ಕೋಲಾರ:ನಗರ ಹೊರವಲಯದ ಟಮಕ ಮೇಲ್ಸೆತುವೆ ಮಾರ್ಗದಲ್ಲಿ ಬುಧವಾರ ರಾತ್ರಿ ಸುಮಾರು 10 ಗಂಟೆಯ ಸಂದರ್ಭದಲ್ಲಿ ಕೋಲಾರದ ಕಡೆಯಿಂದ ಹೋಗುತ್ತಿದ್ದ ಕಾರು ಮತ್ತು ಮುಳಬಾಗಿಲು ಕಡೆಯಿಂದ ಚಪ್ಪಡಿ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಓರ್ವ ತೀವ್ರವಾದ ಗಾಯಗಳಿಂದ ಸಾವನ್ನಪ್ಪಿದ್ದು, ಇಬ್ಬರು ತೀವ್ರವಾದ ಗಾಯಗಳಿಂದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರನ್ನು ಕೋಲಾರ ನಗರಸಭೆ ಮಾಜಿ ಸದಸ್ಯ ಎ.ಪ್ರಸಾದ್ ಬಾಬು ಸಹೋದರ ಡಾ.ಎ.ಶರವಣ್ ಕುಮಾರ್ (40) ಎಂದು ಗುರುತಿಸಲಾಗಿದೆ.

ಮೃತರು ಪತ್ನಿ, ಮಕ್ಕಳು ಆಪಾರ ಬಂಧು ಬಳಗ ಅಗಲಿದ್ದಾರೆ. ಡಾ.ಶರವಣ್ ಕುಮಾರ್ ಜೊತೆಯಲ್ಲಿದ್ದವರು ಹಾಗೂ ಟ್ರ್ಯಾಕ್ಟರ್ ಚಾಲಕ ತೀವ್ರಗಾಯಗಳಿಂದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದೆ. ಸಂಚಾರಿ ಪೊಲೀಸರು ಹಾಗೂ ಗಲ್‌ಪೇಟೆ ಪೊಲೀಸರ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.