ಸ್ವತಃ ಯಕ್ಷಗಾನ ಕಲಾವಿದರಾಗಿದ್ದ ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣರು ಅರ್ಚಕರಾಗಿದ್ದು ಯಕ್ಷಗಾನ ಸೇರಿದಂತೆ ವಿವಿಧ ಕಲೆಗಳನ್ನು ಪ್ರೋತ್ಸಾಹಿಸುತ್ತಿದ್ದ ಕಲಾಪ್ರೇಮಿಯಾಗಿದ್ದರು. ಕಟೀಲು ದೇವಳಕ್ಕೆ ನೊಂದು ಬರುತ್ತಿದ್ದ ಅನೇಕರಿಗೆ ಸಾಂತ್ವನದ ಜೊತೆಗೆ, ಸಹಾಯ, ಧೈರ್ಯವನ್ನೂ ನೀಡುತ್ತಿದ್ದ ಮಹಾನ್ ಶಕ್ತಿಯಾಗಿದ್ದು ಸದಾ ಸ್ಮರಣೀಯರು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.
ಕನ್ನಡಪ್ರಭವಾರ್ತೆ ಮೂಲ್ಕಿ
ಸ್ವತಃ ಯಕ್ಷಗಾನ ಕಲಾವಿದರಾಗಿದ್ದ ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣರು ಅರ್ಚಕರಾಗಿದ್ದು ಯಕ್ಷಗಾನ ಸೇರಿದಂತೆ ವಿವಿಧ ಕಲೆಗಳನ್ನು ಪ್ರೋತ್ಸಾಹಿಸುತ್ತಿದ್ದ ಕಲಾಪ್ರೇಮಿಯಾಗಿದ್ದರು. ಕಟೀಲು ದೇವಳಕ್ಕೆ ನೊಂದು ಬರುತ್ತಿದ್ದ ಅನೇಕರಿಗೆ ಸಾಂತ್ವನದ ಜೊತೆಗೆ, ಸಹಾಯ, ಧೈರ್ಯವನ್ನೂ ನೀಡುತ್ತಿದ್ದ ಮಹಾನ್ ಶಕ್ತಿಯಾಗಿದ್ದು ಸದಾ ಸ್ಮರಣೀಯರು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.ಕಟೀಲು ಗೋಪಾಲಕೃಷ್ಣ ಸಭಾಭವನದಲ್ಲಿ ಪದ್ಮನಾಭ ಕಟೀಲು ಸಂಚಾಲಕತ್ವದ ಅಸ್ರಣ್ಣ ಸಂಸ್ಮರಣ ಸಮಿತಿ ಮುಂಬೈ ಯುಎಇಯ ವತಿಯಿಂದ ಶನಿವಾರ ನಡೆದ 26 ನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಹರೀಶ್ ಶೇರಿಗಾರ್ ಅವರಿಗೆ ಕಟೀಲು ಗೋಪಾಲಕೃಷ್ಣ ಪ್ರಶಸ್ತಿ, ಕಲ್ಲಾಡಿ ವಿಠಲ ಶೆಟ್ಟಿ ಪ್ರಶಸ್ತಿಯನ್ನು ಬೋಲ್ನಾಡುಗುತ್ತು ಚಂದ್ರಹಾಸ್ ರೈ ಅವರಿಗೆ, ಅಗರಿ ಶ್ರೀನಿವಾಸ ಪ್ರಶಸ್ತಿಯನ್ನು ಕಲಾವಿದ ರವಿಶಂಕರ್ ವಳಕುಂಜ, ನಿಡ್ಲೆ ನರಸಿಂಹ ಭಟ್ ಪ್ರಶಸ್ತಿಯನ್ನು ಯಕ್ಷಗಾನ ಹಿಮ್ಮೆಳ ಕಲಾವಿದ ಮೋಹನ್ ಶೆಟ್ಟಿಗಾರ್, ಗೋಪಾಲಕೃಷ್ಣ ಅಸ್ರಣ್ಣ ಕಲಾವಿದ ಪ್ರಶಸ್ತಿಯನ್ನು ನಾರಾಯಣ ಕುಲಾಲ್ ಅವರಿಗೆ ಪ್ರದಾನಿಸಲಾಯಿತು.