ಕನ್ನಡಪ್ರಭ ವಾರ್ತೆ, ತುಮಕೂರುಸನಾತನ ಹಿಂದೂ ಸಂಸ್ಕೃತಿಯು ಕಟ್ಟುವ ಸಂಸ್ಕೃತಿ, ಕೆಡವುವ ಸಂಸ್ಕೃತಿಯಲ್ಲ, ಸರ್ವೇ ಜನ ಸುಖಿನೋ ಭವಂತು ಎನ್ನುವ ನಮ್ಮ ಸಂಸ್ಕೃತಿ ಎಲ್ಲರಿಗೂ ಲೇಸನ್ನೇ ಬಯಸುತ್ತದೆ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಸಮಿತಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕೋಟೆ ಶ್ರೀ ಆಂಜನೇಯಸ್ವಾಮಿ ಪ್ರಾರ್ಥನಾ ಮಂದಿರ ಲೋಕಾರ್ಪಣೆ ಅಂಗವಾಗಿ ಗುರುವಾರ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, . ಶ್ರೇಷ್ಠ ಸಂಸ್ಕೃತಿ ಅನುಸರಿಸುತ್ತಿರುವ ಹಿಂದೂಗಳು ಸಹನಾಶೀಲರು. ಆದರೆ, ಸಹನಾಶೀಲತೆ ಕೆಲವೊಮ್ಮೆ ಮಾರಕವೂ ಆಗಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ಕಚ್ಚುವುದು ಬೇಡ, ಕನಿಷ್ಠ ಬುಸ್ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಾಚೀನ ಕಾಲದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ತುಮಕೂರಿನ ಪ್ರಮುಖ ಭಕ್ತಿಕೇಂದ್ರ, ಶ್ರದ್ಧಾಕೇಂದ್ರವಾಗಿ ಪ್ರಸಿದ್ಧಿಯಾಗಿ ಅಪಾರ ಭಕ್ತರನ್ನು ಹೊಂದಿದೆ ಎಂದರು.

ದೇವಸ್ಥಾನ ಬಳಿ ನಿರ್ಮಿಸಿರುವ 75 ಅಡಿ ಎತ್ತರದ ಬೃಹತ್ ಆಂಜನೇಯಸ್ವಾಮಿ ಮೂರ್ತಿ ತುಮಕೂರಿನ ಕೀರ್ತಿಕಳಶವಾಗಿದೆ. ನಗರದ ಲ್ಯಾಂಡ್ ಮಾರ್ಕ್ ಆಗಿ ಖ್ಯಾತಿ ಪಡೆದಿದೆ. ದೇವಸ್ಥಾನದ ಕೋಟೆ ಆಂಜನೇಯಸ್ವಾಮಿ ಮೂರ್ತಿಯೂ ದೇಶದಲ್ಲೇ ಅಪರೂಪ ಎನ್ನಬಹುದಾದ ಲಕ್ಷಣದ ಮೂರ್ತಿಯಾಗಿದೆ. ಪ್ರಾರ್ಥನಾ ಮಂದಿರದಲ್ಲಿ ವಿಷ್ಣು ಸಹಸ್ರನಾಮ, ಲಲಿತ ಸಹಸ್ರನಾಮ, ಶಿವ ಸಹಸ್ರನಾಮದಂತಹ ವೇದಪೂರ್ಣ ಪೂಜಾ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿ ಎಂದು ಹಿರೇಮಠ ಸ್ವಾಮೀಜಿ ಸಲಹೆ ಮಾಡಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ವಿ.ಮಹದೇವಯ್ಯ, ಉಪಾಧ್ಯಕ್ಷ ಎಲ್.ವಿಜಯಕುಮಾರ್, ಕಾರ್ಯದರ್ಶಿ ಪಿ.ಆರ್.ಸಿದ್ಧಪ್ಪ, ಸಹ ಕಾರ್ಯದರ್ಶಿ ಎನ್.ಕೃಷ್ಣಮೂರ್ತಿ, ಖಜಾಂಚಿ ಟಿ.ವಿ.ಪಾರ್ಶ್ವನಾಥ್, ನಗರಪಾಲಿಕೆ ಮಾಜಿ ಸದಸ್ಯರಾದ ಟಿ.ಎಂ.ಮಹೇಶ್, ಟಿ.ಎ.ಬಾಲಕೃಷ್ಣ, ಮುಖಂಡರಾದ ಬಾವಿಕಟ್ಟೆ ಮಂಜುನಾಥ್, ಟಿ.ಸಿ.ಓಹಿಲೇಶ್ವರ್, ಸುರೇಶ್ ರಾವ್, ಸಮಿತಿ ನಿರ್ದೇಶಕರಾದ ಟಿ.ಕೆ.ಶಿವಶಂಕರ್, ಕೆ.ಎಂ.ಪಟೇಲ್, ಶಾಂತರಾಜು, ಎಸ್.ಪಿ.ಚಿದಾನಂದ್, ಮಹೇಂದ್ರಕುಮಾರ್, ಟಿ.ಕೆ.ಶಾಂತಪ್ರಸಾದ್, ಕೆ.ಎಸ್.ನಾಗೇಶ್, ಅರುಣ್ ಹೆಬ್ಬಾರ್, ಕೆ.ಆರ್.ಪ್ರಸನ್ನಕುಮಾರ್, ಟಿ.ವಿ.ಶ್ರೀನಿವಾಸಮೂರ್ತಿ, ಕೆ.ರಂಗನಾಥ್, ಎಸ್.ಜಗದೀಶ್, ಟಿ.ಜಿ.ಪ್ರಸನ್ನಕುಮಾರ್, ಟಿ.ವಿ.ದೀಪಕ್ ಮೊದಲಾದವರು ಭಾಗವಹಿಸಿದ್ದರು. ಇದರ ಅಂಗವಾಗಿ ಪ್ರಾರ್ಥನಾ ಮಂದಿರದಲ್ಲಿ ಬೆಳಿಗ್ಗೆ ಶ್ರೀನಿವಾಸಾಚಾರ್ಯರು ಹಾಗೂ ವೃಂದದವರು ಮತ್ತು ದೇವಸ್ಥಾನದ ಪ್ರಧಾನ ಅರ್ಚಕರಾದ ಪಟ್ಟಾಭಿರಾಮಾಚಾರ್ಯರ ನೇತೃತ್ವದಲ್ಲಿ ಸುಪ್ರಭಾತ ಸೇವೆ, ವೇದಪಾರಾಯಣ, ಕಳಸಾರಾಧನೆ, ಶ್ರೀರಾಮತಾರಕ ಹೋಮ, ಆಂಜನೇಯಸ್ವಾಮಿ ಮೂಲಮಂತ್ರ ಹೋಮ, ಮಹಾಸುದರ್ಶನ ಹೋಮ, ಶಾಂತಿಹೋಮ, ಪೂರ್ಣಾಹುತಿ, ಮಂತ್ರಪುಷ್ಪ ಅಷ್ಠಾವಧಾನಸೇವೆ ಮುಂತಾದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ನೆರವಾದ ದಾನಿಗಳನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.