ಲಕ್ಷ್ಮೇಶ್ವರ: ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಿಂದ ರಾಷ್ಟ್ರಿಯ ಸೇವಾ ಯೋಜನೆಯ(ಎನ್ಎಸ್ಎಸ್ )ವಾರ್ಷಿಕ ಶಿಬಿರ ಗುಲಗಂಜಿಕೊಪ್ಪದ ದುಂಡಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಿತು.
ಈ ವೇಳೆ ಶಿಕ್ಷಕಿ ಮೈತ್ರಾದೇವಿ ಹಿರೇಮಠ ಮಾತನಾಡಿ, ಎನ್ಎಸ್ಎಸ್ ಶಿಬಿರ ಯುವಕರಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ. ವಿದ್ಯಾರ್ಥಿಗಳಿಗೆ ಶ್ರಮದ ಮಹತ್ವ ತಿಳಿಸುತ್ತದೆ ಎಂದರು.12ನೇ ಶತಮಾನದಲ್ಲಿ ಶರಣೆಯರು ಮೂಢನಂಬಿಕೆ, ಜಾತಿ ಪದ್ಧತಿ ವಿರೋಧಿಸಿ, ಕಾಯಕದ ಮಹತ್ವ ಸಾರುವ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದರು. ಮಹಿಳೆಯರು ದಿಟ್ಟತನ ತೋರಬೇಕು. ಅಂದಾಗ ಮಾತ್ರ ಆತ್ಮಬಲ ಗಟ್ಟಿಯಾಗುತ್ತದೆ. ಅಕ್ಕಮಹಾದೇವಿ ಸ್ತ್ರೀ ಸಮಾನತೆ ಎತ್ತಿ ತೋರಿಸಿದಳು. ಕನ್ನಡ ಸಾಹಿತ್ಯಕ್ಕೆ ಮಹಿಳಾ ವಚನಗಾರ್ತಿಯರ ಕೊಡುಗೆ ಅಪಾರವಾದದ್ದು ಎಂದರು.ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ ಮಾತನಾಡಿ, ಅಕ್ಕಮಹಾದೇವಿಯವರ ವಚನಗಳನ್ನು ಮೈಗೂಡಿಸಿಕೊಂಡು ಅದರಂತೆ ನಡೆದಾಗ ಜೀವನ ಸಾರ್ಥಕವಾಗುತ್ತದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಬೇಕು. ವಚನಗಾರ್ತಿಯರು ಸಾಹಿತ್ಯಕ್ಕೆ ಮತ್ತು ಸಾಮಾಜಿಕ ಪರಿವರ್ತನೆಗೆ ನೀಡಿದ ಕೊಡುಗೆ ಅಪಾರ ಎಂದರು.
ಇನ್ನರ್ವೀಲ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷೆ ಮಾಲಾದೇವಿ ದಂದರಗಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ 2000 ಸಾವಿರ ವರ್ಷಗಳ ಇತಿಹಾಸವಿದ್ದು, ಇಂದಿಗೂ ಮಹಿಳಾ ವಚನಗಾರ್ತಿಯರನ್ನು ನೆನೆಯುತ್ತೇವೆ. ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಅಡಗಿವೆ ಎಂದರು.ಪತ್ರಕರ್ತ ಶಿವಲಿಂಗಯ್ಯ ಹೊತಗಿಮಠ ಮಾತನಾಡಿ, ವಿದ್ಯಾರ್ಥಿಗಳು ಎನ್ಎಸ್ಎಸ್ ಶಿಬಿರದಲ್ಲಿ ಕಲಿತ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿ ದಿಸೆಯಲ್ಲಿಯೆ ಪ್ರತಿಯೊಬ್ಬರೂ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆ ಓದುವುದರಿಂದ ಜ್ಞಾನರ್ಜನೆ ಬೆಳೆಯುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುತ್ತದೆ. ಮೊಬೈಲ ಗೀಳಿನಿಂದ ಹೊರಬಂದು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಮಯ ಕೊಟ್ಟಾಗ ಅತ್ಯುನ್ನತ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ಸುಧಾ ಮಾದರ, ಪ್ರಾಚಾರ್ಯ ವಿಜಯಕುಮಾರ ಬಿಳಿಯೆಲೆ, ಎಸ್ಎಸ್ಎಸ್ ಘಟಕ ಅಧಿಕಾರಿ ಪರಮೇಶ ತಡಹಾಳ, ಶರಣಬಸವ ಅಣ್ಣಿಗೇರಿ, ರೇವಂತ ಕ್ಷತ್ರಿಯ, ಪ್ರಕಾಶ ಹರ್ಲಾಪುರ, ಉಪನ್ಯಾಸಕ ರವಿಕುಮಾರ ನೀರಲಗಿ, ಸಂಗೀತಾ ಲಕ್ಕಣ್ಣವರ, ಮಮತಾ ನಡುವಿನಮನಿ, ಮಾಲಾಶ್ರೀ ಹುರಳಿಕುಪ್ಪಿ, ಶಭಾನಾ ಕಲಕುಟ್ರಿ ಹಾಗೂ ಸಿಬ್ಬಂದಿ ಇದ್ದರು. ಮೇಘಾ ಪ್ರಾರ್ಥಿಸಿದರು. ಸವಿತಾ ಹಣಗಿ ಸ್ವಾಗತಿಸಿದರು. ನಿವೇದಿತಾ ಹುಲಕೋಟಿ ಪ್ರತೀಕ್ಷಾ ಗೊಂದಕರ, ಪ್ರಗತಿ ಹುಬ್ಬಳ್ಳಿ ಕಾರ್ಯಕ್ರಮ ನಿರ್ವಹಿಸಿದರು.