ನೇಕಾರ ಸಮಾಜಕ್ಕೆ ದಿವಂಗತ ಶಾಮನೂರು ಶಿವಶಂಕರಪ್ಪ ಸದಾ ಸ್ಪಂದಿಸಿ, ಪ್ರೋತ್ಸಾಹಿಸುತ್ತಿದ್ದರು. ಶಿವಶಂಕರಪ್ಪ ಅವರಿಗೆ ಸಮಾಜ ಸದಾ ಋಣಿಯಾಗಿರುತ್ತದೆ ಎಂದು ಭಜರಂಗ ದಳದ ಹಿರಿಯ ಮುಖಂಡ ಕೆ.ಹನುಮಂತಪ್ಪ ಎಸ್‌ಒಜಿ ಹೇಳಿದ್ದಾರೆ.

- ಜಿಲ್ಲಾ ನೇಕಾರ ಒಕ್ಕೂಟ ಮಹಿಳಾ ವಿಭಾಗದಿಂದ ಗೀತಾ ಜಯಂತಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನೇಕಾರ ಸಮಾಜಕ್ಕೆ ದಿವಂಗತ ಶಾಮನೂರು ಶಿವಶಂಕರಪ್ಪ ಸದಾ ಸ್ಪಂದಿಸಿ, ಪ್ರೋತ್ಸಾಹಿಸುತ್ತಿದ್ದರು. ಶಿವಶಂಕರಪ್ಪ ಅವರಿಗೆ ಸಮಾಜ ಸದಾ ಋಣಿಯಾಗಿರುತ್ತದೆ ಎಂದು ಭಜರಂಗ ದಳದ ಹಿರಿಯ ಮುಖಂಡ ಕೆ.ಹನುಮಂತಪ್ಪ ಎಸ್‌ಒಜಿ ಹೇಳಿದರು.

ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಮಹಿಳಾ ವಿಭಾಗದಿಂದ ಹಮ್ಮಿಕೊಂಡಿದ್ದ ಗೀತಾ ಜಯಂತಿ ಮತ್ತು ಭಗವದ್ಗೀತೆಯ 12ನೇ ಅಧ್ಯಾಯದ ಶತಕಂಠದಲ್ಲಿ ಸಾಮೂಹಿಕ ಗೀತ ಸಮರ್ಪಣೆ, ಜಿಲ್ಲಾ ಮತ್ತು ತಾಲೂಕು ಮಟ್ಟದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜವಳಿ ಮಿಲ್‌ಗಳಿಂದ ಹೆಸರಾಗಿದ್ದ ದಾವಣಗೆರೆಯಲ್ಲಿ ಒಂದೊಂದಾಗಿ ಮಿಲ್‌ಗಳು ಮುಚ್ಚಿದಾಗ ಶಿಕ್ಷಣ ಕ್ಷೇತ್ರದಲ್ಲಿ ಈ ಊರು ಬೆಳೆಯುವಂತೆ ನೋಡಿಕೊಂಡವರು ಶಾಮನೂರು ಶಿವಶಂಕರಪ್ಪ. ದಾನಿಯಾಗಿ, ವರ್ತಕ, ಶಾಸಕ, ಸಂಸದ, ಸಚಿವರಾಗಿ, ದೊಡ್ಡ ಸಮಾಜವೊಂದರ ಹಿರಿಯ ನಾಯಕನಾಗಿದ್ದರು. ಇಷ್ಟಾದರೂ ಸಣ್ಣ ಸಣ್ಣ ಸಮುದಾಯಗಳಿಗೂ ಸ್ಪಂದಿಸುವಂತಹ ದೊಡ್ಡ ಗುಣವು ಶಿವಶಂಕರಪ್ಪನವರಲ್ಲಿ ಇತ್ತು ಎಂದು ಸ್ಮರಿಸಿದರು.

