ರಾಮನಗರ: ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಸರ್ಕಾರ ಕಡೆಗಣಿಸುತ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಳೇಗಾರರಾಗಿದ್ದಾರೆ. ಕೂಡಲೇ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವ ಜೊತೆಗೆ ಕನ್ನಡ ಶಿಕ್ಷಕರ ಖಾಲೆ ಹುದ್ದೆಗಳನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಸಮಗ್ರ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ಐಜೂರು ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷ ಹಾಗೂ ಕರುನಾಡ ಸೇನೆ ವತಿಯಿಂದ ರಾಜ್ಯ ಸರ್ಕಾರದ ಕನ್ನಡ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 6 ಸಾವಿರ ಕನ್ನಡ ಮಾಧ್ಯಮಗಳಿಗೆ ಅನುದಾನ ನೀಡಿಲ್ಲ. 20 ಸಾವಿರ ಕನ್ನಡ ಶಿಕ್ಷಕರ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಲ್ಲ. ಇದು ಕನ್ನಡ ಮಾಧ್ಯಮದ ಬಗೆಗೆ ರಾಜ್ಯ ಸರ್ಕಾರದ ಧೋರಣೆ ತೋರಿಸುತ್ತದೆ ಎಂದು ಟೀಕಿಸಿದರು.

ಇಂಗ್ಲಿಷ್ ಮಾಧ್ಯಮದ ಮೇಲೆ ಹೆಚ್ಚು ಒಲವು ಹೊಂದಿರುವ ಸರ್ಕಾರ, ಕನ್ನಡ ಶಾಲೆಗಳನ್ನು ಮುಚ್ಚುತ್ತಿದೆ. ಇಂಗ್ಲಿಷ್ ಶಾಲೆಗಳಿಗೆ ಅನುಮತಿ ಕೊಡುತ್ತಿದೆ. ಮಾ.6ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ, ಶಿಕ್ಷಕರ ನೇಮಕಾತಿಯಲ್ಲಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಕ್ಕೂ ಪ್ರಾಧಾನ್ಯತೆ ನೀಡಬೇಕು. ಏಕೆಂದರೆ ಹೈದರಾಬಾದ್ ಮತ್ತು ಉತ್ತರ ಕರ್ನಾಟಕ ಬಹಳ ಹಿಂದುಳಿದ ಪ್ರದೇಶವಾಗಿದೆ. 50 ಸಾವಿರ ಉದ್ಯೋಗ ಕನ್ನಡಿಗರಿಗೇ ಕೊಡಬೇಕು. ಈ ಬಗ್ಗೆ ಎಲ್ಲಾ ಸಾಹಿತಿಗಳು, ಕವಿಗಳು, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ತೀವ್ರವಾಗಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.

16 ವರ್ಷದ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧ ಮಾಡುವ ಸರ್ಕಾರದ ತೀರ್ಮಾನವನ್ನು ನಾನು ವಿರೋಧಿಸುತ್ತೇನೆ. ಇದು ಮಿಲ್ಟ್ರಿ ಸರ್ಕಾರವಲ್ಲ. ಸಾಮಾಜಿಕ ಜಾಲತಾಣ ಗರ್ಭದಲ್ಲಿರುವ ಮಗುವನ್ನು ತಲುಪಿದೆ. ಮೊಬೈಲ್‌ ಅನ್ನು ಮಕ್ಕಳಿಂದ ತಪ್ಪಿಸುವುದಾದರೆ, ಮಕ್ಕಳು ಮೊಬೈಲ್ ಮೂಲಕ ದೇಶ-ವಿದೇಶಗಳ ಸಮಾಚಾರ, ಇತಿಹಾಸ, ವಿಜ್ಞಾನ ತಿಳಿದುಕೊಳ್ಳುತ್ತಿದ್ದಾರೆ. ಮೊಬೈಲ್ ನಿಷೇಧವೆಂದರೆ ಮಕ್ಕಳಿಗೆ ನೀಡುವ ಶಿಕ್ಷೆಯಾಗಿದೆ ಎಂದರು.

