ಯಾರನ್ನು ಮಂತ್ರಿ ಮಾಡಬೇಕು, ಯಾರನ್ನು ಬಿಡಬೇಕು, ಯಾಕೆ ಮಾಡಬೇಕು, ಯಾಕೆ ಬಿಡಬೇಕು ಇದೆಲ್ಲವೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನನಗೆ ಅದು ಯಾವುದೂ ತಿಳಿದಿಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯಾರನ್ನು ಮಂತ್ರಿ ಮಾಡಬೇಕು, ಯಾರನ್ನು ಬಿಡಬೇಕು, ಯಾಕೆ ಮಾಡಬೇಕು, ಯಾಕೆ ಬಿಡಬೇಕು ಇದೆಲ್ಲವೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನನಗೆ ಅದು ಯಾವುದೂ ತಿಳಿದಿಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.ಖಾತೆ ಹಂಚಿಕೆ ಹಾಗೂ ಕೆಲ ಸಚಿವರ ಬದಲಾವಣೆ ವಿಚಾರವಾಗಿ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ರಾಜ್ಯದವರೇ ಇದ್ದಾರೆ. ಅವರು ಯಾರಿಗೆ ಏನು ಮಾಡಬೇಕು? ಮಾಡಿಕೊಂಡು ಹೋಗ್ತಿರ್ತಾರೆ. ಈಗ ಸ್ವಾಭಾವಿಕವಾಗಿ ನಮ್ಮಲ್ಲಿರುವ 136 ಜನ ಶಾಸಕರು ಸಚಿವರಾಗಲು ಅರ್ಹತೆ ಹೊಂದಿದ್ದಾರೆ. ಆದರೆ ಸಂವಿಧಾನ ಪ್ರಕಾರ ಶೇ.15ರಷ್ಟು ಜನರು ಮಾತ್ರ ಜನರು ಸಚಿವರಾಗಬಹುದು. 2018ರಲ್ಲಿ ನನ್ನನ್ನೂ ಮಂತ್ರಿ ಸ್ಥಾನದಿಂದ ಕೈ ಬಿಟ್ಟರಪ್ಪ,‌‌ ನಾನು ಮಂತ್ರಿ ಆಗಲಿಲ್ಲವಲ್ಲ? ಆರು ತಿಂಗಳ ಕಾಲ. 2013ರಿಂದ 2018ರವರೆಗೆ ಜಲಸಂಪನ್ಮೂಲ ಸಚಿವನಾಗಿದ್ದೆ. ಅದಾದ ಮೇಲೆ ಸಮ್ಮಿಶ್ರ ಸರ್ಕಾರದಲ್ಲಿ ನಾನು ಮೊದಲು ಆರು ತಿಂಗಳು ಮಂತ್ರಿ ಆಗಲಿಲ್ಲ. ಹೈಕಮಾಂಡ್ ನಿರ್ಧಾರಗಳಿಗೆ ನಾವು ತಲೆ ಬಾಗಬೇಕಾಗುತ್ತದೆ ಎಂದು ಪರೋಕ್ಷವಾಗಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡಗೆ ತಿರುಗೇಟು ನೀಡಿದರು.

ವಿಜಯಪುರ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಕೇಳಿದ್ದ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಇನ್ನೊಂದು ಸ್ಥಾನ ಕೊಡಬೇಕೆಂದು ಬಹಳ ಕೇಳಿದ್ದೆ. ಅದನ್ನೇನು ನಾನು ಮುಚ್ಚುಮರೆ ಕೇಳಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರಿಗೆ ಬಹಳ ಮುಕ್ತವಾಗಿ ಹೇಳಿದ್ದೀನಿ. ಬೇಕಾದರೆ ಯಾರ ಬಳಿ ಹೋಗಿ ಕೇಳಿಕೊಳ್ಳಬೇಕೋ ಅವರಿಗೆ ಕೇಳಿಕೊಳ್ಳಿ ಎಂದರು.

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಎಂ.ಬಿ.ಪಾಟೀಲ ಮೇಲೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ನೋಡಿ, ಮಂತ್ರಿ ಮಾಡುವುದು ಬಿಡುವುದು ಯಾರು?. ಮುಖ್ಯಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಎಐಸಿಸಿ ಅಧ್ಯಕ್ಷರು, ವೇಣುಗೋಪಾಲ, ಸುರ್ಜೇವಾಲ, ರಾಹುಲ್‌ಗಾಂಧಿ ಅವರು. ನನಗೇನು ಸಂಬಂಧ? ನಿಮಗೆ ಮಂತ್ರಿ ಯಾಕೆ ಮಾಡಿಲ್ಲ ಅನ್ನೋದನ್ನ ಹೋಗಿ ಯಾರಿಗೆ ಕೇಳಬೇಕು?. ಮುಖ್ಯಮಂತ್ರಿ, ಸುರ್ಜೇವಾಲ ಅವರಿಗೆ ಕೇಳಿಕೊಳ್ಳಿ ನಿಮ್ಮನ್ನ ಯಾಕೆ ಮಂತ್ರಿ ಮಾಡಿಲ್ಲ ಎಂದು. ನಾನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಲ್ಲ. ಬಸವಣ್ಣನನ್ನೇ ಬಿಟ್ಟಿಲ್ಲ, ಎಂ.ಬಿ. ಪಾಟೀಲ ಯಾರು? ಎಂದು ನಗುತ್ತ ಹೊರಟರು.

