ಉಡುಪಿ: ಸುದ್ದಿಗಳಲ್ಲಿ ಮಹಿಳೆಯರನ್ನು ಹೆಚ್ಚಾಗಿ ಸಂತ್ರಸ್ತರಾಗಿ, ರಾಜಕಾರಣಿಗಳಾಗಿ ಅಥವಾ ಕ್ರೀಡಾಪಟುಗಳಾಗಿ ಮಾತ್ರ ಬಿಂಬಿಸಲಾಗುತ್ತದೆ. ಆದರೆ ನೀತಿ ನಿರೂಪಕಿಯಾಗಿ, ವಿಷಯ ತಜ್ಞೆಯಾಗಿ ಮಹಿಳೆಯರನ್ನು ಸಂದರ್ಶಿಸುವ ಅಥವಾ ಅವರ ಅಭಿಪ್ರಾಯ ಪಡೆಯುವ ಪ್ರಮಾಣ ಅತ್ಯಂತ ವಿರಳವಾಗಿದೆ ಎಂದು ಮಣಿಪಾಲ ಇನ್ಸಿಟ್ಯೂಟ್‌ ಆಫ್ ಕಮ್ಯುನಿಕೇಶನ್‌ನ ನಿರ್ದೇಶಕಿ ಡಾ. ಶುಭಾ ಎಚ್‌. ಎಸ್‌. ಹೇಳಿದ್ದಾರೆ.ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದ ವತಿಯಿಂದ ಆಯೋಜಿಸಲಾದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಮಂಜುನಾಥ್‌ ಮಾತನಾಡಿದರು.ಈ ಸಂದರ್ಭದಲ್ಲಿ ಹಿರಿಯ ಪತ್ರಿಕಾ ವ್ಯಂಗ್ಯಚಿತ್ರಕಾರ ಜೇಮ್ಸ್‌ ವಾಝ್‌ ಅವರಿಗೆ ಪತ್ರಿಕಾ ದಿನದ ಗೌರವ ಪ್ರದಾನ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಡಾ. ಬಿ. ಆರ್‌. ಅಂಬೇಡ್ಕರ್‌ ತಂತ್ರಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಎಸ್‌. ಎಚ್‌. ಸಂತೋಷ್‌ ಕುಮಾರ್‌ ಪತ್ರಕರ್ತರ ಒತ್ತಡ ನಿರ್ವಹಣೆ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಮಾತನಾಡಿದರು.ಪತ್ರಕರ್ತರ ಪ್ರತಿಭಾವಂತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಗ್ರಾಮೀಣ ಪತ್ರಕರ್ತರ ಸರ್ಕಾರಿ ಬಸ್‌ಪಾಸ್‌ ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್‌, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್‌ ಕುಮಾರ್‌ ಶಿರೂರು, ಪತ್ರಿಕಾಭವನ ಸಮಿತಿಯ ಸಹಸಂಚಾಲಕ ಅಂಕಿತ್‌ ಶೆಟ್ಟಿ, ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್‌ ಕುಂದರ್‌, ಪ್ರಧಾನ ಕಾರ್ಯದರ್ಶಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್‌ ಪೊಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿಲ್ಲಾ ಸಂಘದ ಉಪಾಧ್ಯಕ್ಷ ಉದಯಕುಮಾರ್‌ ಮುಂಡ್ಕೂರು ವಂದಿಸಿದರು. ಪತ್ರಕರ್ತೆ ಅಕ್ಷತಾ ಗಿರೀಶ್‌ ಐತಾಳ್‌ ಕಾರ್ಯಕ್ರಮ ನಿರೂಪಿಸಿದರು.