ಟೇಕಲ್: ಪ್ರೀತಿಯ ನಾಟಕವಾಡಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದು, ಅತ್ಯಾಚಾರಕ್ಕೊಳಗಾದ ಮಹಿಳೆಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಮಾಸ್ತಿ ಪೊಲೀಸ್ ಠಾಣೆಯ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಎ.ಜಿ.ಕಾಲೋನಿ ರಂಜಿತಾ ಎನ್.ರನ್ನು ಕೂರ್ನಹೊಸಹಳ್ಳಿ ಮಂಜುನಾಥ ಅತ್ಯಾಚಾರ ಮಾಡಿ ಏಳು ತಿಂಗಳ ಗರ್ಭಿಣಿಯನ್ನಾಗಿ ಮಾಡಿದ್ದು, ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.ಪ್ರಕರಣದಲ್ಲಿ ನ್ಯಾಯ ದೊರಕುವವರೆಗೂ ಹೋರಾಟ ಕೈಬಿಡಲ್ಲವೆಂದು ಪ್ರತಿಭಟನಾಕಾರರು ಎಚ್ಚರಿಸಿದರು. ಸುಡು ಬಿಸಿಲಿನ ನಡುವೆಯೂ ಸಂತ್ರಸ್ತೆ ಪರ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಎದುರು ಕುಳಿತು ನ್ಯಾಯಕ್ಕಾಗಿ ಧರಣಿ ನಡೆಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಮನವೊಲಿಸಲು ಪ್ರಯತ್ನಿಸಿದರು. ಆದರೆ, ಆರೋಪಿಯನ್ನು ಬಂಧಿಸಿ, ಸಂತ್ರಸ್ತೆಗೆ ನ್ಯಾಯ ಒದಗಿಸುವ ಬಗ್ಗೆ ಸ್ಪಷ್ಟ ಭರವಸೆ ಸಿಗದ ಕಾರಣ ಪ್ರತಿಭಟನೆ ಹಿಂತೆಗೆದುಕೊಳ್ಳಲು ಸಂಘಟನೆಗಳು ನಿರಾಕರಿಸಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾಕಾರರು ಮಾತನಾಡಿ, ಸಂತ್ರಸ್ತೆಗೆ ನ್ಯಾಯ ಸಿಗದಿದ್ದರೆ ದಿನಗಳಲ್ಲಿ ಅರೆಬೆತ್ತಲೆ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು. ಅಗತ್ಯವಿದ್ದರೆ ರಸ್ತೆತಡೆ ನಡೆಸಿ ಹೋರಾಟ ತೀವ್ರಗೊಳಿಸಲಾಗುವುದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸ್ಥಳಕ್ಕೆ ಬಂದು ನ್ಯಾಯ ಒದಗಿಸುವ ಬಗ್ಗೆ ಖಚಿತ ಭರವಸೆ ನೀಡುವವರೆಗೂ ಧರಣಿ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ತಿಪ್ಪಸಂದ್ರ ಶ್ರೀನಿವಾಸ್, ಎ.ಕೆ.ವೆಂಕಟೇಶ್, ಕುಪ್ಪೂರು ಈಶ್ವರ್, ದೊಡ್ಡಮಲ್ಲೆ ರವಿ, ನಾರಾಯಣಸ್ವಾಮಿ, ಕಲ್ಕೇರಿ ಮುನಿರಾಜ್, ದೊಡ್ಡಕಲ್ಲಹಳ್ಳಿ ವೆಂಕಟೇಶ್, ಆಂಜಿನಪ್ಪ, ಮಾಸ್ತಿ ಕಾಲೋನಿ ನಾಗರಾಜ್, ರಮೇಶ್ ಇದ್ದರು.