ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಹಲವು ತಿಂಗಳಿಂದ ಸಾರಿಗೆ ಅವ್ಯವಸ್ಥೆ ಕಾಡುತ್ತಿದೆ. ಈ ಸಾರಿಗೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗುರುವಾರ ಬಸ್ ಪ್ರಯಾಣಿಕರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಪತ್ರ ನೀಡಿದರು.
ಕೋರಮಂಗಲದ ಬಿಬಿಎಂಪಿ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾದ ವಿದ್ಯಾರ್ಥಿ, ಸಾರ್ವಜನಿಕ ಮುಖಂಡರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಉಂಟಾಗಿರುವ ಸಾರಿಗೆ ಅವ್ಯವಸ್ಥೆ ಕುರಿತು ವಿವರಿಸಿದರು.ದೊಡ್ಡಬಳ್ಳಾಪುರ ಬೆಂಗಳೂರು ನಗರದಿಂದ ಸುಮಾರು 38 ಕಿ.ಮೀ. ಗಳ ದೂರದಲ್ಲಿದ್ದು, ದೊಡ್ಡಬಳ್ಳಾಪುರದ ನಾಗರಿಕರು ಬೆಂಗಳೂರಿಗೆ ಬಂದು ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ತುಂಬಾ ವರ್ಷಗಳಿಂದಲೂ ಇದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಯಾವುದೇ ಸರ್ಕಾರ ಮತ್ತು ಶಾಸಕರು ಬಂದರೂ ಸಹ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ನಾವು ತಮ್ಮ ಮೇಲಿನ ನಂಬಿಕೆ ಹಾಗೂ ವಿಶ್ವಾಸದಿಂದ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಮೊದಲು ಭಾಗಮಂಡಲ, ಲಕ್ಷ್ಮೇಶ್ವರ ನಂದಿಬೆಟ್ಟ ಮತ್ತು ಇತರೆ ಕೆಲವು ಜಿಲ್ಲೆಗಳಿಗೆ ಹೋಗುತ್ತಿದ್ದ ಬಸ್ಸುಗಳನ್ನು ಈ ಹಿಂದೆ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮ್ಯಾನೇಜರ್ ರದ್ದು ಮಾಡಿದ್ದಾರೆ. ಹಾಗೂ ಈ ಹಿಂದೆ ಕಾವೇರಿ ಭವನ, ಬೆಂಗಳೂರು, ದೊಡ್ಡಬಳ್ಳಾಪುರ ನಡುವೆ ಸಂಚರಿಸಲು ಸುಮಾರು 15 ರಿಂದ 20ರಷ್ಟು ಕೆಎಸ್ಆರ್ಟಿಸಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಇದೀಗ ಅವುಗಳ ಸಂಖ್ಯೆ ಕೇವಲ 3 ರಿಂದ 4ಕ್ಕೆ ಇಳಿದಿವೆ ಎಂದು ದೂರಿದರು.ದೊಡ್ಡಬಳ್ಳಾಪುರ-ಕಾವೇರಿ ಭವನ ಮಾರ್ಗವಾಗಿ ಬಸ್ಸುಗಳ ಸಂಚಾರ ಇದ್ದು, ಆದರೆ, ಪ್ರಸ್ತುತ ಸಮಯಕ್ಕೆ ಸರಿಯಾಗಿ ಬಸ್ಸುಗಳು ಇಲ್ಲದೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ.ಯ ಸಿಬ್ಬಂದಿಯನ್ನು ವಿಚಾರಿಸಲಾಗಿ, ಚಿಕ್ಕಬಳಾಪುರ ವಿಭಾಗಕ್ಕೆ ಸದರಿ ದೊಡ್ಡಬಳ್ಳಾಪುರ ಡಿಪೋ ಸೇರಿದ್ದು, ಅಲ್ಲಿಂದ ಸರಿಯಾಗಿ ಯಾವುದೇ ಬಸ್ಸುಗಳ ಸೇವೆ ಹಾಗೂ ಬಸ್ಸುಗಳಿಗೆ ಬೇಕಾಗುವ ಬಿಡಿ ಭಾಗಗಳು ಸರಿಯಾಗಿ ವಿತರಿಸದೇ ಇರುವುದೇ ಕಾರಣವೆಂದು ತಿಳಿಸಿದ್ದಾರೆ. ಆದ್ದರಿಂದ, ಈ ಮೊದಲು ಬೆಂಗಳೂರಿನ ಕೇಂದ್ರ ವಿಭಾಗಕ್ಕೆ ದೊಡ್ಡಬಳ್ಳಾಪುರ ಡಿಪೋ ಸೇರಿದ್ದು, ಈಗ ಮತ್ತೆ ಚಿಕ್ಕಬಳ್ಳಾಪುರ ವಿಭಾಗದಿಂದ ಬೇರ್ಪಡಿಸಿ ಬೆಂಗಳೂರಿನ ಕೇಂದ್ರ ಡಿಪೋಗೆ ಸೇರಿಸುವಂತೆ ಕೋರಿದರು.
ಈಗಾಗಲೇ ರದ್ದುಪಡಿಸಿರುವ ಬಸ್ಸುಗಳ ರೂಟ್ (ಭಾಗಮಂಡಲ, ಲಕ್ಷ್ಮೇಶ್ವರ, ನಂದಿಬೆಟ್ಟ) ಬಸ್ಸುಗಳನ್ನು ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳ ಸೇವೆಯನ್ನು ದೊಡ್ಡಬಳ್ಳಾಪುರದಿಂದ ಕಾವೇರಿ ಭವನಕ್ಕೆ ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ಹಾಗೂ ಕಾವೇರಿ ಭವನದಿಂದ ದೊಡ್ಡಬಳ್ಳಾಪುರಕ್ಕೆ ಸಂಜೆ 6 ರಿಂದ 8 ಗಂಟೆವರೆಗೆ ಹೆಚ್ಚುವರಿ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ತ್ವರಿತವಾಗಿ ಸ್ಪಂದಿಸಿ ಜಿಲ್ಲಾ ಸಾರಿಗೆ ವ್ಯವಸ್ಥಾಪಕರಿಗೆ ಕರೆಮಾಡಿ ಹೆಚ್ಚುವರಿ ಬಸ್ಸುಗಳನ್ನು ಒಂದು ವಾರದ ಒಳಗಾಗಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರಯಾಣಿಕರಾದ ವಿನೋದ್ ಕುಮಾರ್, ಮಂಜುನಾಥ್, ಚಂದ್ರ ಮಂಚನಬೆಲೆ, ಸಚಿನ್, ಮಂಜು ಉಪಸ್ಥಿತರಿದ್ದರು.
20ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಉಂಟಾಗಿರುವ ಕೆಎಸ್ಆರ್ಟಿಸಿ ಬಸ್ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.