ನ್ಯಾಯಾಲಯದ ನಿರ್ಬಂಧದ ಮಧ್ಯೆ ಸಚಿವ ನಾಗೇಂದ್ರ ದೆಹಲಿ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದ ಆಚೆ ಹೋಗಬಾರದು ಎಂದು ನ್ಯಾಯಾಲಯ ನಿರ್ಬಂಧ ಹೇರಿದ್ದು ಗೊತ್ತಿಲ್ಲ. ಸಚಿವ ನಾಗೇಂದ್ರ ದೆಹಲಿಗೆ ಹೋಗಿರುವ ವಿಚಾರ ‌ನನಗೆ ಗೊತ್ತಿಲ್ಲ, ಮಾಹಿತಿ ಪಡೆದು ಮಾತನಾಡುವೆ ಎಂದು ಹೇಳಿದರು.

ಬಿಡದಿ ಟೌನ್‌ಶೀಪ್ ಹೋರಾಟ ಪುನಾರಂಭ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಡದಿ ಟೌನ್‌ಶಿಪ್ ಕುಮಾರಸ್ವಾಮಿಯವರ ಕನಸಿನ ಕೂಸು, ನಮ್ಮವರು ಮುಂದುವರಿಸಿಕೊಂಡು ಬಂದಿದ್ದಾರೆ. 2006 ರಿಂದ 20 ವರ್ಷಗಳ ಕಾಲ ಬಿಜೆಪಿ, ಜೆಡಿಎಸ್ ಮಾಡಿದ್ದೇನು?. 2006ರಲ್ಲಿ ಶುರು ಮಾಡಿದ್ದು ನೀವೇ, ಈವರೆಗೂ ಯಾಕೆ ಸುಮ್ಮನೆ ಕೂತ್ರಿ ಎಂದು ಪ್ರಶ್ನಿಸಿದರು.

20 ವರ್ಷದಲ್ಲಿ ಕ್ಯಾಬಿನೆಟ್‌ ನಲ್ಲಿ ಟೌನ್‌ಶಿಪ್ ಕೈಬಿಟ್ಟು ಆದೇಶ ಮಾಡಲು ಆಗಲಿಲ್ಲವಾ? ಇದು ರಾಜಕೀಯ ಪ್ರೇರಿತ ಎಂಬುದು ನನಗೂ ಗೊತ್ತಿದೆ. ನಾನು ಫೈಲ್ ನೋಡಿದ್ದೇನೆ. 2006ರಲ್ಲಿ ಬಿಡದಿ ಟೌನ್‌ಶಿಪ್ ಶುರು ಮಾಡಿದ್ದು, ಅವರ ಕನಸಿನ ಕೂಸು, ಈಗ ಮಾಡುತ್ತಿರೋದು ರಾಜಕೀಯಕ್ಕಾಗಿ, ಆ ಭಾಗದ ರೈತರನ್ನು ಎತ್ತಿ ಕಟ್ಟೋದಕ್ಕೆ. ಸಿಎಂ ಕಮೀಟಿ ರಚನೆ ಬಗ್ಗೆ ಹೇಳಿದ್ದಾರೆ. ಇದನ್ನು ನಿಭಾಯಿಸಲು ನಮ್ಮ ಸಿಎಂ ಗಟ್ಟಿ ಇದ್ದಾರೆ. ಜನ್ಮ ಕೊಟ್ಟವರು ಇವರೆ, ತಾಯಿ-ತಂದೆ ಇವರೆ, ಜನಕರು ಇವರೆ, ಈಗ ಹೋರಾಟ ಮಾಡೋದು ಇವರೆ. ಈಗ ತೊಟ್ಟಲು ತೂಗಿ ಚಿವುಟಿ ಅಳಿಸುತ್ತಿದ್ದಾರೆ ಎಂದು ಟೀಕಿಸಿದರು.

ವಿಜಯೇಂದ್ರ-ಮಧು ಬಂಗಾರಪ್ಪ ಟಾಕ್ ರೆಕಾರ್ಡ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿನ್ನೆ ವಿಜಯೇಂದ್ರ, ಮಧು ಬಂಗಾರಪ್ಪ ಮಾತನಾಡೋವಾಗ ರೆಕಾರ್ಡ್ ಆಗಿದೆಯಲ್ಲ. ಹೋರಾಟ ಮಾಡ್ತಿರೋರೆ ಪರಿಹಾರ ತೆಗೆದುಕೊಳ್ತಿದ್ದಾರೆ ಎಂದು ಹೇಳಿದ್ದಾರೆ ಎಂದರು.

ಕುಮಾರಸ್ವಾಮಿ ಪತ್ನಿ ಜಮೀನು ಇರೋ ವಿಚಾರವಾಗಿ ಮಾತನಾಡಿ, ನಾನು ಆ ಬಗ್ಗೆ ಮಾತನಾಡಲ್ಲ, ಹೆಣ್ಣು ಮಕ್ಕಳ ವಿಚಾರದಲ್ಲಿ ಮಾತನಾಡಲ್ಲ. ಅವರು ನನ್ನ ಸಹೋದರಿ (ಅನಿತಾ ಕುಮಾರಸ್ವಾಮಿ) ಇದೊಂದು ರಾಜಕೀಯ ತಂತ್ರ, ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳುವ ತಂತ್ರ. ಜಮೀನು ಕೊಡುವವರು ಕೊಡುತ್ತಾರೆ, ಜಮೀನು ಕೊಡ್ತೀನಿ ಎನ್ನುವವರು ಕೊಡಬಾರದಾ ಎಂದು ಸಚಿವ ಎಂ.ಬಿ.ಪಾಟೀಲ ಪ್ರಶ್ನಿಸಿದರು.