ಹಿಂದೂ ನಾಯಕರ ಮನೆಗೆ ತನಿಖೆಗೆ ರಾತ್ರಿ ಬರಬೇಡಿ: ಮಹಿಳಾ ನಿಯೋಗ ಮನವಿ

| Published : Jun 05 2025, 11:47 PM IST

ಸಾರಾಂಶ

ಯಾವುದೇ ಅಪರಾಧ ಚಟುವಟಿಕೆಗಳಲ್ಲಿ‌ ಭಾಗಿಯಾಗದಿರುವ ಹಿಂದೂ ನಾಯಕರ ಮನೆಗೆ ರಾತ್ರಿ ವೇಳೆ ನುಗ್ಗುವುದನ್ನು ಪೊಲೀಸ್ ಇಲಾಖೆ ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಮಹಿಳೆಯರ ನಿಯೋಗವೊಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಯಾವುದೇ ಅಪರಾಧ ಚಟುವಟಿಕೆಗಳಲ್ಲಿ‌ ಭಾಗಿಯಾಗದಿರುವ ಹಿಂದೂ ನಾಯಕರ ಮನೆಗೆ ರಾತ್ರಿ ವೇಳೆ ನುಗ್ಗುವುದನ್ನು ಪೊಲೀಸ್ ಇಲಾಖೆ ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಮಹಿಳೆಯರ ನಿಯೋಗವೊಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.ಬಂಟ್ವಾಳ ನಗರ ಹಾಗೂ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಬೇಟಿ ನೀಡಿದ ಮಹಿಳೆಯರ ತಂಡ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮತ್ತು ಪರಿವಾರದ ವಿವಿಧ ಹಿಂದೂ ಪರ ಸಂಘಟನೆಯ ಕಾರ್ಯಕತರ ಮನೆಗೆ ವಿನಾ ಕಾರಣ ಪೋಲಿಸರು ಕಾನೂನು ಬಾಹಿರವಾಗಿ ಅಪರಾತ್ರಿಯಲ್ಲಿ ಮನೆಗಳಿಗೆ ನುಗ್ಗಿ ಅಮಾನವೀಯವಾಗಿ ವರ್ತಿಸಲಾಗುತ್ತಿದೆ. ವೈಯಕ್ತಿಕ ಛಾಯಾ ಚಿತ್ರಗಳನ್ನು ತೆಗೆದು, ಮನೆಯ ಜಿ.ಪಿ.ಎಸ್ ದಾಖಲಿಸಿ ಭಯ ಮತ್ತು ಆತಂಕ ನಿರ್ಮಿಸಿ ನಮ್ಮ ಖಾಸಗಿ ಜೀವನಕ್ಕೆ ಮತ್ತು ಮೂಲಭೂತ ಹಕ್ಕುಗಳಿಗೆ ದಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದರಿಂದಾಗಿ ಮನೆಯಲ್ಲಿ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಇರುವ ಸಮಯದಲ್ಲಿ ನಿಮ್ಮ ಕಾನೂನು ಬಾಹಿರ ವರ್ತನೆ ನಮ್ಮ ಖಾಸಗಿ ಜೀವನಕ್ಕೆ ಮತ್ತು ನಮ್ಮ ಸಂವಿಧಾನಿಕ ಮೂಲಭೂತ ಹಕ್ಕುಗಳಿಗೆ ಧಕ್ಕೆ ತಂದಿರುತ್ತದೆ. ಅಪರಾತ್ರಿಯಲ್ಲಿ ಪೋಲೀಸ್ ನವರು ಮನೆಗೆ ಬರುವುದರಿಂದ ಮನೆಯಲ್ಲಿರುವ ವಯಸ್ಸಾದ ಹಿರಿಯರು ಮತ್ತು ಹೆಣ್ಣು ಮಕ್ಕಳು ಭಯ ಪಟ್ಟುಕೊಳ್ಳುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಪ್ರಮುಖರಾದ ಗಿರಿಜ, ಪೂರ್ಣಿಮಾ, ಲಖಿತಾ ಆರ್.ಶೆಟ್ಟಿ, ಸುಲೋಚನ ಭಟ್ ಜಿ‌.ಕೆ.ಭಟ್, ಹರ್ಷಿಣಿ ಪುಂಜಾಲಕಟ್ಟೆ, ಜಯಶ್ರೀ, ಭವಾನಿ, ರೂಪ ಮತ್ತಿತರರು ಇದ್ದರು.