ಅಜ್ಜಂಪುರ: ಇಲ್ಲಿನ ಕಾಲೋನಿಯಲ್ಲಿ ದಾಖಲೆ ಇಲ್ಲದ ಮನೆ ಮತ್ತು ನಿವೇಶನಗಳಿಗೆ ಶೀಘ್ರದಲ್ಲಿಯೇ ಹಕ್ಕುಪತ್ರ ವಿತರಿಸಲಾಗುವುದು, ಬಳಿಕ ಇ ಸ್ವತ್ತು ನೀಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಬಗ್ಗವಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಮತ್ತು ಸಭಾಭವನ, ಗರಡಿಮನೆ, ಘನ ತ್ಯಾಜ್ಯ ಘಟಕ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,

ಕ್ಷೇತ್ರದಲ್ಲಿ ಹಕ್ಕುಪತ್ರ ಇಲ್ಲದ 9500 ಸ್ವತ್ತುಗಳಿವೆ. ಶೀಘ್ರ ಹಕ್ಕು ಪತ್ರ ಇ-ಸ್ವತ್ತು ನೀಡಲು 10 ಕಂದಾಯ ಗ್ರಾಮ, 101 ಉಪಗ್ರಾಮ ರಚಿಸಲಾಗಿದೆ. 2 ಇ ಸ್ವತ್ತುಗಳಲ್ಲಿ ಮನೆ ನಿರ್ಮಾಣ ಮಾಡಿದವರಿಗೂ ಹಕ್ಕುಪತ್ರ ವಿತರಣೆಗೆ ಸಿದ್ಧತೆ ನಡೆಸಲಾಗಿದೆ. ಉಳಿದ ಸುಮಾರು 4500 ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸುವುದಾಗಿ ಹೇಳಿದರು.

ಬಗವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ₹10 ಲಕ್ಷ, ಗೊಂಡೇದಳ್ಳಿಯಲ್ಲಿ ಸಿಸಿ ರಸ್ತೆಗೆ ₹10 ಲಕ್ಷ, ಕುರುಬರಹಳ್ಳಿ ಸಿಸಿ ರಸ್ತೆಗೆ ₹ 4 ಲಕ್ಷ, ಬಗ್ಗವಳ್ಳಿ- ವಡೆಯರಹಳ್ಳಿ ರಸ್ತೆಗೆ ₹30 ಲಕ್ಷ, ಮೈಲಾರಲಿಂಗ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ₹20 ಲಕ್ಷ, ಕಾಲೋನಿ ಸಮುದಾಯ ಭವನಕ್ಕೆ ₹10 ಲಕ್ಷ, ತೇರು ಮನೆ ರಸ್ತೆಗೆ ₹25 ಲಕ್ಷ, ಬಾಕ್ಸ್ ಚರಂಡಿಗೆ ₹20 ಲಕ್ಷ, ಪ್ರಾಥಮಿಕ ಶಾಲೆ ದುರಸ್ತಿಗೆ ₹7.5 ಲಕ್ಷ, ಪ್ರೌಢ ಶಾಲೆಗೆ ₹2.3 ಲಕ್ಷ, ಅಂಗನವಾಡಿಗೆ ₹7.5 ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ನಿವೃತ್ತ ಲೆಫ್ಟಿನೆಂಟ್ ಬಿ.ಎಸ್.ರಾಜು ಮಾತನಾಡಿ, ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಲು ಮುಂದಾಗಿದ್ದೇವೆ. ಇದಕ್ಕೆ ಪೋಷಕರು, ದಾನಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


ಬಳಿಕ ನಡೆದ ಜನತಂಪರ್ಕ ಸಭೆಯಲ್ಲಿ ಯೋಗನರಸಿಂಹ ಸ್ವಾಮಿ ದೇವಾಲಯ ಆವರಣಕ್ಕೆ ತೋಟಗಾರಿಕಾ ಇಲಾಖೆಯಿಂದ ಸಸಿ ನೆಡುವಂತೆ ಅನಂತ್ ಗುರೂಜಿ, ಸಂಜೀವಿನಿ ಶೆಡ್ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಒಕ್ಕೂಟ ಸಂಘದ ಶಕುಂತಲಾ, ಚನ್ನಾಪುರದಲ್ಲಿ ಆರೋಗ್ಯ ಕೇಂದ್ರ ತೆರೆಯುವಂತೆ ಮಲ್ಲಿಕಾರ್ಜುನ್, ಬಿಸಿಎಂ ಹಾಸ್ಟೆಲ್ ನಿರ್ಮಾಣ ಮಾಡುವಂತೆ ಶೇಖರಪ್ಪ, ಅಂಚೆ ಕಚೇರಿ ತೆರೆಯುವಂತೆ ಸಿದ್ದೇಗೌಡ, ತಿಪ್ಪೆ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಮರಳಪ್ಪ ಮನವಿ ಸಲ್ಲಿಸಿದರು.

ಗ್ರಾಪಂ ಅಧ್ಯಕ್ಷ ಬಿ.ಜಿ.ಗುರುಮೂರ್ತಿ, ಉಪಾಧ್ಯಕ್ಷ ಸಿ.ಎನ್.ಚಂದ್ರಮತಿ, ಸದಸ್ಯ ಷಡಕ್ಷರಪ್ಪ ದಯಾನಂದ್, ಬಿ.ಸಿ.ಬಸವರಾಜು, ಶೈಲಮ್ಮ, ರೂಪ, ಕಮಲ, ಪರಿಮಳ, ಚಂದ್ರಮ್ಮ, ತಹಸೀಲ್ದಾರ್ ವಿನಾಯಕ್ ಸಾಗರ್, ತಾಪಂ ಇಓ ವಿಜಯಕುಮಾರ್, ಪಂಚಾಯಿತಿ ಸಹಾಯಕ ನಿರ್ದೇಶಕ ನವೀನ್, ಟಿಎಚ್‌ಒ ಚಂದ್ರಶೇಖರ್, ಬಿಇಒ ಪರಶುರಾಮ್, ಸಿಡಿಪಿಓ ಚರಣ್ ರಾಜ್, ಕೃಷಿ ಇಲಾಖೆ ನಿರ್ದೇಶಕ ಲೋಕೇಶ್, ಪಶುವೈದ್ಯ ಶಶಿಧರ್, ಪಿಡಿಒ ಎಚ್.ಎನ್.ಶೇಖರ್ ಭಾಗವಹಿಸಿದ್ದರು.