ಮಂಗಳೂರು: ಇಲ್ಲಿನ ವಳಚ್ಚಿಲ್ನ ಎಕ್ಸ್ಪರ್ಟ್ ಪಿಯು ಕಾಲೇಜು ‘ಸ್ಪೇಡ್ ಇಂಟಿಗ್ರೇಟೆಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ನ ಅಂಗಸಂಸ್ಥೆ ‘ಸ್ಪೈಸಸ್ ಎನ್ ಚೆಫ್ಸ್’ ಸಹಯೋಗದೊಂದಿಗೆ 4ನೇ ವರ್ಷದ ‘ಆಹಾರ ಸುರಕ್ಷತಾ ಸಪ್ತಾಹದ’ ಸಮಾರೋಪ ಸಮಾರಂಭ ನಡೆಯಿತು.
ವಿಶ್ವ ಆಹಾರ ಸುರಕ್ಷತಾ ದಿನದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಯಿತು. ಎಕ್ಸ್ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಮತ್ತು ಉಪಾಧ್ಯಕ್ಷ ಡಾ.ಉಷಾಪ್ರಭಾ ಎನ್.ನಾಯಕ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.ಎಕ್ಸ್ಪರ್ಟ್ ಸಮೂಹ ಸಂಸ್ಥೆಗಳ ಐಟಿ ನಿರ್ದೇಶಕ ಅಂಕುಶ್ ಎನ್.ನಾಯಕ್ ಮಾತನಾಡಿ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆಹಾರ ಸುರಕ್ಷತಾ ಕ್ರಮ ಅತ್ಯಗತ್ಯ. ಇಂತಹ ಮಹತ್ವದ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.ಸ್ಪೇಡ್ ಇಂಟಿಗ್ರೇಟೆಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಪಳ್ಳಿಯಿಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಹಾರ ಸುರಕ್ಷತಾ ಜಾಗೃತಿ ಮೊದಲಿಗೆ ಮನೆಯಿಂದಲೇ ಆರಂಭವಾಗಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಕ್ಯಾಲಿಗ್ರಫಿ (ಸುಂದರ ಕೈಬರಹ), ಪೋಸ್ಟರ್ ಮೇಕಿಂಗ್, ಆಶುಭಾಷಣ, ಆಹಾರ ಸುರಕ್ಷತಾ ರಸಪ್ರಶ್ನೆ, ಜಂಬಲ್ಡ್ ವರ್ಡ್ಸ್ (ಅಕ್ಷರ ಜೋಡಣೆ) ಮತ್ತು ರೀಲ್ಸ್ ಮೇಕಿಂಗ್ ಸೇರಿದಂತೆ ಹಲವು ಆಕರ್ಷಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ದೇರಳಕಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಮುಖ್ಯ ಪೌಷ್ಟಿಕತಜ್ಞೆ ಡಾ.ಪ್ರೇರಣಾ ಹೆಗ್ಡೆ, ಮಂಗಳೂರು ಸೈಂಟ್ ಅಲೋಶಿಯಸ್ ಸ್ವಾಯತ್ತ ವಿಶ್ವವಿದ್ಯಾಲಯದ ಪೌಷ್ಟಿಕತಜ್ಞೆ ಹಾಗೂ ಸಂಶೋಧನಾ ವಿದ್ಯಾರ್ಥಿನಿ ಲೋಶನ್ಯಾ, ವಲಚ್ಚಿಲ್ ಎಕ್ಸ್ಪರ್ಟ್ ಪಿಯು ಕಾಲೇಜಿನ ಕ್ಯಾಂಪಸ್ ವೈದ್ಯ ಡಾ.ಅಹಾದ್ ಆಹಾರದ ಪೌಷ್ಟಿಕಾಂಶ, ಆರೋಗ್ಯಕರ ಆಹಾರ ಪದ್ಧತಿಗಳು, ವೈಯಕ್ತಿಕ ಆರೋಗ್ಯ ಮತ್ತು ಆಹಾರ ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯದ ‘ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್’ನ ಕೇಂದ್ರ ಅಡುಗೆ ಮನೆಗೆ ಮತ್ತು ಜೆಪ್ಪು ‘ಭಗಿನಿ ಸಮಾಜ ಶಿಶು ನಿಲಯ’ಕ್ಕೆ ಭೇಟಿ ನೀಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಗುಣಮಟ್ಟ ವ್ಯವಸ್ಥಾಪಕಿ ಎಂ.ಸಿ.ಸೌಪರ್ಣಿಕಾ ಸಂಯೋಜಿಸಿದರು. ಯುನಿಟ್ ಹೆಡ್ ರಾಜೇಶ್ ಇ.ಟಿ. ಕಾರ್ಯತಂತ್ರದ ಮಾರ್ಗದರ್ಶನ ನೀಡಿದರು.