ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನಾಚರಣೆ ಬುಧವಾರ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು.ಈ ಸಂದರ್ಭ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ ತಾನು ಎನ್.ಸಿ.ಸಿ. ಕೆಡಿಟ್ ಆಗಿದ್ದು, ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತ್ತು. ಆಗ 2-3 ನಿಮಿಷಗಳ ಕಾಲ ಅವರನ್ನು ಹತ್ತಿರದಿಂದ ಕಾಣುವ ಸುಸಂದರ್ಭ ಒದಗಿಬಂದಿತ್ತು. ಆಗಲೇ ಅವರ ಆ ವರ್ಚಸ್ಸು ನನ್ನ ಮೇಲೆ ಅಗಾಧ ಪ್ರಭಾವ ಬೀರಿತ್ತು. ದೇಶಕ್ಕಾಗಿ ನಾನು ಸೇವೆ ಮಾಡಬೇಕೆಂಬ ಹಂಬಲ ಮೂಡಿತ್ತು ಎಂದು ಆ ಕ್ಷಣಗಳನ್ನು ಸ್ಮರಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ವಾಜಪೇಯಿ ಅವರು ಅಜಾತಶತ್ರು ಆಗಿದ್ದರೂ ವಿರೋಧಿಗಳು ಕೂಡ ಅಟಲ್ ಅವರನ್ನು ಒಪ್ಪಿಕೊಳ್ಳುತ್ತಿದ್ದರು. ಅತಿ ಕಿರಿಯ ಸದಸ್ಯರಾಗಿ ಮೊದಲು ಸಂಸತ್ತು ಪ್ರವೇಶಿಸಿದ ಅಟಲ್ ಅವರ ಮಾತುಗಳನ್ನು ಕೇಳಿದ ಅಂದಿನ ಪ್ರಧಾನಿ ನೆಹರೂ ಅವರು ಅಟಲ್ ಜಿ ಮುಂದೊಂದು ದಿನ ಭಾರತದ ಪ್ರಧಾನಿ ಆಗುತ್ತಾರೆ ನೋಡಿ ಎಂದು ಭವಿಷ್ಯ ನುಡಿದಿದ್ದರು. ಪ್ರಧಾನಿಯಾದ ಸಂದರ್ಭದಲ್ಲಿ ಫೋಖ್ರಾನ್ ಅಣು ಬಾಂಬ್ ಪರೀಕ್ಷೆ, ಕಾರ್ಗಿಲ್ ಯುದ್ಧವನ್ನು ನಿಭಾಯಿಸಿ ಜಯಿಸಿದ ಬಗೆ, ಜಗತ್ತಿನ ಅನೇಕ ದೇಶಗಳ ಆರ್ಥಿಕ ನಿರ್ಬಂಧಗಳನ್ನು ನಿಭಾಯಿಸಿದ್ದು. ಟೆಲಿಕಾಂ ಕ್ಷೇತ್ರದ ಸಾಧನೆ, ಸುವರ್ಣ ಚತುಷ್ಪಥ ರಸ್ತೆ, ಸರ್ವ ಶಿಕ್ಷಾ ಅಭಿಯಾನ ಇಂತಹ ಅನೇಕ ಯೋಜನೆಗಳು ಇಂದಿಗೂ ಮಾದರಿಯಾಗಿವೆ ಎಂದು ಹೇಳಿದರು.ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಉಪಾಧ್ಯಕ್ಷೆ ಪೂಜಾ ಪೈ, ಕಾರ್ಪೊರೇಟರ್ ಕಿರಣ್ ಕೋಡಿಕಲ್, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಅರುಣ್ ಜಿ. ಶೇಟ್, ಸಂಧ್ಯಾ ವೆಂಕಟೇಶ್, ಶಾಹನಾಜ್ , ಮುರಳಿ ಎಚ್.ಎಚ್., ಗುರುಚರಣ್, ಪ್ರದೀಪ್ , ಅವಿನಾಶ್, ಘನಶ್ಯಾಂ ಮತ್ತಿತರರಿದ್ದರು.ಶಾಹನಾಜ್ , ಮುರಳಿ ಎಚ್.ಎಚ್., ಗುರುಚರಣ್, ಪ್ರದೀಪ್ , ಅವಿನಾಶ್, ಘನಶ್ಯಾಂ ಮತ್ತಿತರರಿದ್ದರು.