ಬಂಟ್ವಾಳ: ಡಾಕ್ಟರ್ ಅಥವಾ ಇಂಜಿನಿಯರ್ ಆಗೋಕೆ‌ ಮನಸಿಲ್ಲ. ಬ್ಯಾಂಕಿಂಗ್ ಅಥವಾ ಟೀಚಿಂಗ್ ಫೀಲ್ಡ್ ನನ್ನ ಆಸಕ್ತಿಯ ಕ್ಷೇತ್ರ ಎನ್ನುತ್ತಾಳೆ. 620 ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಪೂರ್ವಿ ಭಾರಧ್ವಜ್.

ಕಡೇಶಿವಾಲಯದಲ್ಲಿ ವಾಸ್ತವ್ಯವಿರುವ ಅಮಿತ್ ಕುಮಾರ್-ಮತ್ತು ಶಿಲ್ಪಾ ದಂಪತಿ ಪುತ್ರಿಯಾದ ಈಕೆ ಎಲ್‌ಕೆಜಿಯಿಂದಲೇ ಮಾಣಿ ಬಾಲ ವಿಕಾಸದಲ್ಲೇ ವ್ಯಾಸಂಗ ಮಾಡಿದವಳು.

ಪಿಸಿಎಂಎಸ್ ಕಾಂಬಿನೇಶನ್ ಅನ್ನು ಪಿಯುಸಿಯಲ್ಲಿ ಕಲಿಯುವ ಆಸಕ್ತಿ ವ್ಯಕ್ತಪಡಿಸಿರುವ ಈಕೆಗೆ ತನ್ನ ಪರಿಶ್ರಮ ಹೆಚ್ಚು ಅಂಕ ತಂದುಕೊಟ್ಟ ಖುಷಿ‌ಇದೆ. ಅಪ್ಪ ಅಮ್ಮ, ಶಾಲಾ ಶಿಕ್ಷಕರು,‌ಆಡಳಿತ ಮಂಡಳಿಯ‌ ನಿರಂತರ ಪ್ರೇರಣೆಯಿಂದ ಇಷ್ಟು ಅಂಕ ಗಳಿಸಲು ಸಾಧ್ಯವಾಯಿತು ಎನ್ನುತ್ತಾಳೆ ಅವಳು.

‌ ತಂದೆ ಅಮಿತ್ ಕುಮಾರ್ ಕನ್ನಡಪ್ರಭದ ಜೊತೆ ಮಾತನಾಡಿ, ಮಗಳ‌ ಸಾಧನೆ‌ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಶಾಲೆಯಲ್ಲಿ ಶಿಕ್ಷಕರ ಪಾಠ ಬಿಟ್ಟರೆ,‌ ಬೇರಾವುದೇ ಟ್ಯೂಷನ್ ಕೋಚಿಂಗ್ ಗೆ ಪೂರ್ವಿ ಹೋಗಿಲ್ಲ. ಶಿಕ್ಷಕರ ಪ್ರೋತ್ಸಾಹ, ಪೂರ್ವಿಯ ಶ್ರದ್ಧೆಯಿಂದ ಈ ಸಾಧನೆ ಸಾಧ್ಯವಾಯಿತು ಎನ್ನುತ್ತಾರೆ ಅವರು.

ಬಾಲ ವಿಕಾಸ ಟ್ರಸ್ಟ್ ಕಾರ್‍ಯದರ್ಶಿ ಮಹೇಶ್ ಜೆ. ಶೆಟ್ಟಿ ಅವರು ಪೂರ್ವಿ ಭಾರಧ್ವಜ್ ಸಾಧನೆ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಪೂರ್ವಿ 620 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಮಾತ್ರವಲ್ಲದೆ ರಾಜ್ಯಕ್ಕೆ 6ನೇ ಸ್ಥಾನ ಗಳಿಸಿದ್ದಾಳೆ.‌ ಇದು ನಮ್ಮ ಬಾಲವಿಕಾಸ ವಿದ್ಯಾಸಂಸ್ಥೆಗೆ ಮತ್ತೊಂದು ಗರಿ ತೊಡಿಸಿದಂತಾಗಿದೆ. ಉಳಿದಂತೆ ಶಾಲೆಯ ಎಲ್ಲ ವಿದ್ಯಾರ್ಥಿಗಳೂ ಅತ್ಯುತ್ತಮ ರೀತಿಯ ಫಲಿತಾಂಶ ತಂದುಕೊಟ್ಟಿದ್ದು, ಇದಕ್ಕೆ ಶಿಕ್ಷಕ ವರ್ಗದ ಶ್ರಮವೂ ಕಾರಣ ಎಂದವರು ತಿಳಿಸಿದ್ದಾರೆ.