ಮಾಧ್ಯಮ ಪ್ರವೇಶ ನಿಷೇಧ ವಾಪಸ್ಸು ಪಡೆಯಲಿ :


ಮಾಧ್ಯಮದವರನ್ನು ವಿಧಾನಸೌಧದೊಳಗೆ ಬಿಡಬಾರದು ಎಂದರೆ ಪ್ರಜಾಪ್ರಭುತ್ವ ಆಡಳಿತದ ಮೇಲೆ ತುರ್ತು ಪರಿಸ್ಥಿತಿ ಏರಿದಂತೆ ಆಗುತ್ತದೆ. ಇದು ಪ್ರಜಾಪ್ರಭುತ್ವ ಆಡಳಿತದಲ್ಲಿ ಸರ್ವಾಧಿಕಾರ ಧೋರಣೆ ಒಳ್ಳೆಯದಲ್ಲ. ರಾಜ್ಯದ ಧ್ವನಿಯನ್ನು ತಲುಪಿಸುವವರು ಮಾಧ್ಯಮದವರು. ಇವರನ್ನೇ ಒಳಗೆ ಬಿಡುವುದಿಲ್ಲ ಎಂದಾದರೆ ವಿಧಾನಸೌಧದೊಳಗಿರುವ ಭ್ರಷ್ಟ ಅಧಿಕಾರಿಗಳು, ಭ್ರಷ್ಟ ಮಂತ್ರಿ ಮಜಾ ಮಾಡಬಹುದು, ಲಂಚ ಪಡೆಯಬಹುದು. ಆದುದರಿಂದ ಮಾಧ್ಯಮದವರಿಗೆ ವಿಧಾನಸೌಧ ಪ್ರವೇಶ ನಿಷೇಧವನ್ನು ಸರ್ಕಾರ ಕೂಡಲೇ ವಾಪಸ್ಸು ಪಡೆಯಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಕರುನಾಡ ಸೇನೆ ಉಪಾಧ್ಯಕ್ಷ ಎಂ.ಜಗದೀಶ್ ಐಜೂರು, ರಾಜ್ಯ ಉಸ್ತುವಾರಿ ಅಧ್ಯಕ್ಷ ಗಂಗಾಧರ್ ವಿ.ಎನ್, ಜಿಲ್ಲಾಧ್ಯಕ್ಷ, ಸಿ.ಎಸ್ ಜಯಕುಮಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಆರ್.ಜೆ ಅರ್ಜುನ್, ತಾಲೂಕು ಮಹಿಳಾ ಅಧ್ಯಕ್ಷೆ ಭಾಗ್ಯ ಸುಧಾ, ಕಾರ್ಯಾಧ್ಯಕ್ಷೆ ಪುಷ್ಪಲತಾ, ಜಿಲ್ಲಾ ದಲಿತ ಘಟಕದ ಅಧ್ಯಕ್ಷ ಕೆ.ಜಯರಾಮು, ತಾಲೂಕು ಕಾರ್ಯಾಧ್ಯಕ್ಷ ಕುಮಾರ್, ತಾಲೂಕು ಕಾರ್ಯದರ್ಶಿ ಶಿವಮೂರ್ತಿ, ತಾಲೂಕು ಕಾರ್ಯದರ್ಶಿ ಕೊತ್ತೀಪುರ ಪಿ.ಸುರೇಶ್, ವಾಟಾಳ್ ನಾಗರಾಜ್ ರವರ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ, ವಾಟಳ್ ಪಕ್ಷದ ಗಿರೀಶ್‌ಗೌಡ, ಖಲೀಮ್‌ ಮತ್ತಿತರರು ಭಾಗವಹಿಸಿದ್ದರು.

(ಈ ಕೋಟನ್ನು ಪ್ಯಾನಲ್‌ನಲ್ಲಿ ಬಳಸಿ)

ಕೋಟ್ ................

ಶಾಸನಸಭೆ, ವಿಧಾನಪರಿಷತ್ ಸೇರಿದಂತೆ ಎಲ್ಲಾ ರಂಗದಲ್ಲೂ ಕನ್ನಡ ಭಾಷೆಯನ್ನು ಕರ್ನಾಟಕ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಕಡೆಗಾಣಿಸಿದ್ದಾರೆ, ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾಗಿದೆ. ಸಿದ್ದರಾಮಯ್ಯನವರ ಸರ್ಕಾರ ಏನೋ ಯಡವಟ್ಟು ಮಾಡಿಕೊಂಡಿರುವಂತೆ ಕಾಣುತ್ತಿದೆ.

-ವಾಟಾಳ್ ನಾಗರಾಜ್ , ರಾಜ್ಯಾಧ್ಯಕ್ಷರು, ಕನ್ನಡ ವಾಟಾಳ್ ಚಳವಳಿ ಪಕ್ಷ

1ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.