ಸಮಾಜದ ಮುಖಂಡ ಬೆನಕಲ್ಲಪ್ಪ ಬುಗಡೆ ಮಾತನಾಡಿ, ಮುಂದಿನ ದಿನಗಳಲ್ಲಿ ನೇಕಾರ ಸಮುದಾಯದ ಮಹಿಳಾ ಒಕ್ಕೂಟವನ್ನು ಇನ್ನಷ್ಟು ಬಲಪಡಿಸಲಾಗುವುದು. ಅದಕ್ಕಾಗಿ ನಾವು ಮಹಿಳಾ ಒಕ್ಕೂಟಕ್ಕಾಗಿ ಕೋಆಪರೇಟಿವ್‌ ಸೊಸೈಟಿ ಅಥವಾ ಮಹಿಳಾ ಬ್ಯಾಂಕ್‌ ಮಾಡಿಕೊಡುತ್ತೇವೆ. ನಮ್ಮ ಸಮುದಾಯವೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಖ್ಯ ವಾಹಿನಿಗೆ ಬರಲು ಮಹಿಳೆಯರು ಸಹ ಸಂಘಟನೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷೆ ಸಾಕಮ್ಮ ಮಾತನಾಡಿ, ಮುಂಬರುವ ದೇವರ ದಾಸಿಮಯ್ಯ ಜಯಂತಿಯನ್ನು ದಾವಣಗೆರೆಯಲ್ಲಿ ಇಡೀ ರಾಜ್ಯದಲ್ಲೇ ಅದ್ಧೂರಿ, ಮಾದರಿಯಾಗಿ ಇರುವಂತೆ ಆಚರಣೆ ಮಾಡುತ್ತೇವೆ. ನಮ್ಮ ಸಮುದಾಯದ ಮಹಿಳಾ ಘಟಕವನ್ನು ಬೇರುಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಜಿಲ್ಲಾ ಘಟಕವು ಈಗಿನಿಂದಲೇ ಸಮಾರಂಭಕ್ಕೆ ಸನ್ನದ್ಧವಾಗುತ್ತದೆ ಎಂದು ಘೋಷಿಸಿದರು.

ಸಮಾಜದ ಜಿಲ್ಲಾಧ್ಯಕ್ಷ ಶ್ರೀಕಾಂತ ಕಾಕಿ ಮಾತನಾಡಿ, ದಾವಣಗೆರೆಯಲ್ಲಿ ಕೈಗಾರಿಕಾ ನಿವೇಶನ, ವಸತಿ ನಿವೇಶನಗಳ ಬಗ್ಗೆ ಈವರೆಗೆ ಆಗಿರುವ ಪ್ರಗತಿಯ ಕುರಿತಂತೆ ಸಮಾರಂಭದಲ್ಲಿ ವಿವರಿಸಿದರು. ಸ್ವಕುಳಸಾಳಿ ಸಮಾಜದ ಕ್ಷೀರಸಾಗರ ಹನುಮಂತಪ್ಪ, ಒಕ್ಕೂಟದ ರಾಜ್ಯ ಪ್ರತಿನಿಧಿಗಳಾದ ಜ್ಯೋತಿ ಕೃಷ್ಣ ಸಾರೋದೆ, ಉಮಾದೇವಿ, ಜಿಲ್ಲಾ ಘಟಕದ ಅಕ್ಕಮ್ಮ, ತೊಗಟವೀರ ಸಮಾಜದ ರವಿಕುಮಾರ, ಉಮಾದೇವಿ, ಜ್ಯೋತಿ, ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ, ಅಮಿತಾ ಶ್ರೀನಿವಾಸ, ರೇಖಾ ಶಾವಿ, ಸಂಧ್ಯಾ, ರಾಘಾ ರಘುರಾಮ್‌ ಇತರರು ಇದ್ದರು.

ಚೌಡೇಶ್ವರಿ ಭಜನಾ ಮಂಡಳಿ ತೊಗಟವೀರ ಸಮಾಜದಿಂದ ಭಜನೆ ನಡೆಯಿತು. ಶತಕಂಠ ಗೀತಾ ಪಾರಾಯಣ ಶಕುಂತಲಾ ರಮೇಶ್ ಮತ್ತು ಸಂಗಡಿಗರು ನಡೆಸಿಕೊಟ್ಟರು. ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ, ಜಗಳೂರು ತಾಲೂಕುಗಳ ಮಹಿಳಾ ಒಕ್ಕೂಟ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.

- - -

-18ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಮಹಿಳಾ ವಿಭಾಗದಿಂದ ಗೀತಾ ಜಯಂತಿ ಮತ್ತು ಭಗವದ್ಗೀತೆ 12ನೇ ಅಧ್ಯಾಯದ ಶತಕಂಠದಲ್ಲಿ ಸಾಮೂಹಿಕ ಗೀತ ಸಮರ್ಪಣೆ, ಜಿಲ್ಲಾ ಮತ್ತು ತಾಲೂಕುಮಟ್ಟದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣಾ ಸಮಾರಂಭದ ನಡೆಯಿತು.