- ನಾಳೆ ಕಾಲೇಜಿನ ನಿವೃತ್ತ ಪ್ರಾಚಾರ್ಯರು, ಪ್ರಾಧ್ಯಾಪಕರ ಸ್ಮರಣೆ, ಗೌರವ ಸಮರ್ಪಣೆ: ಡಾ.ಎಸ್.ವಿದ್ಯಾಶಂಕರ - - -

ದಾವಣಗೆರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ವ್ಯಾಪ್ತಿಯ ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ 29 ಮತ್ತು 30ರಂದು ಎರಡು ದಿನಗಳ ಕಾಲ ಕಾಲೇಜಿನ ಆವರಣದಲ್ಲಿ ಅಮೃತ ಮಹೋತ್ಸವವವನ್ನು ಹಮ್ಮಿಕೊಂಡಿದ್ದು, ಉಪ ರಾಷ್ಟ್ರಪತಿ ರಾಧಾಕೃಷ್ಣನ್‌, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಟಿಯು ಕುಲಪತಿ ಡಾ. ಎಸ್.ವಿದ್ಯಾಶಂಕರ್ ತಿಳಿಸಿದರು.

ನಗರದ ಯುಬಿಡಿಟಿ ಕಾಲೇಜಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಳೂವರೆ ದಶಕಗಳ ಸುದೀರ್ಘ ಇತಿಹಾಸ ಹೊಂದಿರುವ ಯುಬಿಡಿಟಿ ಕಾಲೇಜಿನಲ್ಲಿ ಓದಿದ ಹಳೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇಂದು ದೇಶ, ವಿದೇಶಗಳಲ್ಲಿ ಸಾಧನೆ ಮಾಡುತ್ತಿದ್ದು, ಉನ್ನತ ಹುದ್ದೆಗಳನ್ನೂ ಅಲಂಕರಿಸಿದ್ದಾರೆ. ಇಂತಹ ಪ್ರತಿಷ್ಟಿತ ಕಾಲೇಜಿನ ಅಮೃತ ಮಹೋತ್ಸವ ಐತಿಹಾಸಿಕ ಕಾರ್ಯಕ್ರಮವಾಗಿರಲಿದೆ ಎಂದರು.

ಮೇ 29ರ ಬೆಳಗ್ಗೆ 11 ಗಂಟೆಗೆ ಉಪ ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಭಾಗವಹಿಸುವರು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಯುಬಿಡಿಟಿ ಕಾಲೇಜಿನ ಹಳೇ ವಿದ್ಯಾರ್ಥಿಗಳು, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿ) ಮಾಜಿ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಂ ಇತರರು ಭಾಗವಹಿಸುವರು ಎಂದು ಹೇಳಿದರು.

30ರಂದು ಸಂಜೆ 5.30ಕ್ಕೆ ಸಮಾರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ, ಯುಬಿಡಿಟಿ ಹಳೇ ವಿದ್ಯಾರ್ಥಿ, ಚಳ್ಳಕೆರೆ ಶಾಸಕ ಟಿ.ರಾಮಮೂರ್ತಿ, ಮಾಜಿ ಸಂಸದ ಜನಾರ್ದನ ಸ್ವಾಮಿ ಭಾಗವಹಿಸುವರು. ಸಮಾರಂಭದ ಉದ್ಘಾಟನೆ ನಂತರ ಉದ್ಯಮಶೀಲತೆ ಹಾಗೂ ತಂತ್ರಜ್ಞಾನ ನವೀನತಾ ಪ್ರದರ್ಶನ, ಕಾಲೇಜಿನ ದಾನಿಗಳ ಪ್ರತಿಮೆಗಳ ಅನಾವರಣ ನಡೆಯಲಿದೆ. ಹಿಂದಿನ ಕುಲಪತಿಗಳು, ಕಾಲೇಜಿನ ನಿವೃತ್ತಿ ಹೊಂದಿದ ಪ್ರಾಚಾರ್ಯರು ಹಾಗೂ ಅಧ್ಯಾಪಕರ ಸ್ಮರಣೆ, ಗೌರವ, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.


ಸಮಾರೋಪದಲ್ಲಿ ಹಳೇ ವಿದ್ಯಾರ್ಥಿಗಳು ತಮ್ಮ ವಿಭಾಗಗಳ ಅಧ್ಯಾಪಕರ ಹಾಗೂ ಇಂದಿನ ವಿದ್ಯಾರ್ಥಿಗಳ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಹಳೆ ವಿದ್ಯಾರ್ಥಿ ಸಂಘದ ಸದಸ್ಯರಿಂದ ಅತಿಥಿ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆ ನೆರವೇರಲಿದೆ. ಕಾಲೇಜು ಸುದೀರ್ಘ 75 ವರ್ಷದಲ್ಲಿ ನಡೆದ ಬಂದ ದಾರಿ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಡಾ.ವಿದ್ಯಾಶಂಕರ ಮಾಹಿತಿ ನೀಡಿದರು.

ವಿಟಿಯು ಕುಲ ಸಚಿವ ಡಾ.ಪ್ರಸಾದ್ ಬಿ.ರಾಂಪುರೆ, ಕುಲ ಸಚಿವ(ಮೌಲ್ಯಮಾಪನ) ಯುಬಿಡಿಟಿ ಕಾಲೇಜಿನ ಪ್ರಾಂಚಾರ್ಯ ಡಾ.ಡಿ.ಪಿ.ನಾಗರಾಜಪ್ಪ, ಅಮೃತ ಮಹೊತ್ಸವದ ಸಂಚಾಲಕರಾದ ಡಾ.ಎಂ.ಎಚ್.ದಿವಾಕರ ಇತರರು ಇದ್ದರು.

- - -

(ಟಾಪ್‌ ಕೋಟ್‌) ಗೂಗಲ್ ಕಂಪನಿಯು ಶೀಘ್ರದಲ್ಲೇ ವಿಟಿಯು ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಿದೆ. 25 ಸಾವಿರ ವಿದ್ಯಾರ್ಥಿಗಳಿಗೆ ಇಂಟರ್‌ಶಿಪ್‌ ಅನ್ನು ಗೂಗಲ್ ಕಂಪನಿಯು ನೀಡಲಿದೆ. ಈ ಸಂಬಂಧ ಗೂಗಲ್‌ ಕಂಪನಿಯ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕುತ್ತೇವೆ. ಮುಂಬರುವ ದಿನಗಳಲ್ಲಿ ದಾವಣಗೆರೆಯ ಯುಬಿಡಿಟಿ ಕಾಲೇಜಿನ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಉನ್ನತ ದರ್ಜೆಗೆ ತರಲಾಗುವುದು. - ಡಾ.ಎಸ್.ವಿದ್ಯಾಶಂಕರ, ಕುಲಪತಿ, ವಿಟಿಯು ಬೆಳಗಾವಿ.

- - -

-28ಕೆಡಿವಿಜಿ5, 6: ದಾವಣಗೆರೆಯಲ್ಲಿ ಗುರುವಾರ ವಿಟಿಯು ಕುಲಪತಿ ಡಾ. ಎಸ್.ವಿದ್ಯಾಶಂಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.