ದಾಬಸ್ಪೇಟೆ: ಪಟ್ಟಣ ಸಮೀಪದ ಹರಳೂರಿನಲ್ಲಿ ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ಮುಂಗಾರುವಿನಲ್ಲಿ ಭಾವಗೀತೆಗಳು, ಜನಪದ-ತತ್ತ್ವಪದಗಳು, ವಚನಗಳನ್ನು ಗಾಯಕರು ಮನದುಂಬಿ ಹಾಡಿ ವಚನ ಮುಂಗಾರನ್ನು ಸಂಗೀತದ ಮುಂಗಾರಾಗಿ ಮೂಡಿಸಿದರು.
ಬಳಗದ ಅಧ್ಯಕ್ಷ ಪಿನಾಕಪಾಣಿ ಮತ್ತು ತಂಡ ಹಾಡಿದ ಝಕ್ಕಣಕ್ಕ ಗೀತೆಗೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಖುಷಿಪಟ್ಟರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಡಿತ ದೇವೇಂದ್ರಕುಮಾರ ಪತ್ತಾರ್, ಜನಪ್ರಿಯ ಗಾಯಕಿ ಮೀನಾಕ್ಷಿ ಮೇಟಿ, ಜನಪದ ಗಾಯಕಿ ಟಿ.ಎಂ.ಜಾನಕಿ, ಹಿಂದೂಸ್ಥಾನಿ ಸಂಗೀತದ ಡಾ.ಚೇತನಾ ಮುಧೋಳ್, ಕರ್ನಾಟಕ ಸಂಗೀತ ವಿದುಷಿ ಸರ್ವಾಣಿ ಯೋಗೇಶ್, ಜನಪದ ಗಾಯಕ ಬಸವರಾಜ ಅಜ್ಜಪ್ಪ, ವಚನ ಬಿತ್ತನೆ ಶಿಕ್ಷಕಿ ಜಯ ಪ್ರವೀಣ್ ವಚನ ಮುಂಗಾರಿನಲ್ಲಿ ಸಂಗೀತದ ರಸದೌತಣ ಉಣಬಡಿಸಿದರು.ಕಾರ್ಯಕ್ರಮದಲ್ಲಿ ವಚನಜ್ಯೋತಿ ಬಳಗ ಕೇಂದ್ರೀಯ ಸಮಿತಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಹತ್ತು ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರು. ನೀಡಿದ್ದಲ್ಲದೆ ಶಾಲೆಯ ಹಾಸ್ಟೆಲ್ಗೆ ಒಂದು ಕ್ವಿಂಟಲ್ ಅಕ್ಕಿ, ಅರ್ಧ ಕ್ವಿಂಟಲ್ ರವೆ ಮತ್ತು ಅವಲಕ್ಕಿ ನೀಡಿದರು. ಜ್ಞಾನಯೋಗ ಲಯನ್ಸ್ ಕ್ಲಬ್ ಸದಸ್ಯರು 8ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳಿ ಸಮವಸ್ತ್ರ ವಿತರಿಸಿದರು.
ಬಳಗದ ಗೌರವಾಧ್ಯಕ್ಷ ಡಾ.ಮಹೇಶ ಬೆಲ್ಲದರು ಸಂಸ್ಥೆ ಆನ್ ಲೈನ್ ಇನ್ಸ್ಟ್ರುಮೆಂಟ್ ಲಿಮಿಟೆಡ್ನ ಡಿಜಿಟಲ್ ಸ್ಮಾರ್ಟ್ ಬೋರ್ಡ್ ನೀಡುವುದಾಗಿ ಘೋಷಿಸಿದರು. ಶೀಲಾ ಪಾಟೀಲ್ ಕಲಾವಿದರನ್ನು ಸನ್ಮಾನಿಸಿದರು.ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಕಾರ್ಯಕಾರಿ ನಿರ್ದೇಶಕ ಜಯವಿಭವಸ್ವಾಮಿ, ನಿವೃತ್ತ ಸಹಾಯಕ ನಿರ್ದೇಶಕ ಬಿ.ಎಸ್.ಶಿವಪ್ರಕಾಶ್, ಹರಳೂರು ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಕೆ.ಶಿವಪ್ರಸಾದ್, ವೀರಯೋಧ ಗೋಲ್ಡನ್ ಸೀ ಸೆಕ್ಯೂರಿಟಿಸ್ ಮಾಲೀಕ ಗಂಗಾಧರ್, ಬಳಗದ ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಸಂಚಾಲಕ ರುದ್ರೇಶ್ ಇಸುವನಹಳ್ಳಿ, ಮುಖ್ಯಶಿಕ್ಷಕ ಗುರುಮೂರ್ತಿ ಮೊದಲಾದವರು ಭಾಗವಹಿಸಿದ್ದರು.
ಪೋಟೋ 5 :
ಹರಳೂರಿನಲ್ಲಿ ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ಮುಂಗಾರು ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹಾಗೂ ಗಣ್ಯರು ಭಾಗವಹಿಸಿದ್ದರು.