ಕನ್ನಡಪ್ರಭ ವಾರ್ತೆ, ತುಮಕೂರು

ಹೆಬ್ಬೂರಿನ ದಾಸರಹಳ್ಳಿಯಲ್ಲಿ ಹೃದಯಾಘಾತದಿಂದ ಪತಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಸತ್ಯ ಬಯಲಾಗಿದೆ. ಜನವರಿ 31 ರಂದು ಪತಿ ಪರಮೇಶ್ (50) ಸಾವನ್ನಪ್ಪಿದ್ದರು. ಆದರೇ ಆತ ಮೃತಪಟ್ಟ ಕೆಲವೇ ದಿನಗಳಲ್ಲಿ ಪರಮೇಶ್ ಪತ್ನಿ ಆಶಾ ಬೇರೊಂದು ಮದುವೆಯಾಗಿದ್ದಳು. ಆಶಾ ನಡೆಗೆ ಹಲವು ಅನುಮಾನ ಹುಟ್ಟುಹಾಕಿತ್ತು. ಮೃತನ ಸಹೋದರಿ ನನ್ನ ತಮ್ಮ ಹೃದಯಾಘಾತದಿಂದ ಸಾವನ್ನಪ್ಪಿಲ್ಲ ಕೊಲೆ ಆಗಿದೆ ಎಂದು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು. ದೂರು ಆಧರಿಸಿ 23 ದಿವಸದ ಬಳಿಕ ಹೂತ್ತಿಟ್ಟಿದ್ದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು ಪರಮೇಶ್ ಸತ್ತಿದ್ದು ಹೃದಯಾಘಾತದಿಂದಲ್ಲ, ಕೊಲೆ ಎಂಬ ಸತ್ಯ ಬಯಲಾಗಿದೆ. ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಆಶಾ ಒಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧ ಮೃತನ ಪತ್ನಿ ಆಶಾ ಹಾಗೂ ಆಕೆಯ ಪ್ರಿಯಕರನನ್ನು ಹೆಬ್ಬೂರು ಪೊಲೀಸರು ಬಂಧಿಸಿದ್ದಾರೆ.

ಆಶಾಗಿದು ಮೂರನೇ ಮದುವೆ

ಕೊಲೆಯಾ ಪರಮೇಶ್ ಪತ್ನಿ ಆಶಾ ಮೂಲತಃ ರಾಮನಗರ ಜಿಲ್ಲೆಯ ಮಾಗಡಿಯವರು. ತನಿಖೆ ವೇಳೆ ಈಕೆ ಮೂರು ಮದುವೆಯಾಗಿರುವ ಬಗ್ಗೆ ಸುದ್ದಿ ಬಂದಿದೆ. 10 ವರ್ಷಗಳ ಹಿಂದೆ ಬೆಂಗಳೂರು ಮೂಲದ ವ್ಯಕ್ತಿಯ ಜೊತೆ ಮದುವೆಯಾಗಿದ್ದ ಆಶಾ. ಹೊಂದಾಣಿಕೆಯಾಗದ ಕಾರಣ ಮದುವೆಯಾಗಿ ಕೇವಲ ಒಂದೇ ತಿಂಗಳಿಗೆ ಮೊದಲ ಗಂಡನಿಗೆ ಡೈವೋರ್ಸ್‌ ಕೊಟ್ಟಿದ್ದರು ಎನ್ನಲಾಗಿದೆ. ಬಳಿಕ 2016 ರಲ್ಲಿ ತುಮಕೂರು ತಾಲೂಕಿನ ದಾಸರಹಳ್ಳಿ ಗ್ರಾಮದ ಪರಮೇಶ್ ಜೊತೆ ಎರಡನೇ ಮದುವೆಯಾಗಿದ್ದರು. ಪರಮೇಶ್ ಗೆ ಇಬ್ಬರೂ ಗಂಡು ಮಕ್ಕಳು‌ ಕೂಡ ಇದ್ದಾರೆ. 10 ವರ್ಷಗಳ ಕಾಲ ಪರಮೇಶ್ ಜೊತೆ ಜೀವನ ನಡೆಸಿದ್ದರು. ಕಳೆದ ಜನವರಿ 31 ನೇ ತಾರೀಖು ಪರಮೇಶ್ ಮೃತಪಟ್ಟ ಹಿನ್ನೆಲೆಯಲ್ಲಿ ಗಂಡ ಸತ್ತ 19 ದಿನಕ್ಕೆ ಚಂದ್ರಪ್ಪ ಎಂಬುವರನ್ನು ಮದುವೆಯಾಗಿದ್ದಾರೆ.