿನಿಗೆ ತರಲು ಜೀತ ವಿಮುಕ್ತರು ಹಾಗೂ ಅವರ ಅವಲಂಬಿತರ ಬಳಿ ಸರ್ಕಾರಿ ದಾಖಲೆಗಳು ಇರಲಿಲ್ಲ ಎಂದರು.

ಸರ್ಕಾರದ ಎಲ್ಲಾ ಇಲಾಖೆಗಳ ಸೌಲಭ್ಯ ಪಡೆಯಲು ಜೀತಮುಕ್ತರಿಗೆ ಕೆಲವು ದಾಖಲೆಗಳು ಅಗತ್ಯವಾಗಿ ಬೇಕಿದೆ. ಮೊದಲಿಗೆ ಜಿಲ್ಲೆಯ ಎಲ್ಲಾ ಜೀತ ವಿಮುಕ್ತರಿಗೂ ಸರ್ಕಾರದ ಆಧಾರ್ ಕಾರ್ಡ್ ಸೇರಿದಂತೆ ವಿವಿಧ 13 ದಾಖಲೆಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ ಅವರ ಆರೋಗ್ಯ ತಪಾಸಣೆ ಸಹ ನಡೆಸಲಾಗುತ್ತಿದೆ. ಜೊತೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಪಡೆದು ಸ್ವಾವಲಂಬಿಗಳಾಗಿ ಘನತೆಯುಕ್ತ ಜೀವನ ನಡೆಸಬಹುದು ಎಂದು ಹೇಳಿದರು.

ಶಾಸಕ‌ ಕೆ.ಎಂ.ಉದಯ್ ಮಾತನಾಡಿ, ಜೀತ ವಿಮುಕ್ತರಿಗೆ ಆಧಾರ್ ಕಾರ್ಡ್, ಜನನ- ಮರಣ ಪ್ರಮಾಣ ಪತ್ರ, ಜಾತಿ- ಆದಾಯ ಪ್ರಮಾಣ ಪತ್ರ, ಪಡಿತರ ಗುರುತಿನ ಚೀಟಿ, ಚುನಾವಣಾ ಗುರುತಿನ ಚೀಟಿ, ವೈಯಕ್ತಿಕ ಬ್ಯಾಂಕ್ ಉಳಿತಾಯ ಖಾತೆ, ವಿವಿಧ ಯೋಜನೆಗಳಡಿ ಪಿಂಚಣಿ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಆರೋಗ್ಯ ವಿಮೆಗಳು (ಪಿಎಂಜೆಜೆಬಿವೈ, ಪಿಎಂಎಸ್ ಬಿವೈ) , ಇ- ಶ್ರಮ್ ಗುರುತಿನ ಕಾರ್ಡ್, ಯುಡಿಐಡಿ ಗುರುತಿನ ಚೀಟಿ, ಭಾಗ್ಯಲಕ್ಷ್ಮೀ ಯೋಜನೆ, ಮನರೇಗಾ ಉದ್ಯೋಗ ಚೀಟಿ ನೀಡಲಾಗುತ್ತಿದೆ. ಇದರಿಂದ ಅವರು ಸ್ವಾವಲಂಬಿ ಜೀವನ ನಡೆಸಬಹುದು ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಜೀತವಿಮುಕ್ತರ ಬಾಳಿನಲ್ಲಿ ಸಂಜೀವಿನಿಯ ಬೆಳಕು ಅಭಿಯಾನದಡಿ ಜೀತವಿಮುಕ್ತರ ಕುಟುಂಬದ ಅರ್ಹ ಮಹಿಳೆಯರನ್ನು ಎನ್ಆರ್ ಎಲ್ಎಂ ಯೋಜನೆಯ ‘ಸಂಜೀವಿನಿ’ ಯಡಿಯಲ್ಲಿ ಸ್ವ- ಸಹಾಯ ಸಂಘಗಳಿಗೆ ಸೇರ್ಪಡೆಗೊಳಿಸುವ ಕಾರ್ಯವನ್ನು ಮಾಡಲಾಗಿದೆ ಎಂದು ತಿಳಿಸಿದರು.

ಸಂಜೀವಿನಿಯಡಿ ದೊರೆಯುವ ಅರ್ಹ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಲು ಅನುವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರ್ ಸೇಟಿ ವತಿಯಿಂದ ಜೀತವಿಮುಕ್ತರ ಕುಟುಂಬದ ಅರ್ಹ ಯುವಕ, ಯುವತಿಯರಿಗೆ ಇತರೆ ವೃತ್ತಿಕೌಶಲ್ಯ ತರಬೇತಿ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.

ಜೀತವಿಮುಕ್ತರ ಕುಟುಂಬಗಳಿಗೆ ಭಾರತೀ ನಗರ ಗ್ರಾಮ ಪಂಚಾಯತ್ ವತಿಯಿಂದ ಸೋಲಾರ್ ಲೈಟ್ ಮತ್ತು ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಆರೋಗ್ಯ ಶಿಬಿರದಲ್ಲಿ ಮಿಮ್ಸ್ ನ ಸ್ತ್ರೀ ರೋಗ ತಜ್ಞರಾದ ಡಾ.ಮನೋಹರ್ , ಡಾ.ಶಿಲ್ಪಶ್ರೀ, ವೈದ್ಯರಾದ ರವಿಶಂಕರ್ ಹಾಗೂ ತಾಲೂಕು ಆಸ್ಪತ್ರೆ ಸಿಬ್ಬಂದಿ ಜೀತ ಮುಕ್ತ ಕುಟುಂಬಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಸಲಹೆ, ಸೂಚನೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ರಾಮಲಿಂಗಯ್ಯ, ತಾಪಂ ಅಧಿಕಾರಿಗಳಾದ ಸುರೇಶ್, ಮಂಜುನಾಥ್, ಗಂಗಾಧರ್ ಉಪಸ್ಥಿತರಿದ್ದರು.