ಗುಡಿಬಂಡೆ: ಚಿಕ್ಕಬಳ್ಳಾಪುರದಲ್ಲಿ ಇತ್ತೀಚಿಗೆ ಕೆಂಪೇಗೌಡ ಜಯಂತಿ ಆಚರಣೆ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪ್ರಕರಣ ದಾಖಲಿಸಬೇಕು, ಇಲ್ಲವಾದಲ್ಲಿ ಒಕ್ಕಲಿಗ ಸಮುದಾಯದ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥರೆಡ್ಡಿ ತಿಳಿಸಿದರು.

ಈ ಸಂಬಂಧ ಒಕ್ಕಲಿಗರ ಸಂಘದ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 27ರಂದು ನಡೆದ ಜಯಂತಿ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರನ್ನು ಕಾರ್ಯಕ್ರಮಕ್ಕೆ ಹಾಜರಾಗದಂತೆ ಪ್ರದೀಪ್ ಈಶ್ವರ್ ಪೊಲೀಸರಿಗೆ ತಿಳಿಸಿದ್ದು, ಗೇಟ್ ಹಾಕಲಾಗಿತ್ತು. ಬಳಿಕ ಸಂಸದ ಡಾ.ಕೆ.ಸುಧಾಕರ್ ರವರಿಗೆ ದೂರು ನೀಡಲಾಗಿ, ಅವರು ಹೇಳಿದ ಬಳಿಕ ಗೇಟ್ ತೆಗೆದಿದ್ದರು. ಈ ವಿಚಾರವನ್ನು ಕೇಳಲು ಹೋದ ಸಮುದಾಯದ ಯುವಕರ ಮೇಲೆ ದೂರು ದಾಖಲಿಸಿದ್ದಾರೆ. ಶಾಸಕರ ಮೇಲೆ ಚಪ್ಪಲಿ ಎಸೆದಿದ್ದು ತಪ್ಪು, ಆದರೆ ಅವರನ್ನು ಪ್ರಚೋದಿಸುವಂತಹ ಕೆಲಸ ಮಾಡಿದ ಪ್ರದೀಪ್ ಈಶ್ವರ್ ವಿರುದ್ಧ ಮಾತ್ರ ಪ್ರಕರಣ ದಾಖಲಾಗಿಲ್ಲ. ಇದು ಹಿಟ್ಲರ್ ಆಡಳಿತವೇ, ನ್ಯಾಯ ಎಲ್ಲರಿಗೂ ಒಂದೇ ಆಗಬೇಕು. ಪ್ರಚೋದನೆ ನೀಡಿದ ಕಾರಣದಿಂದ ಕೆಲ ಯುವಕರು ಆಕ್ರೋಶ ಹೊರಹಾಕಿ ಇಷ್ಟೆಲ್ಲಾ ಘಟನೆಗಳಿಗೆ ಕಾರಣವಾಯ್ತು. ಎನ್.ಡಿ.ಎ ಯುವಕರನ್ನು ಹೇಗೆ ಬಂಧಿಸಿದ್ದಾರೆಯೋ ಅದೇ ಮಾದರಿಯಲ್ಲಿ ಪ್ರದೀಪ್ ಈಶ್ವರ್ ರನ್ನು ಸಹ ಬಂಧನ ಮಾಡಬೇಕು. ಇಲ್ಲವಾದಲ್ಲಿ ಒಕ್ಕಲಿಗ ಸಂಘದ ವತಿಯಿಂದ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಳಿಕ ಸಮುದಾಯದ ಮುಖಂಡ ಮಧು ಮಾತನಾಡಿ, ಶಾಸಕ ಪ್ರದೀಪ್ ಈಶ್ವರ್ ರವರಿಗೆ ರಾಜಕೀಯ ಜ್ಞಾನದ ಕೊರತೆ ತುಂಬಾ ಹೆಚ್ಚಾಗಿದೆ. ಈ ಹಿಂದೆ ವಾಲ್ಮೀಕಿ, ಅಂಬೇಡ್ಕರ್, ಕೈವಾರ ತಾತಯ್ಯ ಸೇರಿದಂತೆ ಹಲವು ಜಯಂತಿಗಳಿಗೆ ಇದೇ ಶಾಸಕ ಪ್ರದೀಪ್ ಹಾಜರಾಗಿಲ್ಲ. ಅದಕ್ಕೂ ಮಿಗಿಲಾಗಿ ನಮ್ಮ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ಯ ದಿನಾಚರಣೆಗೂ ಹಾಜರಾಗಿಲ್ಲ. ಆದರೆ ಕೆಂಪೇಗೌಡ ಜಯಂತಿಯಂದು ಗಲಾಟೆ ಸೃಷ್ಟಿಸಿ, ಹೈಕಮಾಂಡ್ ಗಮನ ಸೆಳೆಯುವ ಉದ್ದೇಶದಿಂದಲೇ ಇದೆಲ್ಲಾ ಮಾಡಿದ್ದಾರೆ. ಇದೊಂದು ಪೂರ್ವ ನಿಯೋಜಿತ ಪ್ಲಾನ್ ಎಂದೇ ಹೇಳಬಹುದಾಗಿದೆ. ಅದರಲ್ಲೂ ಶಾಸಕರ ಮೇಲೆ ಚಪ್ಪಲಿ ಎಸೆದಿದ್ದು, ಅವರ ಕಾರ್ಯಕರ್ತನೇ ಎಂದೂ ಸಹ ಹೇಳಲಾಗುತ್ತಿದೆ. ತಾನು ಸಾಚ ಎಂದು ಹೇಳಿಕೊಳ್ಳುವ ಪ್ರದೀಪ್ ಈಶ್ವರ್ ಸಿ.ಎ ಸೈಟ್ ಗಳನ್ನು ಹೇಗೆ ಪಡೆದುಕೊಂಡ, ತನ್ನ ಟ್ರೈನಿಂಗ್ ಸೆಂಟರ್ ಗಳ ಮೂಲಕ ಅಷ್ಟೊಂದು ಹಣ ಏಕೆ ಪಡೆದುಕೊಳ್ಳುತ್ತಿದ್ದಾನೆ ಎಂಬುದನ್ನು ಬಹಿರಂಗಪಡಿಸಲಿ ಎಂದರು.

ಈ ಸಮಯದಲ್ಲಿ ಒಕ್ಕಲಿಗರ ಸಂಘದ ವೇಣುಗೋಪಾಲ್, ಹೆಚ್,ಎನ್. ಮಂಜುನಾಥರೆಡ್ಡಿ, ಮುರಳಿ, ಮಾಚಹಳ್ಳಿ ಶಿವಣ್ಣ ಸೇರಿ ಹಲವರು ಹಾಜರಿದ್ದರು.

01ಜಿಯುಡಿ2: ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ಮುಖಂಡರು ಮಾತನಾಡಿದರು.