- 110 ಕೆವಿ ಗ್ರಿಡ್ ಸ್ಥಾಪನೆ ಕಾಮಗಾರಿ ವಿಳಂಬ ಸಲ್ಲದು: ಪ್ರತಿಭಟನೆಯಲ್ಲಿ ಪ್ರಸನ್ನ ಕರೆಕೈ ತಾಕೀತು

- - -

ಕನ್ನಡಪ್ರಭ ವಾರ್ತೆ ತ್ಯಾಗರ್ತಿ

ತ್ಯಾಗರ್ತಿಯಲ್ಲಿ ನಿರ್ಮಿಸುತ್ತಿರುವ ಗ್ರಿಡ್ ಕಾಮಗಾರಿಯನ್ನು ತ್ವರಿತಗೊಳಿಸಲು ಒತ್ತಾಯಿಸಿ ಗುರುವಾರ ಕರೆ ನೀಡಿದ್ದ ಬಂದ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹಿರೇಬಿಲಗುಂಜಿ, ಬರೂರು, ತ್ಯಾಗರ್ತಿ, ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಸಮಸ್ಯೆ ಇದೆ. ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗುವಂತೆ 110 ಕೆ.ವಿ.ಯ ಗ್ರಿಡ್ ಸ್ಥಾಪಿಸಲಾಗುತ್ತಿದೆ. ಆದರೆ, ಈ ಕಾಮಗಾರಿ ವಿಳಂಬ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಿಡ್‌ ಸ್ಥಾಪನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಬೇಕೆಂದು ಆಗ್ರಹಿಸಿ ಗ್ರಿಡ್ ಹೋರಾಟ ಸಮಿತಿಯು ತ್ಯಾಗರ್ತಿ ಬಂದ್‍ಗೆ ಕರೆ ನೀಡಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕರೆಕೈ ಈ ವೇಳೆ ಮಾತನಾಡಿ, ವಿದ್ಯುತ್‍ಗೂ ಸಾಗರ ತಾಲೂಕಿಗೂ ಅವಿನಾಭಾವ ಸಂಬಂಧವಿದೆ. ರಾಜ್ಯಕ್ಕೆಲ್ಲಾ ಬೆಳಕು ನೀಡಿ ನಾವು ಮಾತ್ರ ಕತ್ತಲಲ್ಲಿ ಬದುಕುವಂತಾಗಿದೆ. ಕೈಗಾರಿಕಾ ಪ್ರದೇಶಗಳಿಗೆ ವೋಲ್ಟೇಜ್ ಸಮಸ್ಯೆಯಾದಾಗ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಮಸ್ಯೆ ಬಗೆಹರಿಸುತ್ತೀರಿ. ಆದರೆ ರೈತರ ಸಮಸ್ಯೆಗೆ ಸ್ಪಂದಿಸಲು ನೂರಾರು ಕಾರಣ ನೀಡಿ ರೈತರನ್ನು ಕಡೆಗಣಿಸುತ್ತಿದ್ದೀರಿ ಎಂದು ಟೀಕಿಸಿದರು.

ರೈತರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆಂಬ ದಾರ್ಷ್ಟ್ಯ ಮನೋಭಾವ ನಿಮ್ಮಲ್ಲಿದೆ. ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ. ಗುತ್ತಿಗೆದಾರರಿಗೆ ಸಮಯ ನೀಡಿ ಕೆಲಸ ನಿಗದಿಗೊಳಿಸುತ್ತೀರಿ. ಅವರಿಂದ ಸಕಾಲಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶ ನೀಡದೇ ಇರುವುದು ಮೆಸ್ಕಾಂ ಆಡಳಿತಾಧಿಕಾರಿಗಳ ನಿರ್ಲಕ್ಷ್ಯತೆ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆ ರೈತ ಸಂಘದ ಜಿಲ್ಲಾಧ್ಯಕ್ಷರಾದ ದಿನೇಶ್ ಶಿರವಾಳ ಮಾತನಾಡಿ, ಕೃಷಿಯನ್ನೇ ಅವಲಂಬಿಸಿದ ರೈತರಿಗೆ ವಿದ್ಯುತ್ ಅನಿವಾರ್ಯ. ಆದರೆ, ವೋಲ್ಟೇಜ್ ಇಲ್ಲದೇ ಕೊಳವೆಬಾವಿ ಪಂಪ್‍ಸೆಟ್‍ಗಳು ಸುಟ್ಟು ಹೋಗುತ್ತಿವೆ ಎಂದು ಕಿಡಿಕಾರಿದರು. ಪ್ರತಿಭಟನೆಗೆ ಆಗಮಿಸಿದ ಅಧಿಕಾರಿಗಳಿಗೆ ಎಲ್ಲ ರೈತರೊಂದಿಗೆ ದಿಗ್ಬಂಧನ ವಿಧಿಸಿ, ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆಂದು ಹೇಳಿದರು.

ರೈತರು ಅಧಿಕಾರಿಗಳಿಗೆ ಘೇರಾವ್ ಹಾಕಿ ಪ್ರತಿಭಟಿಸಿದರು. ಅನಂತರ ಅಧಿಕಾರಿಗಳ ಭರವಸೆಗೆ ಮಣಿದ ಪ್ರತಿಭಟನಾಕಾರರು ಘೇರಾವ್ ಹಿಂಪಡೆದು ಪ್ರತಿಭಟನೆ ಮುಂದುವರೆಸಿದರು. ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ್ ಮನವಿ ಸ್ವೀಕರಿಸಿದರು. ಬಳಿಕ ನಂತರ 3 ಗಂಟೆ ಹೊತ್ತಿಗೆ ಪ್ರತಿಭಟನೆ ಹಿಂಪಡೆದುಕೊಳ್ಳಲಾಯಿತು. ಕೆಪಿಟಿಸಿಎಲ್‍ನ ಅಧೀಕ್ಷಕ ಎಂಜಿನಿಯರ್ ಸುರೇಶ್, ಮೆಸ್ಕಾಂ ಎಡಬ್ಲುಇ ಮೋಹನ್, ಎಸ್‍ಒ ಇಂದ್ರೇಶ್ ಇದ್ದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆಳದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಬಲೇಶ್ವರ ಗೌಡ ಕಲಸೆ, ಮುಖಂಡರಾದ ರತ್ನಾಕಾರ ಹೊನಗೋಡು, ಸೋಮಶೇಖರ್ ಲಾವಿಗೆರೆ, ಚೇತನ್‍ರಾಜ್ ಕಣ್ಣೂರು, ಪ್ರಶಾಂತ.ಕೆ.ಎಸ್, ಹೋರಾಟ ಸಮಿತಿಯ ಕುಮಾರಗೌಡರು ಕೊಪ್ಪ, ಶ್ರೀನಾಥ್ ನಾಡಿಗ್ ನೀಚಡಿ, ಜಗದೀಶ್ ಬೆಳಂದೂರು, ಶಿವು ತ್ಯಾಗರ್ತಿ, ಕೃಷ್ಣಮೂರ್ತಿ ಹೊಸಂತೆ, ಖಂಡೋಜಪ್ಪ, ವೀರಪ್ಪಗೌಡ್ರು, ಹಮೀದ್‍ಖಾನ್, ಅಮೃತ್‍ರಾಜ್ ಹೊಸಂತೆ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

- - -

-2ಟಿಜಿಟಿ1: ಕಾಮಗಾರಿ ವಿಳಂಬ ಖಂಡಿಸಿ ಗ್ರಿಡ್ ಹೋರಾಟ ಸಮಿತಿಯಿಂದ ಗುರುವಾರ ತ್ಯಾಗರ್ತಿ ಬಂದ್‍ಗೊಳಿಸಿ ಪ್ರತಿಭಟನೆ ನಡೆಸಲಾಯಿತು.