- ಸಾಂಖ್ಯಿಕ ಉಪ ಮಹಾನಿರ್ದೇಶಕ ಅಲ್ತಾಫ್ ಹುಸೇನ್ ಹಾಜಿ ವಿಶ್ವಾಸ । ಯೋಜನೆಗೆ ಅಧಿಕೃತ ಚಾಲನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯ ಸರ್ಕಾರವು ಈಗಾಗಲೇ ವಿಬಿ ಜಿ ರಾಮ್ ಜಿ ಯೋಜನೆಯ ಅನುಷ್ಠಾನಕ್ಕಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಯು ನಮ್ಮ ಗ್ರಾಮೀಣ ಭಾಗದ ವಿಕಾಸದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಾಂಖ್ಯಿಕ ಉಪ ಮಹಾನಿರ್ದೇಶಕ ಅಲ್ತಾಫ್ ಹುಸೇನ್ ಹಾಜಿ ತಿಳಿಸಿದರು.ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆ ವತಿಯಿಂದ ವಿಬಿ ಜಿ ರಾಮ್ ಜಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ್ದು, ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸದ್ಯ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ತೃಪ್ತಿ ಇದೆ. ಇಂದು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಅತ್ಯುತ್ತಮ ಕೆಲಸಗಳು ನಡೆಯುತ್ತಿರುವುದನ್ನು ನಾವು ಕಾಣಬಹುದು. ಜನಸಾಮಾನ್ಯರು ಇದರಿಂದ ಹರ್ಷಗೊಂಡಿದ್ದಾರೆ ಹಾಗೂ ತಮ್ಮ ಗ್ರಾಮಗಳ ಪ್ರಗತಿಯನ್ನು ಕಂಡು ಹೆಮ್ಮೆಪಡುತ್ತಿದ್ದಾರೆ. ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳ ಈ ಸಮರ್ಪಣಾ ಮನೋಭಾವ ಶ್ಲಾಘನೀಯ. ಈ ನಿರಂತರ ಪ್ರಗತಿಯು ಮುಂದಿನ ದಿನಗಳಲ್ಲೂ ಹೀಗೆಯೇ ಮುಂದುವರಿಯಬೇಕು ಎಂದು ತಿಳಿಸಿದರು.
ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಕ್ರಿಯ ಕಾರ್ಮಿಕರ ಮತ್ತು ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಇದಕ್ಕಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಬಾಕಿ ಇರುವ ಎಲ್ಲ ಇ-ಕೆವೈಸಿಗಳನ್ನು ಶೀಘ್ರವಾಗಿ ನವೀಕರಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಯಾವುದೇ ಒಂದು ಪಂಚಾಯಿತಿಯಲ್ಲಿ ಶೇ.50ರಷ್ಟು ಪ್ರಗತಿಯಾಗಿದ್ದರೆ, ಅದನ್ನು ಮುಂದಿನ ಹಂತದಲ್ಲಿ ಶೇ.60ಕ್ಕೆ ಹಾಗೂ ತದನಂತರ ಶೇ.70ಕ್ಕೆ ಏರಿಸುವ ಗುರಿ ಹೊಂದಬೇಕು. ನಿಮ್ಮ ಕೆಲಸದ ಉತ್ಸಾಹ ಹೀಗೆಯೇ ಇರಲಿ. ನಿಯಮಾನುಸಾರ ನೀವು ಕೈಗೊಳ್ಳುವ ಯಾವುದೇ ಜನಪರ ಕೆಲಸಗಳಿಗೆ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ಇರಲಿದೆ ಎಂದು ಭರವಸೆ ನೀಡಿದರು.
ಯಾವುದೇ ಸಾಧನೆ ಒಬ್ಬರಿಂದ ಸಾಧ್ಯವಿಲ್ಲ. ನಾವೆಲ್ಲರೂ ಒಂದು ತಂಡವಾಗಿ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಇಂತಹ ಸಕಾರಾತ್ಮಕ ಬದಲಾವಣೆ ಮತ್ತು ಗ್ರಾಮೀಣಾಭಿವೃದ್ಧಿ ಸಾಧ್ಯವಾಗುತ್ತದೆ. ವಿಬಿ ಜಿ ರಾಮ್ ಜಿ ಅಡಿ ಯಾವುದಾದರೂ ಯೋಜನೆಗಳ ಬಗ್ಗೆ ತಿದ್ದುಪಡಿಗಳಿದ್ದರೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದರು.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಮನರೇಗಾದಲ್ಲಿ ಸಾಧಿಸಿರುವ ಪ್ರಗತಿ ಮತ್ತು ವಿಬಿ ಜಿರಾಮ್ ಜಿ ಅಡಿ ರೂಪಿಸಿರುವ ಹೊಸ ಯೋಜನೆಗಳ ಬಗ್ಗೆ ವಿವರಿಸಿ, ಕಾಮಗಾರಿ ಕಾರ್ಯದೇಶವನ್ನು ನೀಡಿದರು.
ಹೊನ್ನಾಳಿ ತಾಲೂಕಿನ ಬೇಲಿ ಹೊನ್ನೂರು ಗ್ರಾಮಕ್ಕೆ ಭೇಟಿ ನೀಡಿ ಜಿಲ್ಲಾ ಪಂಚಾಯತ್ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿ ರೈತರೊಂದಿಗೆ ಸಂವಾದ ನಡೆಸಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಅನಿಲ್ ಕುಮಾರ್ ಕೆ.ಸಿ., ಸಹಾಯಕ ನಿರ್ದೇಶಕ ಬಲದೇವ್ ಕುಮಾರ್ ವರ್ಮಾ, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಮಮತ ಹೊಸ ಗೌಡರ್, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಸಿಪಿಒ ಮಲ್ಲಾ ನಾಯಕ್, ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.- - -
-7ಕೆಡಿವಿಜಿ37: ದಾವಣಗೆರೆಯಲ್ಲಿ ಮಂಗಳವಾರ ವಿಬಿ ಜಿ ರಾಮ್ ಜಿ ಯೋಜನೆಗೆ ಅಲ್ತಾಫ್ ಹುಸೇನ್ ಹಾಜಿ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದರು.