ಏ.2ರಂದು ಆರ್ಬನ್‌ ಬ್ಯಾಂಕ್‌ ನೂತನ ಕಟ್ಟಡ ಲೋಕಾರ್ಪಣೆ

| Published : Mar 29 2025, 12:38 AM IST

ಸಾರಾಂಶ

ಜಮಖಂಡಿ ನಗರದ ಎಪಿಎಂಸಿ ಯಾರ್ಡ್‌ ನಲ್ಲಿ ನೂತನವಾಗಿ ನಿರ್ಮಿಸಲಾದ ಅರ್ಬನ್‌ ಕೋ ಆಪ್‌ ಬ್ಯಾಂಕಿನ ಕಟ್ಟಡದ ಉದ್ಘಾಟನೆ ಏಪ್ರಿಲ್‌ 2ರಂದು ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಾಹುಲ ಕಲೂತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ಎಪಿಎಂಸಿ ಯಾರ್ಡ್‌ ನಲ್ಲಿ ನೂತನವಾಗಿ ನಿರ್ಮಿಸಲಾದ ಅರ್ಬನ್‌ ಕೋ ಆಪ್‌ ಬ್ಯಾಂಕಿನ ಕಟ್ಟಡದ ಉದ್ಘಾಟನೆ ಏಪ್ರಿಲ್‌ 2ರಂದು ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಾಹುಲ ಕಲೂತಿ ತಿಳಿಸಿದರು. ಶುಕ್ರವಾರ ಸುದ್ದಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟಿಸಲಿದ್ದು, ಕೊಲ್ಹಾಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕಾನೂನು, ಸಂಸದಿಯ ವ್ಯವಹಾರ ಸಚಿವ ಎಚ್‌.ಕೆ. ಪಾಟೀಲ ಬ್ಯಾಂಕಿನ ಸಂಸ್ಥಾಪಕ ದಿ.ಅಪ್ಪಾರಾವ ಸಿಂಧೆಯವರ ಪುತ್ಥಳಿ ಅನಾವರಣ, ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಸಭಾಭವನ ಉದ್ಘಾಟಿಸುವರು. ಅಥಣಿ ಶಾಸಕ ಲಕ್ಷ್ಮಣ ಸವದಿ ಸಹಕಾರ ಧ್ವಜಾರೋಹಣ ನೆರವೇರಿಸಲಿದ್ದು, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಆಡಳಿತ ಕಚೇರಿ ಉದ್ಘಾಟಿಸುವರು, ಜವಳಿ ಸಚಿವ ಬ್ಯಾಂಕ್‌ ಶಾಖೆ ಉದ್ಘಾಟಿಸುವರು. ಸಂಸದ ಪಿ.ಸಿ. ಗದ್ದಿಗೌಡರ ನಾಮಫಲಕ ಅನಾವರಣ, ವಿಜಯಪುರ ಸಂಸದ ರಮೇಶ ಜಿಗಜಿನಗಿ ಲಾಕರ್‌ನ್ನು, ಗುಲಬರ್ಗಾ ಸಂಸದ ರಾಧಾಕೃಷ್ಣ ದೊಡಮನಿ ಸಭಾಭವನವನ್ನು, ರಾಜ್ಯಸಭಾ ಸದಸ್ಯ ನಾರಾಯಣ ಸಾ ಭಾಂಡಗೆ ಅವರು ನಿರ್ವಹಣೆ ಮಂಡಳಿ ಸದಸ್ಯರ ಸಭಾಭವನ ಉದ್ಘಾಟಿಸಲಿದ್ದು ಶಾಸಕರು, ಮಾಜಿ ಶಾಸಕರು ಸೇರಿದಂತೆ ಸಹಕಾರ ಸಂಘಗಳ ಅಧಿಕಾರಿಗಳು ನಿಬಂಧಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

150 ಗ್ರಾಮಗಳು ಹಾಗೂ ಮೂರು ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು, ಬ್ಯಾಂಕಿನ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಸುಮಾರು 45 ಸಾವಿರ ಜನರು ಸೇರುವ ಅಂದಾಜಿದೆ. ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು, ಇನ್ನೂ 40 ಶಾಖೆ ಪ್ರಾರಂಭಿಸಿದರೂ ಇದೇ ಕಟ್ಟಡದಲ್ಲಿ ಬ್ಯಾಂಕಿನ ವ್ಯವಹಾರಗಳು ನಡೆಸಬಹುದಾಗಿದೆ ಎಂದು ಹೇಳಿದರು.

