ಸಾರಾಂಶ
ಹುಬ್ಬಳ್ಳಿ: ದೇಶದಲ್ಲಿ ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿರುವ ಬಹಳಷ್ಟು ಪ್ರಕರಣಗಳಿವೆ. ಹೀಗಾಗಿ ಪರಿಶೀಲನೆ ಮಾಡಿ ತೆಗೆಯುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಸರಿಯಾಗಿ ಪರಿಶೀಲನೆ ಮಾಡಿ ತೆಗೆಯಬೇಕು. ಕಾರ್ಡ್ ರದ್ದು ಮಾಡುವಾಗ ತಾರತಮ್ಯ ಆಗಬಾರದು. ಇದನ್ನು ರಾಜ್ಯ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯದಲ್ಲಿ 8 ಲಕ್ಷ ಪಡಿತರ ಕಾರ್ಡ್ ರದ್ದು ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಅನರ್ಹರು ಪಡಿತರ ಕಾರ್ಡ್ ಹೊಂದಿರೋರು ಬಹಳಷ್ಟು ಕಡೆ ಇದ್ದಾರೆ. ಸಾಕಷ್ಟು ಆಧುನಿಕ ತಂತ್ರಜ್ಞಾನ ಇದೆ. ಅದನ್ನು ಬಳಸಿ ಅನರ್ಹರ ಕಾರ್ಡ್ಗಳನ್ನು ರದ್ದುಪಡಿಸಬೇಕು. ಯಾರಿಗೋ ಅಧಿಕಾರ ಕೊಟ್ಟರೆ ಅವರು ಜನರಿಗೆ ತೊಂದರೆ ನೀಡುತ್ತಾರೆ. ನಾನು ಕಾರ್ಡ್ ರದ್ದು ಮಾಡುವುದನ್ನು ವಿರೋಧಿಸುತ್ತಿಲ್ಲ. ಆದರೆ, ಅರ್ಹರನ್ನು ತೆಗೆಯಬಾರದು. ಕ್ರೈಟೇರಿಯಾ ಕೇಂದ್ರ ಸರ್ಕಾರ ನಿರ್ಧಾರ ಮಾಡಲ್ಲ. ನಿಯಮಗಳನ್ನು ರೂಪಿಸುವುದು ರಾಜ್ಯ ಸರ್ಕಾರಗಳು. ಐಟಿ ರಿಟರ್ನ್ ಮಾಡಿದವರನ್ನು ಕೈ ಬಿಡಬೇಕು ಎಂದು ನಾವು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ, ಆದಾಯ ತೆರಿಗೆ ಪಾವತಿಸುವವರನ್ನು ತೆಗೆಯುತ್ತಿದ್ದಾರೆ. ಐದು ವರ್ಷಕ್ಕೊಮ್ಮೆ ಪರಿಶೀಲನೆ ಮಾಡಬೇಕು ಎನ್ನುವುದು ನಿಯಮ. ಅದನ್ನು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುತ್ತೇವೆ ಅಷ್ಟೇ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ನಾಯಕತ್ವದಲ್ಲಿ ದೇಶದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಯಾಗುತ್ತಿದೆ. ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಚಲ್ತಾ ಹೈ ಎಂಬ ಅಟಿಟ್ಯೂಡ್ಗೆ ಅವಕಾಶ ಇಲ್ಲದಂತಾಗಿದೆ. ಮೋದಿ ಅವರಿಗೆ 75ನೆಯ ಜನ್ಮದಿನದ ಶುಭಾಶಯಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.