ಕನ್ನಡಪ್ರಭ ವಾರ್ತೆ ಶಿರಸಿ

ತಾಲೂಕಿನ ಉಂಚಳ್ಳಿ ಗ್ರಾಮದ ಸರಸ್ವತಿ ಫಾರ್ಮ್‌ನ ತುಡ್ವಿಮನೆಯ ಭತ್ತದ ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆದ 3ನೇ ವರ್ಷದ ನಾಟಿ ಹಬ್ಬ ಕಾರ್ಯಕ್ರಮಕ್ಕೆ ಕರ್ನಾಟಕದ ಜೀವ ವೈವಿಧ್ಯಮಂಡಳಿಯ ಅಧ್ಯಕ್ಷ ವಡ್ನಾಳ್ ಜಗದೀಶ್ ಮಂಗಳವಾರ ಚಾಲನೆ ನೀಡಿದರು.

ಹಾವೇರಿ ಜಿಲ್ಲೆಯ ಅಗಡಿ ಅಕ್ಕಿ ಮಠದ ಡಾ. ಗುರುಲಿಂಗ ಸ್ವಾಮಿಗಳ ಸಾನಿಧ್ಯದಲ್ಲಿ ಸಹ್ಯಾದ್ರಿ ಸಮುದಾಯ ಅಭಿವೃದ್ಧಿ ಹಾಗೂ ಮಹಿಳಾ ಸಶಕ್ತಿಕರಣ (ಸ್ಕೊಡ್‌ವೆಸ್‌) ಸಂಸ್ಥೆಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕೆಎಂಎಫ್ ಆಡಳಿತಾಧಿಕಾರಿ ಡಾ. ಎಂ.ವಿ ವೆಂಕಟೇಶ ಬೀಜಸಂಪದ ಎಂಬ ಪುಸ್ತಕ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಆಹಾರವೇ ಭಾಗ್ಯ. ಒಬ್ಬ ಮನುಷ್ಯ ಆರೋಗ್ಯವಂತನಾಗಬೇಕಾದರೆ ಅವನು ಗುಣಮಟ್ಟದ ಆಹಾರ ಸೇವಿಸಬೇಕು. ಈ ಸದುದ್ದೇಶದಿಂದ ಭತ್ತದ 38 ಪಾರಂಪರಿಕ ತಳಿಯ ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ರೈತರಿಗೆ ನೀಡಿ ಪಾರಂಪರಿಕ ಭತ್ತದ ಬೆಳೆಗಳಿಗೆ ಉತ್ತೇಜನ ನೀಡಿ ರಾಜ್ಯದ ಮತ್ತು ದೇಶದ ಜನರಿಗೆ ಉತ್ತಮ ಆಹಾರ ಒದಗಿಸುವುದು ಅತ್ಯಂತ ಶ್ರೇಷ್ಠವಾದ ಕೆಲಸ ಎಂದರು.

ನಂತರ ಭೂಮಿತಾಯಿಗೆ ಗದ್ದೆಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು, ಪ್ರಗತಿಪರ ಕೃಷಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವತಃ ಗದ್ದೆಗಿಳಿದು ಭತ್ತದ ನಾಟಿ ಮಾಡಿದರು.


ಈ ಕೃಷಿಹಬ್ಬದಲ್ಲಿ ವಿವಿಧ ಭತ್ತದ ತಳಿಗಳ ಪ್ರದರ್ಶನ ಹಾಗೂ ಸಾವಯವ ಹಾಗೂ ದೇಸಿ ಆಹಾರ ವೈವಿಧ್ಯದ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.

ಈ ಸಂದರ್ಭ ಡಾ. ಸದಾನಂದ, ಸ್ಕೊಡ್‌ವೆಸ್‌ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್., ಕೆವಿಕೆ ರೂಪಾ ಪಾಟೀಲ್, ಕೆನರಾ ಬ್ಯಾಂಕ್ ಎಜಿಎಂ ಲೋಕೇಶ್, ಡಾ. ಸಿ.ಕೆ. ವೇಣುಗೋಪಾಲ್, ಪುಷ್ಪಾ ನಾಗಭೂಷಣ್, ರಾಮನಗೌಡ ಪಾಟೀಲ್, ವಿಶ್ವೇಶ್ವರ ವಿ.ಬಿ., ಶಿವಪ್ರಸಾದ್, ಎಸ್.ಎಸ್. ಭಟ್ ಸೇರಿದಂತೆ ನೂರಾರು ರೈತರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.