ಮಹಿಳೆಯರು ಹಕ್ಕು, ಕರ್ತವ್ಯ ಪಡೆಯಲು ಜಾಗೃತರಾಗಲಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್

| Published : Mar 13 2025, 12:45 AM IST

ಮಹಿಳೆಯರು ಹಕ್ಕು, ಕರ್ತವ್ಯ ಪಡೆಯಲು ಜಾಗೃತರಾಗಲಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಮಹಿಳೆ ತನ್ನ ಜವಾಬ್ದಾರಿಯನ್ನು ಅರಿತು ಎಲ್ಲ ರಂಗದಲ್ಲೂ ತನ್ನ ಹಕ್ಕು ಚಲಾಯಿಸುತ್ತಿದ್ದಾಳೆ. ಎಲ್ಲ ರಂಗದಲ್ಲೂ ಪಾಲ್ಗೊಂಡು ತನ್ನ ಆಸ್ತಿತ್ವವನ್ನು ಕಾಯ್ದುಕೊಳ್ಳುತ್ತಿದ್ದಾಳೆ.

ಹಾವೇರಿ: ಮಹಿಳೆ ತನ್ನ ಆಸ್ತಿತ್ವವನ್ನು ತಾನೇ ಕಂಡುಕೊಳ್ಳಬೇಕು. ಬೇರೆಯವರ ಮೇಲೆ ಅವಲಂಬಿತರಾಗದೆ ತನ್ನ ಹಕ್ಕು ಹಾಗೂ ಕರ್ತವ್ಯಗಳನ್ನು ಪಡೆದುಕೊಳ್ಳಲು ಜಾಗೃತರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ತಿಳಿಸಿದರು.ನಗರದ ಶಿಶು ಅಭಿವೃದ್ಧಿ ಇಲಾಖೆ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇಂದು ಮಹಿಳೆ ತನ್ನ ಜವಾಬ್ದಾರಿಯನ್ನು ಅರಿತು ಎಲ್ಲ ರಂಗದಲ್ಲೂ ತನ್ನ ಹಕ್ಕು ಚಲಾಯಿಸುತ್ತಿದ್ದಾಳೆ. ಎಲ್ಲ ರಂಗದಲ್ಲೂ ಪಾಲ್ಗೊಂಡು ತನ್ನ ಆಸ್ತಿತ್ವವನ್ನು ಕಾಯ್ದುಕೊಳ್ಳುತ್ತಿದ್ದಾಳೆ. ಇದು ಉತ್ತಮ ಬೆಳವಣಿಗೆಯಾಗಿದೆ. ಮಹಿಳೆ ತನ್ನನ್ನು ತಾನು ಅರಿಯಲು ಮತ್ತು ತನ್ನನ್ನು ತಾನು ತಿಳಿದುಕೊಳ್ಳಲು ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್. ಮುತಾಲಿಕದೇಸಾಯಿ ಮಾತನಾಡಿ, ಸಮಾಜದಲ್ಲಿ ಮಹಿಳಾ ಪ್ರಾಶಸ್ತ್ಯವನ್ನು ಗುರುತಿಸುವುದು ತುಂಬಾನೇ ಮುಖ್ಯವಾಗಿದೆ. ಮಹಿಳೆ ಇಲ್ಲದೆ ಈ ಜಗತ್ತು ಹಾಗೂ ಸಮಾಜವನ್ನು ಕಲ್ಪನೆ ಮಾಡಿಕೊಳ್ಳುವುದು ಅಸಾಧ್ಯವಾಗಿದೆ. ಸಮಾಜ ಮತ್ತು ಕುಟುಂಬ ಸುವ್ಯವಸ್ಥಿತವಾಗಿ ನಡೆಯಬೇಕಾದರೆ ಮಹಿಳಾ ಸಹಾಭಾಗಿತ್ವ ತುಂಬಾ ಅವಶ್ಯಕವಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್. ಮಾತನಾಡಿ, ಸಮಾಜದಲ್ಲಿ ಮಹಿಳೆ ಮಾಡದಿರುವ ಕೆಲಸಗಳಿಲ್ಲ. ಇಂದು ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಜಿಲ್ಲೆಯಲ್ಲಿ ಶೇ. 53ರಷ್ಟು ಉದ್ಯೋಗಸ್ಥ ಮಹಿಳೆರಿರುವುದು ವಿಶೇಷವಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲರಾದ ಆರ್.ಐ. ಚನ್ನಪಟ್ಟಣ ಅವರು ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರ ಕುರಿತು ವಿಶೇಷ ಉಪನ್ಯಾಸ ನೀಡಿದರು.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕಿ ಮಮತಾ ಹೊಸಗೌಡ್ರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಎಚ್., ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿ.ಎಸ್. ಹೆಬ್ಬಾಳ ಹಾಗೂ ಇತರರು ಉಪಸ್ಥಿತರಿದ್ದರು.