ಕನ್ನಡಪ್ರಭ ವಾರ್ತೆ ಮೈಸೂರು

ಈ ಬಾರಿಯ ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಗರದ ಹಾರ್ಡಿಂಜ್ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದರು.ಈ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ಕಂಬಳಕ್ಕೆ ತನ್ನದೇ ಆದ ವಿಶಿಷ್ಟ ಮತ್ತು ಐತಿಹಾಸಿಕ ಮಹತ್ವವಿದೆ. ಅದು ದಕ್ಷಿಣ ಕನ್ನಡದ ಪ್ರಮುಖ ಆಚರಣೆಯಾಗಿದ್ದು, ಅದನ್ನು ಮೈಸೂರು ದಸರಾದಲ್ಲಿ ಆಯೋಜಿಸುವುದು ತಪ್ಪು ಎಂದು ಖಂಡಿಸಿದರು.ಮೈಸೂರು ದಸರಾಗೂ ತನ್ನದೇ ಆದ ಭವ್ಯ ಇತಿಹಾಸವಿದೆ. ದಸರಾ ಕೇವಲ ಅದರ ಸಾಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಬೇಕು. ಜೊತೆಗೆ ಯುವ ದಸರಾ ಹೆಸರಿನಲ್ಲಿ ಪರಭಾಷೆಯ ಹಾಡುಗಾರರನ್ನು ಕರೆಸಿ ಪ್ರದರ್ಶನ ನೀಡುತ್ತಿರುವುದೂ ಸರಿಯಲ್ಲ. ದಸರಾ ಸಂಪ್ರದಾಯ, ಪರಂಪರೆ ಉಳಿಸಬೇಕು ಎಂದು ಅವರು ಒತ್ತಾಯಿಸಿದರು.ನಗರದಲ್ಲಿ ಫುಟ್‌ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿ, ಬಡ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶ್ರೀಮಂತರ ಪರವಾಗಿದ್ದಾರೆ. ಅವರಿಗೆ ಬಡವರ ಕಷ್ಟ ಗೊತ್ತಿಲ್ಲ. ಬಡವರ ಹೊಟ್ಟೆ ಮೇಲೆ ಹೊಡೆಯುವ ಮುನ್ನ ಬೆಂಗಳೂರಿನ ಸದಾಶಿವನಗರದಲ್ಲಿ ರಾಜಕಾರಣಿಗಳು ಮಾಡಿಕೊಂಡಿರುವ ರಾಜಾರೋಷ ಒತ್ತುವರಿಗಳನ್ನು ಮೊದಲು ತೆರವುಗೊಳಿಸಲಿ. ಕೂಡಲೇ ಫುಟ್‌ ಪಾತ್ ವ್ಯಾಪಾರಿಗಳಿಗೆ ಪರ್ಯಾಯ ಜಾಗ ನೀಡಲಿ ಎಂದು ಅವರು ಆಗ್ರಹಿಸಿದರು.