ಸಾರಾಂಶ
ತಾಲೂಕಿನ ಲೋಕನಾಥಪುರದ ಪಿಕಾರ್ಡ್ ಬ್ಯಾಂಕ್ ಕರಿಮನೆ ಇದರ ಆಡಳಿತ ಮಂಡಳಿ ಸೋಮವಾರ ಕಿಗ್ಗ ಋಷ್ಯಶೃಂಗ ದೇವಸ್ಥಾನದಲ್ಲಿ ವರುಣ ದೇವನ ಆಗಮನಕ್ಕಾಗಿ ಶತರುದ್ರಾಭಿಷೇಕ, ಅರ್ಜನ್ಯ ಜಪ ಮುಂತಾದ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿತು.
ಕೊಪ್ಪ: ತಾಲೂಕಿನ ಲೋಕನಾಥಪುರದ ಪಿಕಾರ್ಡ್ ಬ್ಯಾಂಕ್ ಕರಿಮನೆ ಇದರ ಆಡಳಿತ ಮಂಡಳಿ ಸೋಮವಾರ ಕಿಗ್ಗ ಋಷ್ಯಶೃಂಗ ದೇವಸ್ಥಾನದಲ್ಲಿ ವರುಣ ದೇವನ ಆಗಮನಕ್ಕಾಗಿ ಶತರುದ್ರಾಭಿಷೇಕ, ಅರ್ಜನ್ಯ ಜಪ ಮುಂತಾದ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿತು. ಪೂಜಾ ಕಾರ್ಯಕ್ರಮದ ನಂತರ ಮಾಹಿತಿ ನೀಡಿದ ಬ್ಯಾಂಕಿನ ವಿಷಯ ಪರಿಣಿತ ನಿರ್ದೇಶಕ ಎಚ್.ಎಂ.ನಟರಾಜ್ ಮಾತನಾಡಿ ಈ ಬಾರಿ ಮಳೆ ಕೊರತೆಯಿಂದ ಬರಗಾಲ ಬಂದಿದ್ದು ನೀರಿಲ್ಲದೆ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ಬೆಳೆಗಳೆಲ್ಲ ಒಣಗುತ್ತಿದೆ. ಕೆಲವೆಡೆ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಿಗ್ಗ ಋಷ್ಯಶೃಂಗ ದೇವರು ಮಳೆಯ ದೇವರೆಂದೇ ಪ್ರಸಿದ್ಧಿಯಾಗಿದ್ದು ಈ ಹಿಂದೆ ಅನೇಕ ಬಾರಿ ಬರಗಾಲದ ಸ್ಥಿತಿ ನಿರ್ಮಾಣವಾಗಿದ್ದಾಗ ರಾಜ್ಯ ನಾಯಕರು ಕೂಡ ಇಲ್ಲಿ ಬಂದು ಪೂಜೆ ಸಲ್ಲಿಸಿದ ಇತಿಹಾಸವಿದೆ. ಅದರಿಂದ ಬ್ಯಾಂಕ್ ಆಡಳಿತ ಮಂಡಳಿ ಲೋಕ ಕಲ್ಯಾಣಾರ್ಥವಾಗಿ ದೇವರಿಗೆ ಅಭಿಷೇಕ ಮತ್ತು ಅರ್ಜನ್ಯ ಜಪವನ್ನು ಮಾಡಿಸಲಾಗಿದೆ ಎಂದರು.
ಬ್ಯಾಂಕಿನ ಅಧ್ಯಕ್ಷ ಗೋಪಾಲಕೃಷ್ಣ, ಸಿಇಒ ವಿಕ್ಟೋರಿಯಾ ಕರ್ವಾಲ್, ನಿರ್ದೇಶಕರಾದ ಲಕ್ಷ್ಮಿನಾರಾಯಣ (ಮುದ್ದಣ್ಣ), ಪ್ರವೀಣ್, ಕಿರಣ್ ಹೆಬ್ಬಾರ್, ವಿನಯ, ವೆಂಕಟೇಶ್.ಎಂ.ಎಸ್., ಎ.ಟಿ.ಶ್ರೀನಿವಾಸ್, ಅಶ್ವಥ್ ಮುಂತಾದವರಿದ್ದರು.