ಅಸ್ರಣ್ಣ ನೆನಪಿನಲ್ಲಿ ದಯಾನಂದ ಕಿರೋಡಿಯನ್, ಸುದರ್ಶನ್ ಹೆಗ್ಡೆ ಕಾರ್ಕಳ ದೀಪಕ್ ಎಸ್ ಪಿ, ಯಕ್ಷಗಾನ ಗುರು ಶೇಖರ ಶೆಟ್ಟಿಗಾರ್, ಯಕ್ಷಗಾನ ಸಂಘಟಕ ದಿನೇಶ್ ಶೆಟ್ಟಿ ಕೊಟ್ಟಿಂಜ, ಸಸಿಹಿತ್ಲು ದೇವಳದ ಮೊಕ್ತೇಸರ ಚಂದ್ರಶೇಖರ ಬೆಲ್ಚಡ, ಆನಂದ ಶೆಟ್ಟಿ ಎಕ್ಕಾರು, ಅರುಣೋದಯ ರೈ, ಬಾಬು ಶೆಟ್ಟಿ ಪೆರಾರ ಅವರನ್ನು ಗೌರವಿಸಲಾಯಿತು. ಆರೋಗ್ಯ ಸಚಿವ ಯು. ಟಿ. ಖಾದರ್, ಕಟೀಲು ಕ್ಷೇತ್ರದ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಾಬು ಎಸ್ ಶೆಟ್ಟಿ ಪೆರಾರ, ಶ್ರೀಪತಿ ಭಟ್ ಮೂಡಬಿದಿರೆ, ಕ.ಸಾ.ಪ ಮಾಜಿ ರಾಜ್ಯಧ್ಯಕ್ಷ ಹರಿಕೃಷ್ಣ ಪುನರೂರು, ಕಟೀಲು ದೇವಳದ ಏಳೂ ಮೇಳದ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ ಕೊಡೆತ್ತೂರು, ಅಗರಿ ರಾಘವೇಂದ್ರ ರಾವ್, ರವಿ ಶೆಟ್ಟಿಗಾರ್ ಕಾರ್ಕಳ, ಮಹಮ್ಮದ್ ಶರೀಫ್, ಸಂದೀಪ್ ಕೊಡವೂರು, ನಿಡ್ಲೆ ರಾಮ್ ಭಟ್, ಪ್ರಮೋದ್ ಭಟ್, ಶ್ರೀಕಾಂತ್ ಶೆಟ್ಟಿ, ಧನಂಜಯ ಶೆಟ್ಟಿಗಾರ್, ಪ್ರೇಮಾನಂದ ಕುಲಾಲ್, ಪ್ರಭಾಕರ ಸುವರ್ಣ, ಮುರಳೀಧರ್ ಬಲ್ಲಾಳ್, ದುಬೈ ಬಿಲ್ಲಾವಾಸ್ ದೀಪಕ್ ಎಸ್ ಪಿ, ದಯಾನಂದ ಕಿರೋಡಿಯಾನ್, ದಿನೇಶ್ ಶೆಟ್ಟಿ , ನೀಲಯ್ಯ ಕೋಟ್ಯಾನ್, ಸುದರ್ಶನ್ ಹೆಗ್ಡೆ ಕಾರ್ಕಳ, ರಾಜಾರಾಮ್ ಬಳ್ಕುಂಜೆ ಮತ್ತಿತರರು ಉಪಸ್ಥಿತರಿದ್ದರು.
ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅಸ್ತಣ್ಣರು, ಅಗರಿ ಭಾಗವತರು, ಕಲ್ಲಾಡಿ ಶೆಟ್ಟರು, ನಿಡ್ಲೆ ನರಸಿಂಹ ಭಟ್ಟರ ಸಂಸ್ಮರಣ ಮಾತುಗಳನ್ನಾಡಿದರು. ಉಪನ್ಯಾಸಕ ವಾದಿರಾಜ ಕಲ್ಲೂರಾಯ ನಿರೂಪಿಸಿದರು. ಸಂಘಟಕ ಪದ್ಮನಾಭ ಕಟೀಲು ವಂದಿಸಿದರು. ಕಟೀಲು ಏಳೂ ಮೇಳಗಳ ಆಯ್ದ ಕಲಾವಿದರಿಂದ ದೇವ ಸಂಕಲ್ಪ ಯಕ್ಷಗಾನ ಪ್ರದರ್ಶನಗೊಂಡಿತು.ಸಂಜೆ ನಡೆದ ದೇವಸಂಕಲ್ಪ ಯಕ್ಷಗಾನ ಪ್ರಸಂಗದ ಮಧ್ಯದಲ್ಲಿ ಮೇಳದ ಹಿರಿಯ ಕಲಾವಿದ, ಹರಿನಾರಾಯಣ ಭಟ್ ಎಡನೀರು ತಲೆ ಸುತ್ತಿ ರಂಗಸ್ಥಳದ ಕೆಳಗೆ ಬಿದ್ದ ಘಟನೆ ನಡೆದಿದ್ದು, ಸ್ವಲ್ಪ ಸಮಯದ ನಂತರ ಚೇತರಿಸಿಕೊಂಡು ಪ್ರಸಂಗ ಸಂಪೂರ್ಣ ಪೂರ್ಣಗೊಂಡು ಬಳಿಕ ಅವರು ಮನೆಗೆ ತೆರಳಿದ್ದಾರೆ.