ನಿರ್ದೇಶಕ ಕಿರಣ ಪಿಸಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾರ್ವಜನಿಕರ ನಂಬಿಕೆ ಗಳಿಸಿದ ಬ್ಯಾಂಕ್‌:

28 ಸಾವಿರ ಷೇರುದಾರರನ್ನು ಹೊಂದಿರುವ ಬ್ಯಾಂಕ್‌ ಸಾರ್ವಜನಿಕರ ನಂಬಿಕೆಗೆ ಪಾತ್ರವಾಗಿದೆ. 84 ವರ್ಷಗಳಿಂದ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದು ತಿಳಿಸಿದರು.

ಕಾಡಪ್ಪ ಮಾಳಿ ಮಾತನಾಡಿ, 1940 ರಲ್ಲಿ ಅಪ್ಪಾರಾವ ಸಿಂಧೆ, ಇಲ್ಲಿನ ಪಟವರ್ಧನ ಮಹಾರಾಜರು ಸೇರಿಕೊಂಡು ಪ್ರಾರಂಭಿಸಿದ ಬ್ಯಾಂಕ್‌ ಇಂದು ಬೃಹದಾಕಾರದಲ್ಲಿ ಬೆಳೆದು ನಿಂತಿದೆ. ₹345 ಕೋಟಿ ಠೇವಣಿ ಹೊಂದಿದ್ದು, 85 ವರ್ಷ ದಿಂದ ಲಾಭದಲ್ಲಿ ನಡೆಯುತ್ತಿದೆ ಎಂದರು.

ಅಪ್ಪಾಸಾಹೇಬ ಶಿಂಧೆ ಮಾತನಾಡಿ 1940ರಲ್ಲಿ ಪ್ರಾರಂಭವಾದ ಬ್ಯಾಂಕ್‌ ಸೇಂಟ್ರಲ್ ಕೋ ಆಪ್ ಹೆಸರಿನಲ್ಲಿತ್ತು. ಆಗಿನಿಂದ ಇಲ್ಲಿರುವ ಕಟ್ಟಡ ನೂರು ವರ್ಷ ಹಳೆಯದಾಗಿದ್ದರಿಂದ ಹೊಸ ಕಟ್ಟಡ ನಿರ್ಮಿಸಲಾಗಿದೆ. ರಿಸೆಪ್ಸನ್‌, ಲಿಫ್ಟ್‌ ವ್ಯವಸ್ಥೆ, ಸಭಾಂಗಣ, ಗೆಸ್ಟ್ ರೂಮ್‌ಗಳು, ಗ್ಯಾಲರಿ, ಆಡಳಿತ ಬ್ಲಾಕ್‌, ಮ್ಯಾನೇಜ್‌ಮೆಂಟ್‌ ಚೇಂಬರ್‌ಗಳು, ಅಧ್ಯಕ್ಷರ ಕೊಠಡಿ, ಸದಸ್ಯರ ಕೊಠಡಿ, ಲೋನ್‌ ಸೆಕ್ಷನ್‌, ರಿಕವರಿ, ಆಡಿಟ್‌ ಸೇರಿದಂದತೆ 4 ವಿಭಾಗಗಳನ್ನು ನಿರ್ಮಿಸಲಾಗಿದೆ. ಸೋಲಾರ್‌ ಸಿಸ್ಟಂಅಳವಡಿಸಲಾಗಿದೆ. ಯುರೋಪ್‌ ಮಾದರಿಯ ಕ್ಲಾಕ್‌ ಟವರ್‌ ನಿರ್ಮಿಸಲಾಗಿದ್ದು, ಸಮಾರು ₹7 ಕೋಟಿಗೂ ಅಧಿಕ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದೆ ಎಂದು ವಿವರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ ಮಾತನಾಡಿದರು.

ನಿರ್ದೇಶಕ ಮಂಡಳಿ ಸದಸ್ಯರಾದ ಫಕ್ಕೀರಸಾಬ ಬಾಗವಾನ, ವಿರೂಪಾಕ್ಷಯ್ಯ ಕಂಬಿ, ಅಪ್ಪಾಸಾಹೇಬ ಮನಗೂಳಿ, ಧರೆಪ್ಪ ತೇಲಿ, ಬಸವರಾಜ ಕಲೂತಿ, ಬಸವರಾಜ ಮಠಪತಿ, ಪ್ರಭುಲಿಂಗ ಜನವಾಡ, ನಂದೆಪ್ಪ ತಳವಾರ, ವೈಶಾಲಿ ಗೋಂಧಿ, ಶೋಭಾ ಅರಕೇರಿ, ಗಿರೀಶ ಬಾಂಗಿ ಹಾಗೂ ಸಿಬ್ಬಂದಿ ಇದ್ದರು.