ಕೋಟ: ಕೋಟ ವಿದ್ಯಾಸಂಘದ ಆಡಳಿತಕ್ಕೊಳಪಟ್ಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದ ವೆಂಕಟೇಶ ಉಡುಪ ಅವರಿಗೆ ಸಂಸ್ಥೆಯ ಮಹಾತ್ಮ ಗಾಂಧಿ ಸ್ಮಾರಕ ಮಂದಿರದಲ್ಲಿ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ತಮ್ಮ ಅಧ್ಯಾಪನದ ಅವಧಿಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ನಿವೃತ್ತ ಮುಖ್ಯಶಿಕ್ಷಕ ವೆಂಕಟೇಶ ಉಡುಪ, ವಿವೇಕವೆಂದರೆ ಬರಿಯ ಶಾಲೆಯಲ್ಲ, ಅದು ನನ್ನ ಪಾಲಿಗೆ ಬಂಧನ ರಹಿತ ಸ್ವರ್ಗವಾಗಿತ್ತು ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟ ವಿದ್ಯಾಸಂಘದ ಅಧ್ಯಕ್ಷ ಪಿ. ಭಾಸ್ಕರ ಹಂದೆ, ಉಡುಪರ ಶ್ರೇಷ್ಠ ಸೇವೆಯನ್ನು ಸ್ಮರಿಸಿ, ಮುಂದಿನ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಕೋಟ ವಿದ್ಯಾಸಂಘ ಕಾರ್ಯದರ್ಶಿ ಎಂ. ರಾಮದೇವ ಐತಾಳರು, ಶ್ರೇಷ್ಠ ಶಿಕ್ಷಕರಾಗಿ ಸಮರ್ಪಣಾ ಮನೋಭಾವದಿಂದ ಮಾಡಿರುವ ಅಧ್ಯಾಪನೆ ವಿವೇಕ ಸಂಸ್ಥೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕೊಂಡಾಡಿದರು.ಸಂಸ್ಥೆ ಜೊತೆ ಕಾರ್ಯದರ್ಶಿ ಮಂಜುನಾಥ ಉಪಾಧ್ಯ, ಎಲ್ಲರ ಪ್ರೀತಿಗೆ ಪಾತ್ರರಾದ ಉಡುಪರ ಸೇವೆಯನ್ನು ಕೊಂಡಾಡಿದರು. ಇದೇ ವೇಳೆ, ಬಾಲಕಿಯರ ಪ್ರೌಢಶಾಲೆಯ ಮುಂದಿನ ಮುಖ್ಯಶಿಕ್ಷಕರಾಗಿ ಅಧಿಕಾರ ಸ್ವೀಕರಿಸಲಿರುವ ಪ್ರೇಮಾನಂದ ಹಾಗೂ ವಿವೇಕ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿರಿಯ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಲಿರುವ ರತಿ ಅವರಿಗೆ ಶುಭ ಕೋರಿದರು. ಸಮಾರಂಭದಲ್ಲಿ ಹಿರಿಯ ಸಹಶಿಕ್ಷಕ ಪ್ರೇಮಾನಂದ ಹಾಗೂ ಅಧ್ಯಾಪಕರಾದ ನರೇಂದ್ರ ಕುಮಾರ್ ಅವರು ವೆಂಕಟೇಶ ಉಡುಪರ ಕುರಿತು ಮಾತನಾಡಿ, ಅವರ ಶೈಕ್ಷಣಿಕ ಕೊಡುಗೆ ಸ್ಮರಿಸಿದರು.ವೇದಿಕೆಯಲ್ಲಿ ವಿದ್ಯಾಸಂಘದ ಆಡಳಿತ ಮಂಡಳಿ ಸದಸ್ಯ ಶ್ರೀಪತಿ ಹೇರ್ಳೆ, ವಸಂತ ಶೆಟ್ಟಿ, ಲಕ್ಷ್ಮೀನಾರಾಯಣ ಕಾರಂತ ಉಪಸ್ಥಿತರಿದ್ದರು. ಪಿಯು ಕಾಲೇಜು ಪ್ರಾಂಶುಪಾಲ ಕೆ. ಜಗದೀಶ ನಾವಡರು ಸ್ವಾಗತಿಸಿದರು, ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿ, ಆಂಗ್ಲಮಾಧ್ಯಮ ಮುಖ್ಯ ಶಿಕ್ಷಕಿ ಪ್ರೀತಿರೇಖ ವಂದಿಸಿದರು.