- ಏಜೆನ್ಸಿಯಿಂದ ಹಳ್ಳಿಗಳಿಗೆ ಸರಿಯಾಗಿ ಸಿಲಿಂಡರ್ ಹಂಚಿಕೆಯಿಲ್ಲ: ಆರೋಪ
--ಕನ್ನಡಪ್ರಭ ವಾರ್ತೆ ಹನೂರು
ಸರ್ಕಾರ ರಾಜ್ಯದ ಗಡಿಯಂಚಿನ ಮಿಣ್ಯಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾಗಮ್ಮ ಗ್ಯಾಸ್ ಏಜೆನ್ಸಿ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಮಾಲೀಕರು ಮಾತ್ರ ಕಾಡಂಚಿನ ಗ್ರಾಮಗಳಿಗೆ ಸಮರ್ಪಕ ಗ್ಯಾಸ್ ವಿತರಿಸದೆ ರಾಮಪುರ ಗ್ರಾಮದ ತಮ್ಮ ಮನೆಯ ಮುಂದೆ ಗ್ಯಾಸ್ ವಿತರಣೆ ಮಾಡುತ್ತಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಕಳೆದ 8 ವರ್ಷಗಳ ಹಿಂದೆ ಮಿಣ್ಯಂ ಗ್ರಾಮದಲ್ಲಿ ರಾಮಾಪುರ ಗ್ರಾಮದ ಪ್ರಸಾದ್ ಎಂಬುವವರು ನಾಗಮ್ಮ ಗ್ಯಾಸ್ ಏಜೆನ್ಸಿಯನ್ನು ಪ್ರಾರಂಭಿಸಿದ್ದರು. ಪ್ರಾರಂಭವಾದ ಸಂದರ್ಭಗಳಲ್ಲಿ ಮಿಣ್ಯಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರು ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದರು.ನಾಗಮ್ಮ ಭಾರತ್ ಗ್ಯಾಸ್ ಏಜೆನ್ಸಿ ತೆರೆದ ಮಾಲೀಕರು ಕೆಲವೇ ತಿಂಗಳಲ್ಲಿ ಇವರ ಕಚೇರಿಯನ್ನು ರಾಮಪುರಕ್ಕೆ ವರ್ಗಾಯಿಸಿದರು. ಈ ವೇಳೆ ಸಾರ್ವಜನಿಕರು ಪ್ರಶ್ನಿಸಿದಾಗ ಮಿಣ್ಯಂ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದಿದ್ದರಿಂದ ಬಿಲ್ ತೆಗೆಯಲು ಆಗುತ್ತಿಲ್ಲ. ಸ್ವಲ್ಪ ದಿನದ ಮಟ್ಟಿಗೆ ಸಹಕರಿಸಿ ಎಂದು ಮನವಿ ಮಾಡಿಕೊಂಡ ಹಿನ್ನೆಲೆ ಗ್ರಾಹಕರು ಸಹ ಸರ್ವರ್ ಸಮಸ್ಯೆ ಇರಬಹುದು ಎಂದು ಒಪ್ಪಿಕೊಂಡಿದ್ದರು.ಆದರೆ, ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ನಾಗಮ್ಮ ಗ್ಯಾಸ್ ಏಜೆನ್ಸಿ ಮಾಲೀಕರಾದ ಪ್ರಸಾದ್ರವರು ಇವರು ಗ್ರಾಹಕರಿಗೆ ನೀಡಲು ಸರಬರಾಜು ಆಗುತ್ತಿದ್ದ. ಗ್ಯಾಸ್ ಸಿಲಿಂಡರ್ಗಳನ್ನು ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ತಮ್ಮ ಮನೆಯ ಮುಂದೆ ಗ್ಯಾಸ್ ಸಿಲಿಂಡರ್ಗಳನ್ನು ಶೇಖರಣೆ ಮಾಡಿ ಗ್ರಾಹಕರಿಗೆ ವಿತರಿಸುತ್ತಿದ್ದರು. ಈ ಸಂಬಂಧ ಸಂಬಂಧಪಟ್ಟ ಆಹಾರ ಮತ್ತು ಸರಬರಾಜು ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಹನೂರು ತಾಲೂಕಿನ ತಹಸಿಲ್ದಾರ್ರಿಗೆ, ತಾಲೂಕು ಆಹಾರ ನಿರೀಕ್ಷಕರಿಗೆ ಹಲವಾರು ಬಾರಿ ದೂರು ನೀಡಿದ್ದರು ರಾಜಕೀಯ ಒತ್ತಡಕ್ಕೆ ಮಣಿದು ಯಾವುದೇ ಪ್ರಕರಣಗಳು ದಾಖಲಾಗಿಲ್ಲ.ಇದೀಗ ಮಧ್ಯಪ್ರಾಂತ್ಯದಲ್ಲಿ ಯುದ್ಧ ನಡೆದು ಗ್ರಾಹಕರಿಗೆ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ಗಳು ಸಿಗುತ್ತಿಲ್ಲ. ಇದರ ನಡುವೆಯೂ ಇವರ ಮನೆಯ ಮುಂದೆಯೇ ಕಾನೂನು ಬಾಹಿರವಾಗಿ ಸಿಲಿಂಡರ್ ಶೇಖರಣೆ ಮಾಡಿ ಇವರಿಗೆ ಬೇಕಾದವರಿಗೆ ಹಂಚಿಕೆ ಮಾಡುತ್ತಿದ್ದಾರೆ. ಜನಸಾಮಾನ್ಯರಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ನಾಗಮ್ಮ ಗ್ಯಾಸ್ ಏಜೆನ್ಸಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.---
ಗ್ಯಾಸ್ ಏಜೆನ್ಸಿ ಮಾಲೀಕರು ಅನುಮತಿ ಪಡೆದ ಸ್ಥಳದಲ್ಲಿಯೇ ಗ್ಯಾಸ್ ವಿತರಣೆ ಮಾಡಬೇಕು. ಒಂದೊಮ್ಮೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ವಿತರಿಸುತ್ತಿದ್ದರೆ, ಅಂತಹವರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು. -ವಸುಂಧರ, ಉಪ ನಿರ್ದೇಶಕರು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಇಲಾಖೆ
---