ಮೈತ್ರಿ ಅಭ್ಯರ್ಥಿ ರಂಗನಾಥರನ್ನು ಗೆಲ್ಲಿಸಿ

| Published : Feb 08 2024, 01:36 AM IST

ಸಾರಾಂಶ

ಕನಕಪುರ: ಬೆಂಗಳೂರು ವಿಶ್ವವಿದ್ಯಾಲಯದ ಸದಸ್ಯನಾಗಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಹಲವರ ಹೋರಾಟಗಳಲ್ಲಿ ಭಾಗಿಯಾಗಿ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠರಾದ ದೇವೇಗೌಡರ ನೇತೃತ್ವದಲ್ಲಿ ಹೋರಾಟ ನಡೆಸಿದ್ದರು.

ಕನಕಪುರ: ಬೆಂಗಳೂರು ವಿಶ್ವವಿದ್ಯಾಲಯದ ಸದಸ್ಯನಾಗಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಹಲವರ ಹೋರಾಟಗಳಲ್ಲಿ ಭಾಗಿಯಾಗಿ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠರಾದ ದೇವೇಗೌಡರ ನೇತೃತ್ವದಲ್ಲಿ ಹೋರಾಟ ನಡೆಸಿದ್ದರು. ಶಿಕ್ಷಕರು ಹಾಗೂ ವಕೀಲರನ್ನು ಎರಡು ಕಣ್ಣುಗಳಂತೆ ಕಾಣುತ್ತಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ.ಪಿ. ರಂಗನಾಥ್ ಅವರಿಗೆ ಈ ಬಾರಿ ಬೆಂಬಲ ನೀಡುವಂತೆ ಜೆಡಿಎಸ್ ತಾಲೂಕು ಅಧ್ಯಕ್ಷ ಬಿ. ನಾಗರಾಜು ತಿಳಿಸಿದರು.

ತಾಲೂಕಿನ ಹುಣಸನಹಳ್ಳಿಯಲ್ಲಿ ಎಂ.ಪಿ. ರಂಗನಾಥ್ ಪರ ಶಿಕ್ಷಕರು ಮತಯಾಚಿಸಿ ಮಾತನಾಡಿ, ಎಂ.ಪಿ. ರಂಗನಾಥ್ ತಮ್ಮ ವೃತ್ತಿ ಜೀವನದಲ್ಲಿ ವಕೀಲರ ಸಮಸ್ಯೆಗಳ ಜೊತೆಗೆ ಅನುದಾನಿತ ಮತ್ತು ಖಾಸಗಿ ಶಾಲಾ, ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೂ ಆರೋಗ್ಯ ವಿಮೆ ನೀಡಬೇಕೆಂದು ಒತ್ತಾಯಿಸಿ, ಎನ್ ಪಿಎಸ್‌ ಹೋರಾಟದಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ಶಿಕ್ಷಕರ ಬೆಂಬಲಕ್ಕೆ ನಿಂತಿದ್ದರು.

ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಶೇ. 25 ರಷ್ಟು ಮೀಸಲಾತಿ ಕಲ್ಪಿಸುವಂತೆ ಹೋರಾಡಿದ್ದಲ್ಲದೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾಯಂ ಆಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಲ್ಯಾಣ ನಿಧಿಯಿಂದ ಅರೋಗ್ಯ ಸೇವೆ ಕಲ್ಪಿಸುವುದು, ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ಸಮಸ್ಯೆ, ಮುಂಬಡ್ತಿ ವಿಳಂಬ ನೀತಿ, ದೋಷಪೂರಿತ ವರ್ಗಾವಣೆ ನೀತಿ, ಪಿಯು ಇಲಾಖೆಯ ಅಳಿವು-ಉಳಿವು ಸೇರಿ ಹಲವು ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅವರ ಬಯಕೆಯಾಗಿದೆ ಎಂದು ಹೇಳಿದರು.

ಇದಕ್ಕೆ ತಕ್ಕಂತೆ ಅಧಿಕಾರ, ಸ್ಥಾನಗಳಿದ್ದರೆ ಹೆಚ್ಚಿನ ಜನಪರ ಹಾಗೂ ಶೈಕ್ಷಣಿಕ ಕೆಲಸಗಳನ್ನು ಮಾಡಬಹುದು. ಆದ್ದರಿಂದ ಶಿಕ್ಷಕರು ಈ ಬಾರಿ ಮೈತ್ರಿ ಅಭ್ಯರ್ಥಿ ರಂಗನಾಥ್ ಗೆ ಆಶೀರ್ವದಿಸುವಂತೆ ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಯುವ ಉಪಾಧ್ಯಕ್ಷ ಚಿನ್ನಸ್ವಾಮಿ, ಸಿದ್ದ ಮರೀಗೌಡ ಸೇರಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. (ಫೋಟೋ ಕ್ಯಾಪ್ಷನ್‌)

ಕನಕಪುರ ತಾಲೂಕಿನ ಹುಣಸನಹಳ್ಳಿಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂ.ಪಿ. ರಂಗನಾಥ್ ಪರ ಮತಯಾಚಿಸಿದ ಜೆಡಿಎಸ್ - ಬಿಜೆಪಿ ಮುಖಂಡರು.